ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ ವಿಫಲನಾಗಿ ತಾನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ !
![ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ ವಿಫಲನಾಗಿ ತಾನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ! ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ ವಿಫಲನಾಗಿ ತಾನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ !](https://www.varthabharati.in/sites/default/files/images/articles/2022/03/29/329875-1648571488.jpg)
ಕೋಝಿಕ್ಕೋಡ್(ಕೇರಳ), ಮಾ. 29: ವಿವಾಹವಾಗಲು ಬಯಸಿದ ಯುವತಿಗೆ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿ ವಿಫಲನಾದ 42 ವರ್ಷದ ವ್ಯಕ್ತಿಯೋರ್ವ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ನಂದಪುರಂ ವಲಯಂನ ರತ್ನೇಶ್ ಎಂದು ಗುರುತಿಸಲಾಗಿದೆ. ಈತ ಯುವತಿಯನ್ನು ವಿವಾಹವಾಗಲು ಬಯಸಿದ್ದ. ಆದರೆ, ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಆಕೆಯ ವಿವಾಹವನ್ನು ಇನ್ನೋರ್ವ ವ್ಯಕ್ತಿಯೊಂದಿಗೆ ನಿಗದಿಪಡಿಸಿದ್ದರು. ಇಲ್ಲಿನ ನಾದಾಪುರಂ ಸಮೀಪದ ಜತಿಯೇರಿಯಲ್ಲಿರುವ ಯುವತಿಯ ಮನೆಯಲ್ಲಿ ಈ ಘಟನೆ ನಡೆದಿದೆ.
ಎಲೆಕ್ಟ್ರಿಶಿಯನ್ ವೃತ್ತಿ ನಿರ್ವಹಿಸುತ್ತಿದ್ದ ರತ್ನೇಶ್ ಮುಂಜಾನೆ 2.30ಕ್ಕೆ ಮನೆಗೆ ಏಣಿ ಇರಿಸಿ ಮೊದಲ ಮಹಡಿಗೆ ಏರಿ ಯುವತಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಆದರೆ, ವಿಫಲನಾಗಿ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಕಿ ತಗುಲಿ ಯುವತಿ, ಆಕೆಯ ಸಹೋದರ, ನಾದಿನಿಗೆ ಅಲ್ಪಸ್ಪಲ್ಪ ಗಾಯಗಳಾಗಿವೆ. ಅವರು ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.