ಮಂಗಳೂರು; ಹಣ ದರೋಡೆ ಪ್ರಕರಣದ ಎಂಟು ಮಂದಿ ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

ಮಂಗಳೂರು : ಕಾರು ಖರೀದಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬರಿಂದ ಹಣವನ್ನು ದರೋಡೆಗೈದ 8 ಮಂದಿ ಆರೋಪಿಗಳಿಗೆ 7 ವರ್ಷ ಕಠಿನ ಸಜೆ ಹಾಗೂ ದಂಡ ವಿಧಿಸಿ ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.
ಕಿಳೆಂಜಾರು ಗ್ರಾಮದ ಶಿವಪ್ರಸಾದ್ ಆಲಿಯಾಸ್ ಅಯ್ಯಪ್ಪ, ಸಂದೀಪ್ ಬಿ.ಪೂಜಾರಿ, ಕಾರ್ತಿಕ್ ಶೆಟ್ಟಿ, ತೆಂಕ ಎರ್ಮಾಳಿನ ವರುಣ್ ಕುಮಾರ್, ಹೆಜಮಾಡಿಯ ಸುವಿನ್ ಕಾಂಚನ್ ಆಲಿಯಾಸ್ ಮುನ್ನ, ಪಡುಪೆರಾರದ ಗೋಪಾಲ ಗೌಡ, ಕೊಡೆತ್ತೂರಿನ ಸುಜಿತ್ ಶೆಟ್ಟಿ, ಕಿಳೆಂಜಾರಿನ ಸುಧೀರ್ ಶಿಕ್ಷೆಗೊಳಗಾದ ಆರೋಪಿಗಳು.
ಆರೋಪಿಗಳು ಭಾರತೀಯ ದಂಡ ಸಂಹಿತೆ ಕಲಂ ೩೯೫ ಜತೆಗೆ ೩೯೭ರಡಿ ಎಸಗಿದ ಅಪರಾಧಕ್ಕೆ 7 ವರ್ಷ ಕಠಿನ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ಮತ್ತು ಕಲಂ 440ರಡಿ ಎಸಗಿದ ಅಪರಾಧಕ್ಕೆ 2 ವರ್ಷ ಸಾದಾ ಸಜೆ ಹಾಗೂ ಪ್ರತಿಯೋರ್ವರಿಗೆ 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ವಿಧಿಸಲಾಗಿದೆ.
ಆರೋಪಿತರು ದಂಡದ ಹಣ ಪಾವತಿಸಿದರೆ ದೂರುದಾರ ಚಿದಾನಂದ ಶೆಟ್ಟಿ, ಸಾಕ್ಷಿದಾರರಾದ ಅಶ್ವಿತ್, ಭರತ್, ಶಿವಪ್ರಸಾದ್ ಶೆಟ್ಟಿ ಅವರಿಗೆ ತಲಾ 15 ಸಾವಿರ ರೂ. ಹಣ ಪಾವತಿಸುವಂತೆ ಹಾಗೂ ಹಾನಿಯಾದ ಕಾರಿನ ಮಾಲಕ ಶಿವಪ್ರಸಾದ್ ಶೆಟ್ಟಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.
ನಗರದ ಅಶೋಕನಗರದ ಚಿದಾನಂದ ಶೆಟ್ಟಿ ಹಳೆಯ ಇನ್ನೋವಾ ಕಾರೊಂದನ್ನು ಖರೀದಿಸಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಕಿಳೆಂಜಾರಿನ ಸುಧೀರ್ ಎಂಬಾತ ಚಿದಾನಂದ ಶೆಟ್ಟಿಗೆ ಕರೆ ಮಾಡಿ ತಾನು ಅವಿನಾಶ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡಿದ್ದ. ಅಲ್ಲದೆ ‘ಚಿಕ್ಕಪ್ಪನ ಹಳೆಯ ಕಾರು ಮಾರಾಟಕ್ಕಿದೆ. ಈ ಬಗ್ಗೆ ಮಾತನಾಡಲು ಸುರತ್ಕಲ್ ಬಳಿ ಬರುವಂತೆ ಸೂಚಿಸಿದ್ದ. ಆತನ ಮಾತನ್ನು ನಂಬಿದ್ದ ಚಿದಾನಂದ ಶೆಟ್ಟಿ 2016ರ ಡಿ.23ರಂದು ತನ್ನ ಗೆಳೆಯ ಅಶ್ವಿತ್ನೊಂದಿಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಅಲ್ಲಿಗೆ ಬಂದಿದ್ದ ಸುಧೀರ್ ಸಂಜೆ ಮುಂಗಡ ಹಣ ತೆಗೆದುಕೊಂಡು ಕಾರ್ನಾಡ್ ಜಂಕ್ಷನ್ಗೆ ಬರುವಂತೆ ತಿಳಿಸಿದ್ದ. ಹಾಗೇ ಚಿದಾನಂದ ಶೆಟ್ಟಿಯು ಅಶ್ವಿತ್ ಮತ್ತು ಭರತ್ರೊಂದಿಗೆ ಕಾರಿನಲ್ಲಿ 2 ಲ.ರೂ. ಹಣವನ್ನಿಟ್ಟುಕೊಂಡು ಕಾರ್ನಾಡಿಗೆ ತೆರಳಿದ್ದರು. ಬಳಿಕ ಸುಧೀರ್ನೊಂದಿಗೆ ತಾಳಿಪ್ಪಾಡಿ ಹೊಸಮನೆ ಎಂಬಲ್ಲಿನ ಗುಡ್ಡ ಪ್ರದೇಶಕ್ಕೆ ತೆರಳಿದರು. ಅಲ್ಲಿ ಸುಧೀರ್ ಕಾರಿನಿಂದ ಇಳಿದು ‘ಚಿಕ್ಕಪ್ಪನ ಮನೆ ಇಲ್ಲಿಯೇ ಇದೆ. ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ಹೋದ. ಅಷ್ಟರಲ್ಲಿ ತಲವಾರು, ಕಬ್ಬಿಣದ ರಾಡ್, ಪಂಚ್ಗಳೊಂದಿಗೆ ಕಾರು, ಸ್ಕೂಟರ್ ಮತ್ತು ಬೈಕ್ನಲ್ಲಿ ಬಂದ ಆರೋಪಿಗಳು ಕಾರಿನ ಡ್ಯಾಶ್ಬೋರ್ಡ್ನಲ್ಲಿದ್ದ 2 ಲ.ರೂ. ಹಣವನ್ನು ಬಲತ್ಕಾರದಿಂದ ಕಿತ್ತು ಅಶ್ವಿತ್ನಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ದುಷ್ಕರ್ಮಿಗಳ ಹಲ್ಲೆಯಿಂದ ಅಶ್ವಿತ್ ತಪ್ಪಿಸಿಕೊಂಡಾಗ ತಲವಾರಿನ ಹೊಡೆತವು ಮೊಬೈಲ್ಗೆ ಬಿದ್ದಿತ್ತು. ಅಲ್ಲದೆ ಕಾರಿಗೆ ಹಾನಿಯಾಗಿ ಸುಮಾರು 20 ಸಾವಿರ ರೂ. ನಷ್ಟವಾಗಿತ್ತು.
ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.







