ನೋಟಿಸ್ ನೀಡದೆ ಖಾತೆಗಳ ಅಮಾನತು: ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಕ್ರಮಕ್ಕೆ ಕೇಂದ್ರದ ಬೆಂಬಲ
![ನೋಟಿಸ್ ನೀಡದೆ ಖಾತೆಗಳ ಅಮಾನತು: ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಕ್ರಮಕ್ಕೆ ಕೇಂದ್ರದ ಬೆಂಬಲ ನೋಟಿಸ್ ನೀಡದೆ ಖಾತೆಗಳ ಅಮಾನತು: ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಕ್ರಮಕ್ಕೆ ಕೇಂದ್ರದ ಬೆಂಬಲ](https://www.varthabharati.in/sites/default/files/images/articles/2022/03/31/330128-1648747120.jpeg)
Photo : PTI
ಹೊಸದಿಲ್ಲಿ,ಮಾ.31: ಆರೋಪಿತ ಉಲ್ಲಂಘನೆಗಳಿಗಾಗಿ ಖಾತೆಗಳನ್ನು ಅಮಾನತುಗೊಳಿಸುವ ಮುನ್ನ ಪೂರ್ವಭಾವಿ ನೋಟಿಸ್ಗಳನ್ನು ಹೊರಡಿಸದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂದು ಕೇಂದ್ರವು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದೆ.
‘ಇಲ್ಲದಿದ್ದರೆ ಇದು ಪ್ರಜಾಪ್ರಭುತ್ವ ದೇಶದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಸಾಮಾಜಿಕ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ನೆಪದಲ್ಲಿ ವ್ಯಕ್ತಿಯ ಸ್ವಾತಂತ್ರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ’ ಎಂದು ಅಫಿಡವಿಟ್ನಲ್ಲಿ ಹೇಳಿರುವ ಕೇಂದ್ರವು, ನೋಟಿಸ್ ನೀಡದೇ ಖಾತೆಗಳನ್ನು ಅಮಾನತುಗೊಳಿಸುವ ಸಾಮಾಜಿಕ ಮಾಧ್ಯಮಗಳ ವಿರುದ್ಧ ಬಳಕೆದಾರರು ಕ್ರಮವನ್ನು ಜರುಗಿಸಬಹುದು ಎಂದು ತಿಳಿಸಿದೆ.
ತಮ್ಮ ಖಾತೆಗಳ ಅಮಾನತು ವಿರುದ್ಧ ಇಬ್ಬರು ಟ್ವಿಟರ್ ಬಳಕೆದಾರರು ಸಲ್ಲಿಸಿರುವ ಅರ್ಜಿಗಳಿಗೆ ಉತ್ತರವಾಗಿ ಸರಕಾರವು ಈ ಅಫಿಡವಿಟ್ ಅನ್ನು ದಾಖಲಿಸಿದೆ.
ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಖಾತೆಗಳನ್ನು ಅಮಾನತುಗೊಳಿಸುವ ಮುನ್ನ ಸೂಕ್ತ ನೋಟಿಸ್ಗಳನ್ನು ನೀಡುವ ಮೂಲಕ ಮೂಲಭೂತ ಹಕ್ಕುಗಳನ್ನು ಗೌರವಿಸಬೇಕು,ಇದರಲ್ಲಿ ವಿಫಲಗೊಂಡರೆ ವಾಕ್ ಮತ್ತು ಅಭಿವ್ಯಕ್ತಿ ಹಕ್ಕುಗಳ ನಿರ್ಬಂಧ ಮತ್ತು ಉಲ್ಲಂಘನೆಗಾಗಿ ಅವುಗಳನ್ನು ಉತ್ತರದಾಯಿಯನ್ನಾಗಿಸಬೇಕು ಎಂದು ಕೇಂದ್ರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.