ಆಹಾರ ಖರೀದಿ ಜನರ ಆಯ್ಕೆ, ಅವರ ಹಕ್ಕು: ಸಚಿವ ಆರ್.ಅಶೋಕ್
ಹಲಾಲ್ ನಿಷೇಧ ವಿಚಾರದ ಕುರಿತು ವಿಧಾನಸಭೆಯಲ್ಲಿ ಚರ್ಚೆ

ಬೆಂಗಳೂರು, ಮಾ. 30: ರಾಜ್ಯದಲ್ಲಿ ವಿವಾದದ ಸ್ವರೂಪ ಪಡೆದುಕೊಂಡಿರುವ ‘ಹಲಾಲ್' ಮಾಂಸದ ಕುರಿತ ವಿವಾದ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೆಲಕಾಲ ಚರ್ಚೆ ಗಂಭೀರವಾದ ನಡೆಯಿತು. ಅಲ್ಲದೆ, ಶಾಂತಿಯುತ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಸುವ ತಿಳಿಗೇಡಿಗಳ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂತು.
ಬುಧವಾರ ವಿಧಾನಸಭೆಯಲ್ಲಿ ‘ಚುನಾವಣಾ ವ್ಯವಸ್ಥೆ ಸುಧಾರಣೆಗಳ ಅಗತ್ಯತೆ' ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಹಿಜಾಬ್ ವಿವಾದ ಮುಗಿಯಿತು, ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಬರ್ಂಧ ಹೇರಿದ್ದು ಆಯಿತು. ಇದೀಗ ‘ಹಲಾಲ್' ವಿವಾದ ಪ್ರಾರಂಭ ಮಾಡಲಾಗಿದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ವರ್ಷ ತೊಡಕಿನ ವೇಳೆ ನಾವು ‘ಹಲಾಲ್' ಮಾಡಿದ್ದಾರೋ, ಇಲ್ಲವೋ ನೋಡಲು ಹೋಗುವುದಿಲ್ಲ. ಮಾಂಸದ ಅಂಗಡಿಯಿಂದ ತರುವ ಮಾಂಸವನ್ನು ನಾವು ಪೂಜೆಗೆ ಇಡುವುದಿಲ್ಲ. ಹಬ್ಬದ ವೇಳೆಯಲ್ಲಿ ಹಳ್ಳಿಯ ರೈತರೇ ತಾವು ಸಾಕಿದ ಕುರಿ ಕೊಯ್ದು ಗುಡ್ಡೆ ಮಾಂಸ ಎಂದು ಪಾಲು ಹಾಕುತ್ತಾರೆ. ಇದೀಗ ರಾಜ್ಯದಲ್ಲೇ ಏಕೆ ಇಂತಹ ವಿವಾದ ಸೃಷ್ಟಿಸಲಾಗುತ್ತಿದೆ' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ಸಮಾಜದಲ್ಲಿ ಶಾಂತಿ ಕದಡುವ ವಿಚಾರಗಳನ್ನು ಖಾಸಗಿ ಸುದ್ದಿ ಮಾಧ್ಯಮಗಳು ಯಾವುದೇ ಕಾರಣಕ್ಕೂ ಬಿತ್ತರಿಸಬಾರದು. ಹಿಂದೂಗಳ ಜೊತೆಗೆ ವ್ಯಾಪಾರ ವ್ಯವಹಾರ ಸಂಬಂಧ ಇಟ್ಟುಕೊಳ್ಳಿ ಎಂಬ ವಾಟ್ಸ್ ಆ್ಯಪ್ ಸಂದೇಶವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಇಂತಹ ಘಟನೆಗಳನ್ನು ನೋಡಿದರೆ ಭಯ ಆಗುತ್ತದೆ. ಇದನ್ನು ಮಾಡಿದ್ದು ಬಿಜೆಪಿಯವರಲ್ಲ, ಬದಲಿಗೆ ಯಾರೋ ಹಿಂದೂ ಸಮಾಜದ ತಿಳಿಗೇಡಿಗಳು ಮಾಡಿದ್ದಾರೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಡಿ' ಎಂದು ಮನವಿ ಮಾಡಿದರು.
ಅವರ ಆಹಾರ ಅವರ ಹಕ್ಕು: ‘ನೀವು ಹೇಗೆ ಹೇಳಿದರೂ ನಮಗೆ(ಬಿಜೆಪಿ) ಹೇಳಿದ್ದು ಎಂದು ಅನ್ನಿಸುತ್ತದೆ. ಆದರೆ, ನಿಮ್ಮ ಮಾತಿಗೆ ನಮ್ಮ ವಿರೋಧವಿಲ್ಲ. ಜನರು ತಮ್ಮ ಆಹಾರವನ್ನು ಎಲ್ಲಿ ಖರೀದಿಸಬೇಕೆಂದು ನಿರ್ಧರಿಸುವುದು ಅವರ ಹಕ್ಕು. ಅವರು ಮುಸ್ಲಿಮ್ ಅಂಗಡಿಯಲ್ಲಾದರೂ ಖರೀದಿಸಲಿ ಅಥವಾ ಹಿಂದೂ ಅಂಗಡಿಯಲ್ಲಾದರೂ ಖರೀದಿ ಮಾಡಬಹುದು. ಇವರಲ್ಲೆ ಖರೀದಿ ಮಾಡಬೇಕೆಂಬುದು ಸರಿಯಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ ಆಕ್ಷೇಪಿಸಿದರು.
‘ಮುಸ್ಲಿಮರು ಮಾಂಸ ಖರೀದಿ ಮಾಡಬೇಕಾದರೆ ‘ಹಲಾಲ್' ಮಾಡಿದರೆ ಮಾತ್ರ ಖರೀದಿ ಮಾಡಬೇಕು ಎಂದು ಹೇಳುತ್ತಾರೆ. ನಾವು ‘ಹಲಾಲ್ ಮಾಡುವುದಿಲ್ಲ. ನೀವು ಏಕೆ ತಿನ್ನಲ್ಲ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ನಾವು ಎರಡೂ ಸಮುದಾಯಕ್ಕೆ ಬುದ್ಧಿವಾದ ಹೇಳಬೇಕು. ಎರಡೂ ಸಮುದಾಯಗಳು ಪರಸ್ಪರ ಎರಡೂ ಸಮುದಾಯದವರಿಂದ ಖರೀದಿ ಮಾಡಬೇಕು. ಹಾಗಾದರೆ ಮಾತ್ರ ಸಾಮರಸ್ಯ. ಬದಲಾಗಿ ಒಂದು ಕಡೆಯವರಿಗೆ ಬುದ್ಧವಾದ ಸರಿಯಲ್ಲ' ಎಂದು ಅಶೋಕ್ ಪರೋಕ್ಷವಾಗಿ ಆಕ್ಷೇಪಿಸಿದರು.







