ಸಂಜೀವ್ ಭಟ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು 30 ವರ್ಷಗಳ ಬಳಿಕ ಹಿಂಪಡೆದ ದೂರುದಾರ

ಅಹಮದಾಬಾದ್: ಅಕ್ಟೋಬರ್ 1990 ರ ಕಸ್ಟಡಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಮತ್ತು ಇತರ ಪೊಲೀಸರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದ ದೂರುದಾರರು ಮೂರು ದಶಕಗಳ ನಂತರ ಇದೀಗ ದೂರು ಹಿಂಪಡೆಯಲು ಬಯಸಿದ್ದಾರೆ ಎಂದು timesofindia.com ವರದಿ ಮಾಡಿದೆ.
ಈ ಸಂಬಂಧ ಗುಜರಾತ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ದೂರು ರದ್ದುಪಡಿಸುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ನಿಖಿಲ್ ಕರಿಯೆಲ್, ದೂರುದಾರ ಮಹೇಶ್ ಚಿತ್ರೋಡಾ ಅವರಿಗೆ ತಮ್ಮ ವಕೀಲರ ಮೂಲಕ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ್ದಾರೆ. ಸದ್ಯ, ಮುಂದಿನ ವಿಚಾರಣೆಯನ್ನು ಮಾರ್ಚ್ 31 ಕ್ಕೆ ಮುಂದೂಡಲಾಗಿದೆ.
“ಏನಾದರೂ ದಾಖಲೆ ಮುಖಾಂತರ ಬರಲಿ. ನಾವು ಈ ವಿಷಯದಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಅಷ್ಟೊಂದು ಸಮಯದಲ್ಲಿ ಏನಾದರೂ ರಚನಾತ್ಮಕ ಕೆಲಸ ಮಾಡಬಹುದಿತ್ತು. ಈ ಪ್ರಕರಣದಲ್ಲಿ ಅಫಿಡವಿಟ್ ಸಲ್ಲಿಸುವವರೆಗೆ ಕಾಯೋಣ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅಕ್ಟೋಬರ್ 30, 1990 ರಂದು ಜಮ್ಕಂಬಲಿಯ ಪೊಲೀಸ್ ಠಾಣೆಯಲ್ಲಿ ಪ್ರಭುದಾಸ್ ವೈಷ್ಣಾನಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಚಿತ್ರೋಡಾ ಮತ್ತು ರಾವ್ಜಿಭಾಯಿ ಹರ್ಜಿಭಾಯ್ ಮತ್ತು ಚೇತನ್ ಜಾನಿ ಅವರು ಕಸ್ಟಡಿ ದೌರ್ಜನ್ಯದ ಬಗ್ಗೆ ಸಂಜೀವ್ ಭಟ್ ಹಾಗೂ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ದೂ ಸಲ್ಲಿಸಿದ್ದರು. ಸಂಜೀವ್ ಭಟ್ ಅವರಿಗೆ ಈ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವರು ಇನ್ನೂ ಜೈಲಿನಲ್ಲಿದ್ದಾರೆ.
ಘಟನೆ ನಡೆಯುವಾಗ, ಭಟ್ ಜಾಮ್ನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಗಲಭೆಯ ದೂರಿನ ಮೇರೆಗೆ ಪೊಲೀಸರು ದೂರುದಾರರು ಸೇರಿದಂತೆ 133 ಜನರನ್ನು ಬಂಧಿಸಿದ್ದರು. ಅಲ್ಲಿ ಕಸ್ಟಡಿ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.







