ಕೇವಲ ಚುನಾವಣೆ ಶುದ್ಧೀಕರಣವಾದರೆ ದೇಶ ಸುಧಾರಿಸದು, ಶೈಕ್ಷಣಿಕ, ಸಾಂಸ್ಕೃತಿಕ ರಂಗವೂ ಶುದ್ಧವಾಗಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು, ಮಾ. 30: `ಚುನಾವಣಾ ವ್ಯವಸ್ಥೆ ಸುಧಾರಣೆ ಆಗುವುದರ ಜೊತೆಗೆ ಪ್ರಜಾಪ್ರಭುತ್ವ ಜೀವಂತವಾಗಿರಬೇಕು. ಜೊತೆಗೆ ಆರೋಗ್ಯಕರವಾಗಿರಬೇಕು, ಕೇವಲ ಚುನಾವಣೆ ಶುದ್ಧೀಕರಣವಾದರೆ ದೇಶ ಸುಧಾರಿಸದು, ಶೈಕ್ಷಣಿಕ, ಸಾಂಸ್ಕøತಿಕ ರಂಗವೂ ಶುದ್ಧವಾಗಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಾದಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, `ಚುನಾವಣೆ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ನಾಗರಿಕ ಸಮಾಜವೂ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಮೊದಲು ನಾಗರಿಕ ಸಮಾಜದ ಬಗ್ಗೆ ಭಯ ಇತ್ತು. ಈಗ ಆ ಮಟ್ಟದ ನಾಗರಿಕ ಸಮಾಜವೂ ಇಲ್ಲ. ನಮ್ಮ ದೇಶ ಹಲವು ರೀತಿಯ ಹಿನ್ನೆಲೆ ಮತ್ತು ಇತಿಹಾಸ ಹೊಂದಿದೆ' ಎಂದು ಹೇಳಿದರು.
`ತಮಿಳುನಾಡಿನಿಂದ ದೇಶವನ್ನು ನೋಡುವ ದೃಷ್ಟಿಕೋನ ಬೇರೆ ಇದೆ. ಈಶಾನ್ಯ ರಾಜ್ಯಗಳ ದೃಷ್ಟಿಕೋನ ಬೇರೆ ಇದೆ. ಆದರೂ, ಎಲ್ಲರೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಬಂದಿದ್ದೇವೆ. ದೇಶದ ಜನರಲ್ಲಿ ಒಂದು ಅಂತರ್ಗತ ಶಕ್ತಿ ಇದೆ. ಬೇರೆ ಬೇರೆ ರಾಷ್ಟ್ರಗಳು ಒಂದೇ ರೀತಿಯ ವ್ಯವಸ್ಥೆ ಇದ್ದರೂ, ಪ್ರಜಾಪ್ರಭುತ್ವ ಬುಡಮೇಲಾಗಿದೆ. ನಮ್ಮ ದೇಶದಲ್ಲಿ ಅಧಿಕಾರ ಹಸ್ತಾಂತರ ಅತ್ಯಂತ ಶಾಂತಿಯುತವಾಗಿ ನಡೆಯುತ್ತದೆ' ಎಂದು ಅವರ ತಿಳಿಸಿದರು.
`ಅಮೆರಿಕದಂತ ದೇಶದಲ್ಲಿ ಅಧಿಕಾರ ಹಸ್ತಾಂತರವಾಗಲು ಎಷ್ಟು ಕಷ್ಟವಾಯಿತು ಎನ್ನುವುದನ್ನು ನೋಡಿದ್ದೇವೆ. ಪ್ರಜಾಪ್ರಭುತ್ವ ಗಟ್ಟಿಯಾಗಿರುವುದರಿಂದಲೇ ಚುನಾವಣೆ ವ್ಯವಸ್ಥೆ ಸುಧಾರಣೆ ಕುರಿತು ಮಾತನಾಡುತ್ತಿದ್ದೇವೆ. ನಾವು ಹತಾಶರಾಗಬೇಕಿಲ್ಲ. ಹಾಗಂತ ಉತ್ತಮ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬೇಕಿಲ್ಲ. ಚುನಾವಣಾ ಅಕ್ರಮಗಳನ್ನು ತಡೆಯುವ ಪ್ರಯತ್ನ ನಡೆಸಬೇಕು. ಕೆಲವು ವ್ಯಕ್ತಿಗಳು ಅಧಿಕಾರಕ್ಕೆ ಬರುವಾಗ ಇರುವ ತತ್ವ ಸಿದ್ಧಾಂತ, ಅಧಿಕಾರಕ್ಕೆ ಬಂದ ನಂತರ ಅಧಿಕಾರದಲ್ಲಿ ಉಳಿಯಲು ತಮ್ಮ ತತ್ವ-ಸಿದ್ಧಾಂತವನ್ನೇ ಬಲಿಕೊಟ್ಟಿರುವ ಉದಾಹರಣೆ ಇವೆ' ಎಂದು ಅವರು ಉಲ್ಲೇಖಿಸಿದರು.
ಮೊದಲು ಶಾಸಕರು ಪ್ರಯಾಣಿಸಲು ಉಚಿತ ಪಾಸ್ ನೀಡಲಾಗುತ್ತಿತ್ತು. ಒಂದೆ ಕೊಠಡಿಯಲ್ಲಿ ಇಬ್ಬರು ಶಾಸಕರು ಉಳಿದುಕೊಳ್ಳುತ್ತಿದ್ದರು. ಶಾಸಕರಿಗೆ ಸಂಬಳ ನೀಡುವ ವ್ಯವಸ್ಥೆ ಬಂತು. ಸುಪ್ರೀಂ ಕೋರ್ಟ್ನ ಅನೇಕ ಆದೇಶಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ತೀರ್ಪುಗಳನ್ನು ನೀಡಿವೆ. ಈಗ ತಂತ್ರಜ್ಞಾನ ಬಂದು ಯುವಕರಿಗೆ ಪ್ರತಿಯೊಂದು ಮಾಹಿತಿ ನೇರವಾಗಿಯೇ ಸಿಗುತ್ತದೆ. ಸರಿಯೋ ತಪ್ಪೋ, ಜನರು ಎಲ್ಲದರ ಬಗ್ಗೆ ಮಾತನಾಡುವಂತೆ ಇದೆ. ವ್ಯವಸ್ಥೆ ಬದಲಾಗುವ ವಿಶ್ವಾಸ ಇದೆ' ಎಂದು ಅವರು ಆಶಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಮತದಾರನಿಗೂ ತನ್ನ ಮತ ಗೆಲ್ಲಬೇಕೆಂಬ ಹಂಬಲ ಇರುತ್ತದೆ. ನಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಆತಂಕದಿಂದ ಏನೇನೋ ಮಾಡುತ್ತೇವೆ. ನಮ್ಮದು ಪಕ್ಷ ಆಧಾರಿತ ಪ್ರಜಾಪ್ರಭುತ್ವ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾವೂ ಆಯ್ಕೆಯಾಗಬೇಕು. ಬಹಳ ಜನಪ್ರಿಯ ವ್ಯಕ್ತಿಯೂ ಜನರ ಆಯ್ಕೆಯಾಗುವುದಿಲ್ಲ. ಕೆಲವು ಸಾರಿ ಜನಪ್ರಿಯವಲ್ಲದ ವ್ಯಕ್ತಿಯ ಜನರ ಆಯ್ಕೆಯಾಗುತ್ತಾರೆ ಎಂದು ಅವರು ನುಡಿದರು.
`ಕೆಳಹಂತದ ಮತದಾರ ತನ್ನ ಆತ್ಮಸಾಕ್ಷಿಯನ್ನು ಉಳಿಸಿಕೊಂಡಿದ್ದಾನೆ. ಯುವಕರು ಹೊಸ ಹೊಸ ಆಲೋಚನೆ ಹೊಂದಿದ್ದಾನೆ. ವಿಶ್ವದಲ್ಲಿ ನಮ್ಮ ದೇಶ ಮುಂದೆ ಬರಬೇಕು ಎಂದು ಬಯಸುತ್ತಾನೆ. ಭ್ರಷ್ಟಾಚಾರ ಜನರನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ. ಇದು ಅತಿಯಾದಾಗ ಇದನ್ನು ಬದಲಾಯಿಸುವ ಸಮಯ ಬಂದೇ ಬರುತ್ತದೆ ಎಂದು ಅವರು ತಿಳಿಸಿದರು.
`ಕಾರ್ಪೊರೇಟ್ ಪ್ರಭಾವ 1970ರವರೆಗೆ ಇರಲಿಲ್ಲ. ಆ ಬಳಿಕ ಅದು ಪ್ರಭಾವಿಸಿದೆ. ಬೇರೆ ಬೇರೆ ರೀತಿಯಲ್ಲಿ ನಿಯಂತ್ರಿಸುವ ಕೆಲಸ ಬಹಳ ಹಿಂದಿನಿಂದಲೂ ಇದೆ. ಅದರ ವಿಸ್ತಾರ ಇದೀಗ ದೊಡ್ಡದಾಗಿದೆ. ಇದೆಲ್ಲ ನ್ಯೂನತೆಗಳ ನಡುವೆ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಮಾಡಬೇಕು. ಅಧಿಕಾರ ರಾಜಕೀಯದಲ್ಲಿ ಜನಪರ ಆಡಳಿತ ನೀಡಿದರೆ, ಜನರು ಒಳ್ಳೆಯದಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ'
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ







