ಬಿಜೆಪಿ ಕಾರ್ಯಕರ್ತರಿಂದ ಅರವಿಂದ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ: 8 ಮಂದಿಯ ಬಂಧನ
![ಬಿಜೆಪಿ ಕಾರ್ಯಕರ್ತರಿಂದ ಅರವಿಂದ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ: 8 ಮಂದಿಯ ಬಂಧನ ಬಿಜೆಪಿ ಕಾರ್ಯಕರ್ತರಿಂದ ಅರವಿಂದ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ: 8 ಮಂದಿಯ ಬಂಧನ](https://www.varthabharati.in/sites/default/files/images/articles/2022/03/31/330033-1648704310.jpg)
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆಯಲ್ಲಿ ಬುಧವಾರ ನಡೆದ ಧ್ವಂಸ ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ದಿಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇನ್ನೂ ಕೆಲವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸಿಎಂ ಮನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಒಡೆದುಹಾಕಲಾಗಿದ್ದು, ಸಿಎಂ ಮನೆ ಸುತ್ತಲಿನ ಭದ್ರತಾ ತಡೆಗೋಡೆಯನ್ನು ಮುರಿಯಲಾಗಿದೆ ಎಂದು ವರದಿಯಾಗಿದೆ.
ದಿಲ್ಲಿ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ, ಕೇಜ್ರಿವಾಲ್ ಅವರು “ಕಾಶ್ಮೀರ ಫೈಲ್ಸ್ ‘’ ಚಲನಚಿತ್ರ ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸಿಎಂ ನಿವಾಸದ ಮೇಲಿನ ದಾಳಿಯ ಕುರಿತು ಮಾತನಾಡಿದ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು "ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿದೆ" ಎಂದು ಆರೋಪಿಸಿದರು.
ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಕೇಜ್ರಿವಾಲ್ ಅವರ ನಿವಾಸವನ್ನು ಧ್ವಂಸಗೊಳಿಸಿದ್ದರು. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸುಳ್ಳು ಎಂಬ ಕೇಜ್ರಿವಾಲ್ ಅವರ ಹೇಳಿಕೆಗಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದ ಕಾರ್ಯಕರ್ತರ ಗುಂಪು ಕೇಜ್ರಿವಾಲ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು.