ಭಕ್ತಾದಿಗಳಿಗೆ ರಕ್ಷಣೆ ಒದಗಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿಗೆ ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು : ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕನ್ನಡಿಗ ಭಕ್ತರ ಮೇಲೆ ಹಲ್ಲೆ ನಡೆದಿದ್ದು, ಬೇರೆ ರಾಜ್ಯಗಳಿಂದ ಜಾತ್ರೆಗಳಿಗೆ ಭೇಟಿ ನೀಡಿವವರು ಹೆಚ್ಚಿರುತ್ತಾರೆ. ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಹೊರಗಿನಿಂದ ಬರುವ ಭಕ್ತರಿಗೆ ರಕ್ಷಣೆ ನೀಡಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾದಿದ್ದಾರೆ.
ಆಂಧ್ರಪ್ರದೇಶದ ಜಾತ್ರೆಯಲ್ಲಿ ನಡೆದ ಹಿಂಸಾಚಾರ ಬಗ್ಗೆ ವಿಧಾನಸೌಧದಲ್ಲಿ ಇಂದು ಮಾಧ್ಯಮದೊಂದಿಗೆ ಸಿಎಂ ಮಾತನಾಡಿದರು.
ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದಲೂ ದೊಡ್ಡ ಪ್ರಮಾಣದಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಹಿಂದಿರುಗುವ ಸಂದರ್ಭದಲ್ಲಿ ಕೆಲವು ಭಕ್ತರ ನಡುವೆ ಜಗಳ ಉಂಟಾಗಿದೆ. ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ರಾತ್ರಿಯಿಂದಲೇ ಸಂಪರ್ಕ ದಲ್ಲಿದ್ದೇನೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಇಬ್ಬರಿಗೆ ಗಾಯವಾಗಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಪ್ರಯತ್ನ ನಡೆದಿದೆ ಎಂದರು.





