ಇವಿಎಂಗಳ ಮೇಲಿನ ಸಂಶಯವನ್ನು ಚುನಾವಣಾ ಆಯೋಗವೇ ನಿವಾರಿಸಬೇಕು: ಕುಮಾರಸ್ವಾಮಿ
''ಮೈತ್ರಿ ಸರಕಾರ ಬೀಳಿಸಲು ಕೆಲಸ ಮಾಡಿದವನು ಶ್ರೀಲಂಕಾಗೆ ಓಡಿಹೋದ''

ಬೆಂಗಳೂರು, ಮಾ. 30: ‘ವಿದ್ಯುನ್ಮಾನ ಮತಯಂತ್ರ(EVM) ಕಳವಿನ ಬಗ್ಗೆ ಉತ್ತರದಾಯಿತ್ವ ಯಾರದ್ದು. ಇವಿಎಂಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಹೊರಬಂದಾಗ ಆ ಫಲಿತಾಂಶದ ಬಗ್ಗೆ ಅನುಮಾನ ಪಡುವ ಸ್ಥಿತಿ ಇದೆ. ಇದನ್ನು ಚುನಾವಣಾ ಆಯೋಗ ಸರಿ ಮಾಡಬೇಕು, ಇಂತಹ ಸಂಶಯಗಳನ್ನು ಆಯೋಗವೇ ನಿವಾರಿಸಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ‘ಚುನಾವಣಾ ವ್ಯವಸ್ಥೆ ಸುಧಾರಣೆಗಳ ಅಗತ್ಯತೆ' ಬಗ್ಗೆ ಮಾತನಾಡಿದ ಅವರು, ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಬಗ್ಗೆ ನಾಡಿನ ಜನರಿಗೆ ಉತ್ತರದಾಯಿಯಾಗಿ ಇರಬೇಕಾಗುತ್ತದೆ. ಇವತ್ತು ಸಂವಿಧಾನದ ಇತರೆ ಅಂಗಗಳು ಸಮಾಜಕ್ಕೆ ಏನೇ ಸಮಸ್ಯೆ ಆದರೂ ಉತ್ತರದಾಯಿ ಆಗಲ್ಲ. ಆದರೆ, ಕಾರ್ಯಾಂಗವನ್ನು ಉತ್ತರದಾಯಿ ಆಗಿರುತ್ತದೆ. ಅಲ್ಲದೆ, ಶಾಸಕರು ಉತ್ತರದಾಯಿ ಆಗಿರುತ್ತಾರೆ' ಎಂದು ಹೇಳಿದರು.
‘ಚುನಾವಣಾ ಆಯೋಗದಲ್ಲಿರುವ ನ್ಯೂನತೆಗಳ ಬಗ್ಗೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ಸುದೀರ್ಘ ಚರ್ಚೆ ಮಾಡಿದ್ದಾರೆ. ಇವಿಎಂ ಕಳವಿಗೆ ಯಾರು ಉತ್ತರದಾಯಿತ್ವರು? ಇದರ ಹೊಣೆಯನ್ನು ಜನಪ್ರತಿನಿದಿಗಳೇ ಹೊರಬೇಕೇ? ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇವತ್ತು ಮತಯಂತ್ರಗಳ ಮತದಾನದ ಫಲಿತಾಂಶ ಬಂದಾಗ ಅಭ್ಯರ್ಥಿಗಳು ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಚುನಾವಣಾ ಆಯೋಗ ಸರಿಪಡಿಸಬೇಕು. ಇವುಗಳ ಬಗ್ಗೆ ಬಹಳ ಗೊಂದಲ ಇದೆ' ಎಂದು ಅವರು ತಿಳಿಸಿದರು.
‘ಪ್ರತಿ ಚುನಾವಣೆ ಬಂದಾಗಲೂ ಇವಿಎಂ ಬಗ್ಗೆ ಮಾತನಾಡುತ್ತೇವೆ. ಇದನ್ನು ಎಷ್ಟು ವರ್ಷ ಮುಂದುವರೆಸಿಕೊಂಡು ಹೋಗಬೇಕು? ನಾವೆಲ್ಲರೂ ಮುಕ್ತವಾಗಿ ಚರ್ಚೆ ಮಾಡಬೇಕಾದ ವಿಚಾರ ಇದು. ಇದು ಚುನಾವಣಾ ಪದ್ಧತಿ ಸುಧಾರಣೆ ತರಲು ಮೊದಲ ಹೆಜ್ಜೆಯಾಗಿದೆ. ಮೊದಲ ಚುನಾವಣೆ ಆರಂಭವಾದಾಗಿನಿಂದ ಹಿಡಿದು ಈವರೆಗೆ 17 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ನಾವು ಯಾರನ್ನೂ ಬೊಟ್ಟು ಮಾಡಿ ತೋರಿಸಲು ಆಗಲ್ಲ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ನೋಡಿದ್ದೆವು. 1972-73 ಚುನಾವಣೆಯಲ್ಲಿ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಆದಾಗ ಜನರೇ ಹಣ ಕೊಟ್ಟು ಚುನಾವಣೆ ನಡೆಸುತ್ತಿದ್ದರು. ಚುನಾವಣೆಯ ಎರಡು ದಿನ ಮೊದಲು ಅಭ್ಯರ್ಥಿಗಳು ಆಮಿಷವೊಡ್ಡಬಾರದು ಎಂದು ರಸ್ತೆಗೆ ಅಡ್ಡವಾಗಿ ಕಲ್ಲು, ಮರ ಹಾಕುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಲಘುವಾಗಿ ಮಾತನಾಡಬೇಡಿ: ‘ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸೋದು ರೈತರು ಮತ್ತು ಕೂಲಿ ಕಾರ್ಮಿಕ ವರ್ಗ ಮಾತ್ರ. ಸೌಲಭ್ಯ ಪಡೆಯಲು, ಧ್ವನಿ ಎತ್ತುವ ಜನರ ಸಂಖ್ಯೆ ಕಡಿಮೆ. ಲಘುವಾಗಿ ಮಾತನಾಡುವ ವರ್ಗ ಚುನಾವಣೆಗೆ ಬರೋದು ಕಡಿಮೆ. ಚುನಾವಣೆ ಬಂದಾಗ ವಿಶ್ವಾಸದಿಂದ ಬರುವ ಜನ ಕೂಲಿ ವರ್ಗದ ಜನ. ಅಂದಿನ ಹಾಗೂ ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಎಂದು ನೋಡಿದ್ದೇವೆ' ಎಂದು ಅವರು ತಿಳಿಸಿದರು.
‘ಟಿ.ಎನ್.ಶೇಷನ್ ಅವರು ಚುನಾವಣೆಯ ವ್ಯವಸ್ಥೆ ಸಂಪೂರ್ಣ ಸರಿಪಡಿಸಲಾಗದಿದ್ದರೂ ಭಯದಿಂದ ಚುನಾವಣೆ ನಡೆಸುವಂತೆ ಮಾಡಿದರು. ನಂತರ ಹಾಗೆ ಯಾರೂ ಕೆಲಸ ಮಾಡಲಿಲ್ಲ. ಏನೇ ಮಾಡಿದರೂ ಎಲ್ಲರೂ ರಾಜಕಾರಣಿಗಳ ವಿರುದ್ಧವೇ ಬೊಟ್ಟು ಮಾಡುತ್ತಾರೆ. ಹಾಗಾದರೆ; ನ್ಯಾಯಾಧೀಶರು, ಸಮಾಜವಾದಿಗಳು, ಪತ್ರಕರ್ತರ ಬಗ್ಗೆ ಪ್ರಶ್ನೆ ಮಾಡೋದು ಯಾರು? ಅಭ್ಯರ್ಥಿಗಳು ಪೂರ್ವ ಚರಿತ್ರೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬೆಟ್ಟಿಂಗ್ ನಡೆಸುವ ವಿಚಾರಕ್ಕೆ ಬ್ರೇಕ್ ಬೀಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದೆ ನಾನು. ಕ್ರಿಕೆಟ್ ಬೆಟ್ಟಿಂಗ್ ಮಾಡ್ತಿದ್ದವನ ಹಿಡಿಯಲು ಹೋದಾಗ, ಶ್ರೀಲಂಕಾಗೆ ಓಡಿಹೋದ. ಅವನೇ ಮೈತ್ರಿ ಸರಕಾರ ಬೀಳಿಸಲು ಎಲ್ಲ ರೀತಿಯ ಕೆಲಸ ಮಾಡಿದ. ಅದರ ಲಾಭವನ್ನೂ ಯಾರೆಲ್ಲಾ ಪಡೆದುಕೊಂಡರು ಎಂದು ಮಾಧ್ಯಮಗಳಲ್ಲಿ ಚರ್ಚೆ ಮಾಡುವುದಿಲ್ಲ ಎಂದು ಟೀಕಿಸಿದರು.
ಲಂಚ ಕೊಡುವುದು ತಪ್ಪು: ಶೇ.40ರಷ್ಟು ಕಮಿಷನ್ ಎಂದು ಹೇಳುತ್ತಾರೆ. ಆದರೆ, ಲಂಚ ಪಡೆಯುವವನ ಮಾತ್ರವಲ್ಲದೆ, ಕೊಡುವವನ ಮೇಲೂ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ಸದಸ್ಯರು ನಮ್ಮ ತೋಟಕ್ಕೆ ಬಂದಿದ್ದರು. ನರೇಗಾ ಕೆಲಸ ಮಾಡಲು ಪತ್ನಿ ಒಡವೆ ಇಟ್ಟು ಕೆಲಸ ಮಾಡಿದೆವು. ಆದರೆ ಹಣ ನೀಡಿಲ್ಲ, ಈಗ ಮನೆಯಲ್ಲಿ ಊಟ ಹಾಕುತ್ತಿಲ್ಲ. ಕೊನೆಗೆ ನಾವು ಊರಿಗೆ ಹೋಗಲ್ಲ, ಇಲ್ಲೇ ತೋಟದಲ್ಲಿ ಕೆಲಸ ಮಾಡುತ್ತೇವೆ ಎಂಬ ನಿರ್ಧಾರಕ್ಕೆ ಬಂದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ಇಲಾಖೆಯಲ್ಲಿ ಹೀಗಾಗಿದೆ. ಚುನಾವಣೆಯನ್ನು ನಿಯಮಿತ ಹಣದಲ್ಲಿ ಮಾಡಲು ಆಯೋಗ ಸೂಚಿಸಿದೆ. ಅದು ನಿಜಕ್ಕೂ ಸಾಧ್ಯವಾ? ಅದನ್ನು ಲೆಕ್ಕ ಹಾಕಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತಾರೆ. ನಾವು ಸಭೆ ಸಮಾರಂಭ ಮಾಡಿದಾಗ, ತಲೆಗಳನ್ನು ಲೆಕ್ಕ ಹಾಕುತ್ತಾರೆ' ಎಂದು ಅವರು ಪ್ರಶ್ನಿಸಿದರು.
300 ವರ್ಷಗಳು ಬೇಕು: ನ್ಯಾಯಾಂಗ ವ್ಯವಸ್ಥೆಯೂ ಹದಗೆಟ್ಟಿದೆ. ಈ ದೇಶದಲ್ಲಿ ಇರುವ ಕೋರ್ಟ್ ಕೇಸ್ಗಳು ಬಗೆಹರಿಸಲು 300 ವರ್ಷಗಳು ಬೇಕು. ಅದಕ್ಕೆ ನಮ್ಮ ಮೊಮ್ಮಕ್ಕಳ ಕಾಲ ಬರಬೇಕು. ಒಂದು ಡಿ-ನೋಟಿಫಿಕೇಷನ್ ಹಲಗೆ ವಡೇರಹಳ್ಳಿಯಲ್ಲಿ ಆಗಿತ್ತು. ಹಿಂದಿನ ಸಿಎಂ ಜತೆ ಕೆಲಸ ಮಾಡ್ತಿದ್ದ ಅಧಿಕಾರಿ ಫೈಲ್ ಕ್ಲಿಯರ್ ಮಾಡುವಂತೆ ತಿಳಿಸಿದ್ದರು. ಸರಿ ಇದ್ದರೆ ಮಾಡೋಣ ಫೈಲ್ ತನ್ನಿ ಎಂದು ಹೇಳಿ, ಸಹಿ ಹಾಕಿದೆ. ಆ ಪ್ರಕರಣವೂ ಇನ್ನೂ ಬಗೆಹರಿದೇ ಇಲ್ಲ. ಆಗ ಕುಮಾರಸ್ವಾಮಿಗೆ ಮುಳುವು, ಜೈಲಿಗೆ ಹೋಗ್ತಾರೆ ಅನ್ನುವ ರೀತಿ ಮಾತನಾಡಿದರು. ಭ್ರμÁ್ಟಚಾರ ಮಿತಿಮೀರಿದೆ. ಬಡವರು ಕೆಲಸ ಮಾಡಿಸಿಕೊಳ್ಳಬೇಕಾದರೆ ಎಂಟು ಸಾವಿರ ಮಿಲಿಯನ್ ಲಂಚ ಕೊಟ್ಟಿರೋದು ದಾಖಲಾಗಿದೆ. ಪ್ರತಿ ಇಲಾಖೆಯಲ್ಲೂ ಮಿಲಿಯನ್ ಗಟ್ಟಲೆ ಲಂಚ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಹೆಚ್ಚು ಲಂಚ ನೀಡಲಾಗಿದೆ. ಇದು ಇಂಡಿಯಾ ಕರೆಕ್ಷನ್ ಸರ್ವೆ ನೀಡಿರುವ ವರದಿಯಲ್ಲಿ ಉಲ್ಲೇಖ ಆಗಿದೆ' ಎಂದು ಅವರು ಬಿಚ್ಚಿಟ್ಟರು.
‘2004ರ ನಂತರ ನಾನು ರಾಜಕಾರಣಕ್ಕೆ ಬಂದವನು. ಪರಿಷತ್ ಚುನಾವಣೆ ಹೇಗೆ ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯೆ ಉದಾಹರಣೆಗೆ ನೋಡಿದ್ದೇವೆ. ರಾಜ್ಯಸಭಾ ಚುನಾವಣೆಯನ್ನೂ ನೋಡಿದ್ದೇವೆ. ಯಾರ ಮನೆ ಹಾಳು ಮಾಡಿದರೂ ಸರಿ, ಗೆಲ್ಲಬೇಕು ಅಷ್ಟೇ. ಚುನಾವಣೆ ಗೆಲ್ಲೋವರೆಗೂ ಒಂದು ಹಂತ ಅಷ್ಟೇ. ನಂತರ ಐದು ವರ್ಷ ಉಳಿಯಬೇಕಲ್ಲ, ಅದು ಬಾರಿ ಕಷ್ಟ. ದೇವಸ್ಥಾನ, ಮದುವೆ, ಸ್ಕೂಲ್ ಫೀಸ್ ಎಲ್ಲದಕ್ಕೂ ಜನ ಬರುತ್ತಾರೆ. ಜಾಹೀರಾತು ವಿಚಾರ ದೊಡ್ಡ ಸಮಸ್ಯೆ ಆಗಿದೆ' ಎಂದು ಅವರು ತಿಳಿಸಿದರು.
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು: ‘ಶಾಸಕರಾದವರು ಪರವಾಗಿಲ್ಲ, ಒಂದಷ್ಟು ಹಣ ಬರುತ್ತದೆ. ಆದರೆ ಎಂಎಲ್ಎ ಆಗುವವರು 25ರಿಂದ 30 ಕೋಟಿ ರೂ.ಖರ್ಚು ಮಾಡಿ ಬರುತ್ತಾರೆ. ಪಂಚಾಯತಿ ಅಧ್ಯಕ್ಷ ಆಗಲು ಒಂದು ಮತಕ್ಕೆ 500 ರೂ.ನಿಂದ 600 ರೂ.ಲೆಕ್ಕದಂತೆ 1ರಿಂದ 2 ಕೋಟಿ ರೂ.ಖರ್ಚು ಮಾಡುತ್ತಿದ್ದಾರೆ. ಅವರೇ ಅಷ್ಟು ಖರ್ಚು ಮಾಡುವಾಗ, ನಮ್ಮ ಚುನಾವಣೆ ಹೇಗೆ ಮಾಡಬೇಕು? ಇನ್ನು ಎಲ್ಲ ಚುನಾವಣೆ ನಾವೇ ನಡೆಸಬೇಕು. ಎಲ್ಲದಕ್ಕೂ ಹಣ ಕೊಡಿ ಎಂದು ಕೇಳುತ್ತಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅದರಲ್ಲಿ ಯಾವುದೇ ಧರ್ಮ ಅಡ್ಡ ಬರುವುದಿಲ್ಲ' ಎಂದು ಅವರು ತಿಳಿಸಿದರು.
‘ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡಲಾಗುತ್ತಿದೆ. ಈಗ ಧರ್ಮ ಧರ್ಮದ ನಡುವೆ ಸಂಘರ್ಷ ತರುವ ಕೆಲಸ ಆಗುತ್ತಿದೆ. ಇದನ್ನು ಹೇಗೆ ನಿಲ್ಲಿಸ್ತೀರಾ ಹೇಳಿ? ನಮ್ಮ ತಂದೆಯವರು ಚುನಾವಣೆ ನಡೆಸುವಾಗ ಅಭ್ಯರ್ಥಿಗಳು ಕೊಡುವ ಐದು ಸಾವಿರ ರೂ.ಹಣವನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕಾರ ಮಾಡ್ತಿದ್ದರು. ಈಗ ಐದು ಕೋಟಿ ರೂ.ಗಳನ್ನು ಕೊಟ್ಟರೂ ಸಾಲುವುದಿಲ್ಲ. ಅಂತಹ ಸ್ಥಿತಿ ಬಂದಿದೆ. ಹಣದ ಮಾಫಿಯಾದ ಜೊತೆಗೆ ಇದೀಗ ಭಾವನಾತ್ಮಕ ವಿಚಾರಗಳು ಮುನ್ನಲೆಗೆ ಬಂದು ಕಲುಷಿತಗೊಳ್ಳುತ್ತಿದೆ. ಚುನಾವಣೆ ವ್ಯವಸ್ಥೆ ಸುಧಾರಣೆ ವಿಚಾರದಲ್ಲಿ ಪ್ರತಿಫಲ ಹೊರಬರಬೇಕಿದೆ'
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
‘ವಿಜಯಪುರದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ಅಭ್ಯರ್ಥಿಯೊಬ್ಬ ಮತದಾರರಿಗೆ ಎರಡು ಕೋಳಿಗಳನ್ನು ನೀಡಿದ. ಇದನ್ನು ಗಮನಿಸಿದ ಪ್ರತಿಸ್ಪರ್ಧಿ ಅಭ್ಯರ್ಥಿ ಮಟನ್ ಜೊತೆಗೆ ಮಾಂಸ ತಿನ್ನದೆ ಇರುವವರಿಗೆ ಸ್ವೀಟ್ ಬಾಕ್ಸ್ ಕೊಡುತ್ತಿದ್ದ. ಸ್ವೀಟ್ ತಿನ್ನುವವರು ಯಾರು ಎಂದು ಎಲ್ಲರಿಗೂ ಗೊತ್ತು. ಹೀಗೆ ನಾನಾ ರೀತಿ ಗಿಮ್ಮಿಕ್ಗಳು ಚುನಾವಣೆಯಲ್ಲಿ ನಡೆಯುತ್ತವೆ'
-ಗೋವಿಂದ ಎಂ.ಕಾರಜೋಳ ಜಲಸಂಪನ್ಮೂಲ ಸಚಿವ







