ಗೇರು ನಿಗಮದ ಆದಾಯ ಹೆಚ್ಚಿಸಲು ಶ್ರಮವಹಿಸಿ: ಬಿ.ಮಣಿರಾಜ ಶೆಟ್ಟಿ

ಉಡುಪಿ : ಗೇರು ಅಭಿವೃದ್ಧಿ ನಿಗಮದ ವಾರ್ಷಿಕ ಗೇರು ಹರಾಜಿನ ಆದಾಯ ತೀವ್ರವಾಗಿ ಕುಸಿತಗೊಂಡಿದ್ದು, ಹೆಚ್ಚು ಗುತ್ತಿಗೆದಾರರು ಭಾಗವಹಿಸಿ ನಿಗಮದ ಆದಾಯವನ್ನು ಹೆಚ್ಚಿಸಲು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಶ್ರಮ ವಹಿಸುವಂತೆ ನಿಗಮದ ಅಧ್ಯಕ್ಷ ಬಿ.ಮಣಿರಾಜ ಶೆಟ್ಟಿ ಕರೆ ನೀಡಿದ್ದಾರೆ.
ಮಂಗಳೂರು ನಗರದ ಕೊಟ್ಟಾರಚೌಕಿ ಅಬ್ಬಕ್ಕ ನಗರದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಕೇಂದ್ರ ಕಛೇರಿಯಲ್ಲಿ ರೈತರು ಮತ್ತು ಸಿಬ್ಬಂದಿಗಳಿಗೆ ಇತ್ತೀಚೆಗೆ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್ ನೆಟಾಲ್ಕರ್, ತರಬೇತಿಯ ಉದ್ದೇಶ ಮತ್ತು ನಿಗಮದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ನಿಗಮದಲ್ಲಿ ಉತ್ತಮ ಕೆಲಸ ನಿರ್ವಹಿಸಿದ ನಾರಾಯಣ ಆರ್ ದೇವಾಡಿಗ, ಸಂಜೀವ ಗೌಡ ಮತ್ತು ಬಾಲಚಂದ್ರ ಗಣಪತಿ ಮಡಿವಾಳ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಾಗಾರದಲ್ಲಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಾಶಿವ ಭಟ್, ನಿರ್ದೇಶಕ (ಪ್ರಭಾರ) ಡಾ.ಟಿ.ಎನ್.ರವಿಪ್ರಸಾದ್, ಪುತ್ತೂರು ಗೇರು ಕೃಷಿ ನಿರ್ದೇಶನಾಲಯದ ವಿಜ್ಞಾನಿ ಡಾ. ವೀಣಾ ಜಿ.ಎಲ್., ಪುತ್ತೂರು ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಡಾ. ಎ.ಪ್ರಕಾಶ್ ಮೊಂತೆರೊ ಹಾಗೂ ಇತರರು ಉಪಸ್ಥಿತರಿದ್ದರು.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಕುಮಾರ್ ಜೋಗಿ ಸ್ವಾಗತಿಸಿ ಕುಮಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಗವಾನ್ ದಾಸ್ ಕುಡ್ತಲ್ಕರ್ ವಂದಿಸಿದರು.