ಎ.2ರಿಂದ ಕಡಿಯಾಳಿ ದೇವಸ್ಥಾನದ ಗ್ರಾಮ ಭಜನೆ
ಉಡುಪಿ : 1400 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಕಡಿಯಾಳಿಯ ಶ್ರೀಮಹಿಷಮರ್ದಿನಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತಿದ್ದು, ಮೇ ೩ರಿಂದ ೧೦ರವರೆಗೆ ಇದರ ಬ್ರಹ್ಮಕಲಶೋತ್ಸವವನ್ನು ವೈಭವದಿಂದ ನಡೆಸಲು ನಿರ್ಧರಿಸಲಾಗಿದೆ.
ಇದಕ್ಕೆ ಪೂರ್ವಭಾವಿಯಾಗಿ ಕಡಿಯಾಳಿ ಗ್ರಾಮದ ಮನೆಮನೆಗಳಲ್ಲಿ ಗ್ರಾಮ ಭಜನೆ ಎಂಬ ವಿನೂತನ ಕಾರ್ಯಕ್ರಮವನ್ನು ಎ.2ರಿಂದ 28ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷ ಶ್ರೀನಾಗೇಶ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗ್ರಾಮಭಜನೆಯ ಉದ್ಘಾಟನಾ ಕಾರ್ಯಕ್ರಮ ಎ.೨ರ ಚಾಂದ್ರಮಾನ ಯುಗಾದಿಯಂದು ಸಂಜೆ ೪:೦೦ಕ್ಕೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರಿಂದ ನೆರವೇರಲಿದೆ. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ.ರಘುಪತಿ ಭಟ್, ದೇವಳದಲ್ಲಿ ಭಜನೆ ಪ್ರಾರಂಭಿಸಿದ ಉಪಾಧ್ಯ ಕುಟುಂಬಸ್ಥರು ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ರವಿರಾಜ ಆಚಾರ್ಯ ಉಪಸ್ಥಿತರಿರುವರು ಎಂದರು.
ಕಡಿಯಾಳಿ ಗ್ರಾಮದಲ್ಲಿ 1600 ಮನೆಗಳಿದ್ದು, ತಲಾ 12 ಮಂದಿಯ ಒಟ್ಟು ಐದು ತಂಡಗಳನ್ನು ರಚಿಸಿ ಪ್ರತಿದಿನ ೧೨ರಿಂದ ೧೫ಮನೆಗಳಿಗೆ ಭೇಟಿ ನೀಡಿ ನಿತ್ಯ ಭಜನೆ ಮಾಡಲಾಗುವುದು. ಈ ಭಜನಾ ತಂಡಗಳಿಗೆ ಕಾತ್ಯಾಯಿನಿ, ಪಾರ್ವತಿ, ನಾರಾಯಣಿ, ಶಾಂಭವಿ ಹಾಗೂ ಬೈರವಿ ಎಂದು ಹೆಸರಿಸಲಾಗಿದೆ. ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಮುನ್ನ ಗ್ರಾಮದ ಎಲ್ಲಾ ಮನೆಗಳಲ್ಲೂ ಭಜನಾ ಕಾರ್ಯಕ್ರಮ ನಡೆದಿರಲಿದೆ ಎಂದವರು ಹೇಳಿದ್ದಾರೆ.
ಭಜನಾ ತಂಡ ಮನೆಮನೆಗೆ ಭಜನೆಗಾಗಿ ಭೇಟಿ ನೀಡಿದಾಗ ಭಜನಾ ಪುಸ್ತಕ ಹಾಗೂ ದೇವರ ಪ್ರಸಾದ ನೀಡಲಿದೆ. ಎ.೨೮ರಂದು ಭಜನಾ ಕಾರ್ಯಕ್ರಮದ ಮಂಗಲೋತ್ಸವ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ ಎಂದು ರಾಘವೇಂದ್ರ ಕಿಣಿ ತಿಳಿಸಿದರು.
ಪತ್ರಿಕಾಗೋಷ್ಠಿಯಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಂಜುನಾಥ ಹೆಬ್ಬಾರ್, ನಾಗರಾಜ ಶೆಟ್ಟಿ ಕಡಿಯಾಳಿ, ಗ್ರಾಮದ ಭಜನಾ ತಂಡದ ಮುಖ್ಯಸ್ಥರಾದ ಜೀವರತ್ನ ದೇವಾಡಿಗ, ಸುಮಲತಾ ಉದಯ್, ಶಕುಂತಲಾ ಶೆಟ್ಟಿ, ಗೀತಾ ನಾಯಕ್, ಅಶ್ವಿನಿ ಪೈ ಉಪಸ್ಥಿತರಿದ್ದರು.