ಮಾಳಗೇಟ್ನಿಂದ ಕಾರ್ಕಳ ರಸ್ತೆ ಚತುಷ್ಪಥಕ್ಕೆ ಕೇಂದ್ರ ಅನುಮೋದನೆ: ಶೋಭಾ ಕರಂದ್ಲಾಜೆ
ಉಡುಪಿ : ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಮಾಳ ಗೇಟಿನಿಂದ ಕಾರ್ಕಳ ತನಕದ ರಸ್ತೆಯ ಚತುಷ್ಪಥಿಕರಣಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಈ ಬಗ್ಗೆ ಶೋಭಾ ಕರಂದಾಜೆ ಅವರು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಇಂದು ೧೫.೨೭ಕಿ.ಮೀ. ಉದ್ದದ ರಸ್ತೆಯನ್ನು ಚತುಷ್ಪಥಿಕರಣಗೊಳಿಸಲು ಒಟ್ಟು ೧೭೭.೮೪ ಕೋಟಿ ರೂ.ವನ್ನು ಬಿಡುಗಡೆ ಗೊಳಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಅನುಮೋದನೆಯನ್ನು ನೀಡಿದೆ ಎಂದವರು ಹೇಳಿದ್ದಾರೆ.
ಶೃಂಗೇರಿ, ಚಿಕ್ಕಮಗಳೂರು ಹಾಗೂ ಕಾರ್ಕಳ ಭಾಗದ ಜನರಿಗೆ ಪ್ರಯಾಣಿ ಸಲು ಬಹಳ ತ್ರಾಸದಾಯಕವಾಗಿದ್ದ ಈ ಮಾರ್ಗವನ್ನು ಚತುಷ್ಪಥಗೊಳಿಸಲು ಅನುಮೋದನೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕಾಮಗಾರಿಯ ಬಗ್ಗೆ ಶೀಘ್ರವೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಚಿವೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.





