ಪ್ರಯಾಣ ನಿರ್ಬಂಧ ಹೇರಿದ ಇಡಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್
![ಪ್ರಯಾಣ ನಿರ್ಬಂಧ ಹೇರಿದ ಇಡಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್ ಪ್ರಯಾಣ ನಿರ್ಬಂಧ ಹೇರಿದ ಇಡಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್](https://www.varthabharati.in/sites/default/files/images/articles/2022/03/31/330073-1648733464.jpg)
ಹೊಸದಿಲ್ಲಿ: ಪತ್ರಕರ್ತೆ ರಾಣಾ ಅಯ್ಯೂಬ್ ಅವರು ವಿದೇಶಕ್ಕೆ ಪ್ರಯಾಣಿಸದಂತೆ ಜಾರಿ ನಿರ್ದೇಶನಾಲಯದ ನೋಟಿಸ್ ಅನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಲೈವ್ ಲಾ ಗುರುವಾರ ವರದಿ ಮಾಡಿದೆ.
ರಾಣಾ ಅಯ್ಯೂಬ್ ಅವರ ವಕೀಲರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿಂದ ಆರಂಭಿಕ ವಿಚಾರಣೆಯನ್ನು ನಡೆಸುವಂತೆ ಕೋರಿದರು. ಪತ್ರಕರ್ತೆ ತನ್ನ ಪೂರ್ವ ಬದ್ಧತೆಗಳಿಂದಾಗಿ ಲಂಡನ್ ಮತ್ತು ಇಟಲಿಗೆ ಪ್ರಯಾಣಿಸಬೇಕಾಗಿದೆ ಎಂದು ಹೇಳಿದ್ದು, ಆಕೆಯ ವಿಮಾನ ಶುಕ್ರವಾರ ಹೊರಡುತ್ತದೆ ಎಂದೂ ಹೇಳಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯ ಮೊದಲು ಪ್ರಕರಣವನ್ನು ದಾಖಲಿಸಿದರೆ ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಾಧೀಶರು ಪತ್ರಕರ್ತರ ವಕೀಲರಿಗೆ ತಿಳಿಸಿದರು.
ಮೋದಿ ಸರ್ಕಾರದ ನಿಷ್ಠುರ ವಿಮರ್ಶಕಿ ಮತ್ತು ದಿ ವಾಷಿಂಗ್ಟನ್ ಪೋಸ್ಟ್ನ ಅಂಕಣಕಾರ್ತಿಯಾಗಿರುವ ರಾಣಾ ಅಯ್ಯೂಬ್ ಅವರನ್ನು ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಜಾರಿ ನಿರ್ದೇಶನಾಲಯವು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಲಂಡನ್ಗೆ ವಿಮಾನ ಹತ್ತುವುದನ್ನು ತಡೆಯಲಾಗಿತ್ತು..