ಮಾರ್ಚ್ 31ರಂದು ಸಿದ್ದಗಂಗಾ ಮಠಕ್ಕೆ ರಾಹುಲ್ಗಾಂಧಿ ಭೇಟಿ: ಡಾ.ಜಿ.ಪರಮೇಶ್ವರ್

ತುಮಕೂರು.ಮಾ.29:ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಿಸಿಕೊಳ್ಳುತ್ತಿದ್ದ ಸಿದ್ದಗಂಗಾ ಮಠದ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ 115ನೇ ಗುರುವಂಧನಾ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 31 ರಂದು ಸಂಜೆ ಎಐಸಿಸಿ ಮಾಜಿ ಉಪಾಧ್ಯಕ್ಷ ಹಾಗೂ ಸಂಸದ ರಾಹುಲ್ಗಾಂಧಿ ಅವರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಎಐಸಿಸಿ, ಕೆ.ಪಿ.ಸಿ.ಸಿ.ಯ ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಕಮಿಟಿ ವತಿಯಿಂದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಸೇರಿ ಪಕ್ಷದ ಅಣತಿಯಂತೆ ರಾಹುಲ್ಗಾಂಧಿಯವರ ಸ್ವಾಗತಕ್ಕೆ ಸಿದ್ದತೆ ನಡೆಸಲಾಗಿದೆ ಎಂದರು.
ಮಾರ್ಚ್ 31ರ ಸಂಜೆ 4 ಗಂಟೆಗೆ ಶ್ರೀಸಿದ್ದಗಂಗಾ ಮಠಕ್ಕೆ ಬರುವ ರಾಹುಲ್ಗಾಂಧಿ ಅವರು, ಮೊದಲಿಗೆ ಹಿರಿಯ ಶ್ರೀಗಳ ಗದ್ದುಗೆ ತೆರಳಿ ಗೌರವ ಸಲ್ಲಿಸುವರು.ನಂತರ ಹಾಲಿ ಮಠಾಧ್ಯಕ್ಷರಾದ ಶ್ರೀಸಿದ್ದಲಿಂಗಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.ಶ್ರೀಮಠದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಾಹುಲ್ಗಾಂಧಿ ಅವರು ಇರಲಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡಿದೆ.ಇದುವರೆಗೂ ಯಾವುದೇ ಬಹಿರಂಗ ಸಭೆ ನಡೆಸುವ ಇಚ್ಚೆಯನ್ನು ರಾಹುಲ್ಗಾಂಧಿಯವರ ವ್ಯಕ್ತಪಡಿಸಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಅದಕ್ಕೆ ಬೇಕಾದ ಸಿದ್ದತೆಯನ್ನು ಪಕ್ಷ ಮಾಡಲಿದೆ ಎಂದರು.
ಇದೊಂದು ರಾಜಕೀಯೇತರ ಭೇಟಿಯಾಗಿದ್ದು, ಅವರ ತಾಯಿಯವರಾದ ಶ್ರೀಮತಿ ಸೋನಿಯಾಗಾಂಧಿ ಅವರು ಸಹ ಈ ಹಿಂದೆ ಹಿರಿಯ ಶ್ರೀಗಳ ಸಮ್ಮುಖದಲ್ಲಿಯೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಹಾದಿಯಲ್ಲಿಯೇ ಅವರ ಮಗನೂ ಸಹ ಶ್ರೀಗಳ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ.ಇದು ರಾಜಕೀಯ ಹೊರತಾದ ಭೇಟಿ ಎಂದರು.
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ತಂತ್ರಗಾರಿಕೆ ನಡೆಸುವುದು ಸರ್ವೆ ಸಾಮಾನ್ಯ.ಆದರೆ ಶ್ರೀಮಠದ ಭೇಟಿ ಚುನಾವಣೆ ತಂತ್ರಗಾರಿಕೆಯ ಭಾಗವಲ್ಲ.ಶ್ರೀಮಠದ ಬಗ್ಗೆ ರಾಹುಲ್ಗಾಂಧಿ ಮತ್ತು ಅವರ ತಾಯಿ ಸೋನಿಯಾಗಾಂಧಿ ಅವರಿಗೆ ಅಪಾರವಾದ ಗೌರವವಿದೆ. ಅದನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಾಡುತ್ತಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲೆಯಲ್ಲಿ ಮಾಜಿ ಸಂಸದರಾದ ಮುದ್ದಹನುಮೇಗೌಡರು ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವ ನಾಯಕರನ್ನು ಪಕ್ಷ ಕಡೆಗಣಿಸಿಲ್ಲ.ಮುದ್ದಹನುಮೇಗೌಡರು ಕೃಷಿಯಲ್ಲಿ ತೊಡಗಿದ್ದಾರೆ.ಅವರು ಅಲ್ಲದೆ,ವಕೀಲರಾಗಿ ಕೂಡ ಸಕ್ರಿಯರಾಗಿದ್ದಾರೆ. ಹಾಗಾಗಿ ಪಕ್ಷದ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದೊಂದಿಗೆ ಸಕ್ರಿಯರಾಗಲಿದ್ದಾರೆ ಎಂದರು.
ಸ್ವಾಮೀಜಿಗಳು ಧರಿಸುವ ವಸ್ತ್ರಗಳ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಸಿದ್ದರಾಮಯ್ಯ ವಸ್ತ್ರ ಧರಿಸುವಿಕೆ ವ್ಯಕ್ತಿ, ವ್ಯಕ್ತಿಗೆ ಹೇಗೆ ಭಿನ್ನವಾಗಿರುತ್ತದೆ ಎಂಬುದನ್ನು ಸ್ವಾಮೀಜಿಗಳ ಉದಾಹರಣೆ ನೀಡಿ ಹೇಳಿದ್ದಾರೆ. ಆದರೆ ಅದನ್ನೇ ಕೆಲ ಮಾಧ್ಯಮಗಳು ತಿರುಚಿ,ಸ್ವಾಮೀಜಿಗಳಿಗೆ ಅವಮಾನ ಎಂದು ಬಿಂಬಿಸಲು ಹೊರಟಿವೆ.ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದರು.
ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ,ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್, ಎಸ್.ಷಪಿ ಅಹಮದ್, ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿ.ಪಂ.ಸದಸ್ಯ ವೆಂಕಟೇಶ್, ಪಾಲಿಕೆ ವಿರೋಧಪಕ್ಷದ ನಾಯಕ ಜೆ.ಕುಮಾರ್, ಮುಖಂಡರಾದ ಇಕ್ಬಾಲ್ ಅಹಮದ್, ಮೆಹಬೂಬ್ ಪಾಷ,ಚಂದ್ರಶೇಖರ್ ಗೌಡ ಮತ್ತಿತರರಿದ್ದರು.







