ಟಿಪ್ಪು ಕಾಲದಲ್ಲಿ ಧಾರ್ಮಿಕ ಸಹಿಷ್ಣುತೆ
ಪತ್ರಗಳೆಲ್ಲವೂ ಗೌರವ ಪೂರ್ಣವಾದ ಭಾಷೆಯಿಂದೊಡಗೂಡಿ, ಮಹಿಮಾವಂತರಲ್ಲಿ ಇರಬೇಕಾದ ಭಕ್ತಿಯಿಂದ ತುಂಬಿದೆ. ಟಿಪ್ಪು ಪರಮತ ದ್ವೇಷಿಯೆಂದೂ ಮತ್ತು ತನ್ನ ಹಿಂದೂ ಪ್ರಜೆಗಳಿಗೆ ಚಿತ್ರ ಹಿಂಸೆಯನ್ನು ಕೊಟ್ಟನೆಂದು ಹೇಳುವ ಅವಿವೇಕವನ್ನು ಸ್ಪಷ್ಟವಾಗಿ ಬಯಲಿಗಿಕ್ಕುತ್ತವೆ. ಅವನೇನಾದರೂ ಅತಿರೇಕದವನಾಗಿದ್ದರೆ ಒಬ್ಬ ಆಚಾರ್ಯನನ್ನು ಜಗದ್ಗುರುವೆಂದು ಸಂಬೋಧಿಸುತ್ತಿರಲಿಲ್ಲ ಅಥವಾ ಒಂದು ಹಿಂದೂ ವಿಗ್ರಹದ ಪುನರ್ ಪ್ರತಿಷ್ಠಾಪನೆಗೆ ಮತ್ತು ಹಿಂದೂ ಧಾರ್ಮಿಕ ಸಮಾರಂಭಗಳನ್ನಾಚರಿಸುವುದಕ್ಕೆ ಬೇಕಾಗುವ ಹಣ ಮತ್ತು ವಸ್ತುಗಳನ್ನು ಒದಗಿಸುತ್ತಿರಲಿಲ್ಲ.
ಭಾಗ-2
ಇನ್ನೊಂದು ಪತ್ರದಲ್ಲೂ ಟಿಪ್ಪು ಇದನ್ನೇ ವಿನಂತಿಸಿಕೊಂಡು (ಸಾಮ್ರಾಜ್ಯದಲ್ಲಿ ಉದ್ಭವಿಸುವ) ರಾಷ್ಟ್ರೀಯ ಪ್ರಕೃತಿ ವಿಕೋಪಗಳನ್ನು ತಡೆಗಟ್ಟಲು, ಜನರ ಕ್ಷೇಮ ಮತ್ತು ವೈರಿಗಳ ದಮನಕ್ಕೆ ಪ್ರಾರ್ಥಿಸಿ ಎಂದು ಕೇಳಿಕೊಂಡಿದ್ದನು. ಈ ರೀತಿಯ ಗುಣಗಳನ್ನು ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಗುರುಗಳ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಜನಸಾಮಾನ್ಯರಲ್ಲಿ ಗುರುತಿಸಿಕೊಂಡ ಟಿಪ್ಪುವಿನ ಹಾಗೆ ಬೇರೆ ಯಾವ ಸಾಮ್ರಾಟನೂ ಭಾರತದ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಇದಕ್ಕೆಲ್ಲ ಸಾಕ್ಷಿಗಳು ಅವನು ಬರೆದ ಪತ್ರಗಳು.
ಇದಕ್ಕಿಂತಲೂ ಮುಖ್ಯವಾದ ವಿಚಾರ ಮತ್ತು ಟಿಪ್ಪುವಿನ ವ್ಯಕ್ತಿತ್ವ ನಿರೂಪಿಸಲು ಜ್ವಲಂತ ಸಾಕ್ಷಿಯಾಗಿರುವುದು - ಅವನ ಮತ್ತು ಮರಾಠರ ಸಂಬಂಧ. ಅದು ಶೃಂಗೇರಿ ಮಠ ಮತ್ತು ಅಲ್ಲಿನ ಸುತ್ತಮುತ್ತ ಪ್ರದೇಶಗಳಲ್ಲಿ ಮರಾಠರು ನಡೆಸಿದ ಸೈನಿಕ ಕಾರ್ಯಾಚರಣೆ ಹಾಗೂ ಲೂಟಿಯ ಕುರಿತು ಟಿಪ್ಪುವಿನ ಉತ್ತರ. ಈ ಘಟನೆ ನಿಜವಾಗಿ ಮೈಸೂರು ಸಂಸ್ಥಾನದಲ್ಲಿ ಹಿಂದೂ ಧರ್ಮ, ಧಾರ್ಮಿಕ ಕೇಂದ್ರದ ರಕ್ಷಣೆಗೆ ಟಿಪ್ಪು ಮಾಡಿದ ಪ್ರಾಮಾಣಿಕ ಪ್ರಯತ್ನವನ್ನು ತಿಳಿಸುತ್ತದೆ. ಅದರಲ್ಲೂ ಒಂದು ಸಾಮ್ರಾಜ್ಯದ ಪ್ರಭುವಾಗಿ ತನ್ನ ನಾಡಿನೊಳಗೆ ಅನ್ಯ ಧರ್ಮದ ಅನುಯಾಯಿಗಳ ಹಿತರಕ್ಷಣೆ ಮತ್ತು ಅವರ ಪ್ರಾರ್ಥನಾ ಮಂದಿರವನ್ನು ಪುನರ್ಸ್ಥಾಪಿಸಲು ರಾಜ್ಯ ನೀಡಿದ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಇದು ಟಿಪ್ಪು ಯಾವುದೋ ಒಂದು ರಾಜಕೀಯ ಉದ್ದೇಶವನ್ನು ಈಡೇರಿಸಿಕೊಳ್ಳಲು ನಡೆಸಿದ ಪ್ರಯತ್ನವಾಗಿರದೆ, ಆ ದೇಶದ ಒಂದು ಉತ್ಕೃಷ್ಟ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರವನ್ನು ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತು ರಕ್ಷಿಸಲು ಮಾಡಿರುವ ಪ್ರಯತ್ನವಾಗಿ ಕಾಣುತ್ತದೆ. ಇಲ್ಲಿ ಸ್ಮರಿಸುವ ಘಟನೆ-ಹಿಂದೂ ಪ್ರಚಾರಕರು ಮತ್ತು ರಕ್ಷಕರು ಎಂದು ಕೃತಕವಾಗಿ ಹೇಳಿಕೊಂಡ ಮರಾಠರು ಮತ್ತು ಶೃಂಗೇರಿಯಲ್ಲಿ ಅವರು ನಡೆಸಿದ ಕಾರ್ಯಾಚರಣೆಗಳಿಗೆ ಸಂಬಂಧಿಸಿರುವುದು. ಅವರ ಜನರಲ್ ಪರಶುರಾಂಭು ಟಿಪ್ಪು ಸಾಮ್ರಾಜ್ಯದ ಪಶ್ಚಿಮ ಭಾಗದ ಕೆಲವು ಪ್ರದೇಶಗಳಿಗೆ ಸಂಬಂಧಿಸಿ ಬ್ರಿಟಿಷರೊಂದಿಗೆ ಪಿತೂರಿ ನಡೆಸಿದ. ಇದು ನಡೆದಿರುವುದು 1791 ಮತ್ತು 1792ರಲ್ಲಿ. ಜೂನ್ ತಿಂಗಳ 1791ರಲ್ಲಿ ಚಿತ್ರದುರ್ಗ ಮಾರ್ಗವಾಗಿ ಜನರಲ್ ಪರಶುರಾಂಭು ಸೈನ್ಯದೊಂದಿಗೆ ಕೆಲವೊಂದು ಪ್ರದೇಶಗಳನ್ನು ಆಕ್ರಮಿಸಲು ಪ್ರಯತ್ನಿಸಿದನು. ಆದರೆ, ಯಶಸ್ವಿಯಾಗಲಿಲ್ಲ. ಅದೇ ವರ್ಷ ಡಿಸೆಂಬರ್ನಲ್ಲಿ ಶಿವಮೊಗ್ಗದ ಸುತ್ತಮುತ್ತಲು 1792ರಲ್ಲಿ ಸೈನ್ಯದೊಂದಿಗೆ ಬೀಡುಬಿಟ್ಟು ನಂತರ ಬಿದನೂರು ಕಡೆ ಧಾವಿಸುತ್ತಾನೆ. ಅವನ ಉದ್ದೇಶ ಆಗಲೇ ಶ್ರೀರಂಗಪಟ್ಟಣವನ್ನು ಸುತ್ತುವರಿದ ಕಾರ್ನವಾಲಿಸನ ಜೊತೆ ಸೇರಿಕೊಂಡು ಟಿಪ್ಪುವಿನ ಶಕ್ತಿಯನ್ನು ದುರ್ಬಲಗೊಳಿಸುವುದಾಗಿತ್ತು.
ಶೃಂಗೇರಿಗೆ ಸಂಬಂಧಿಸಿದಂತೆ ಮರಾಠಾ ಜನರಲ್ ಪರಶುರಾಂಭು ಅಲ್ಲಿನ ಮಠದ ಮೇಲೆ ದಾಳಿ ಮಾಡಿದನು. ಮಠಕ್ಕೆ ಸೇರಿದ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೆ ಈ ಮಠವನ್ನು ಸೇರಿ ಶಾರದಾ ಮಂದಿರವನ್ನು ಅಪವಿತ್ರಗೊಳಿಸಿದನು. ಶಾರದಾ ಪೀಠವನ್ನು ಸಂಪೂರ್ಣ ಕುಲಗೆಡಿಸಿ ಪವಿತ್ರ ಶಾರದಾ ದೇವಿ ಮೂರ್ತಿಯನ್ನು ಪಾದಪೀಠದಿಂದ ಸ್ಥಳಾಂತರಿಸಿ ಮಠದಿಂದ ಸುಮಾರು ಅರುವತ್ತು ಲಕ್ಷ ರೂಪಾಯಿಗಳನ್ನು ದೋಚಿದನು. ಮಠದ ಸ್ವಾಮೀಜಿ ಮೈಸೂರು ಟಿಪ್ಪುವಿಗೆ ಮರಾಠಾರಿಂದ ಆದಂತಹ ಉಪಟಳ ಮತ್ತು ಲೂಟಿಯ ಸಮಾಚಾರವನ್ನು ಸವಿಸ್ತಾರವಾಗಿ ಪತ್ರದ ಮೂಲಕ ತಿಳಿಸಿದ್ದರು. ಪತ್ರದ ಸಾರಾಂಶ ಹೀಗಿದೆ: ''ಮರಾಠಾ ಸೈನ್ಯ ಮತ್ತು ಕುದುರೆ ಸವಾರರು ಶೃಂಗೇರಿಯಲ್ಲಿ ಬೀಡುಬಿಟ್ಟು, ದಾಳಿ ಮಾಡಿದರು. ಇದರಿಂದ ಅನೇಕ ಬ್ರಾಹ್ಮಣರು ಸತ್ತಿದ್ದರು. ಇನ್ನಷ್ಟು ಜನರನ್ನು ಗಾಯಗೊಳಿಸಲಾಗಿದೆ. ಶಾರದಾದೇವಿ ಮೂರ್ತಿಯನ್ನು ಉರುಳಿಸಿದ್ದಾರೆ ಮತ್ತು ಮಠದಲ್ಲಿ ಕೈಗೆ ಸಿಕ್ಕಿದ ಅತ್ಯಮೂಲ್ಯ ವಸ್ತುಗಳನ್ನು, ಸಂಪತ್ತನ್ನು ದೋಚಿಕೊಂಡು ಹೋಗಿದ್ದಾರೆ.'' ದಮನಕಾರ್ಯ ಮುಗಿದಾಗ ಸ್ವಾಮೀಜಿಯೊಂದಿಗೆ ಕೇವಲ ನಾಲ್ಕು ಮಂದಿ ಶಿಷ್ಯರು ಉಳಿದಿದ್ದು ರಕ್ಷಣೆಗಾಗಿ ಅವರನ್ನೊಡಗೂಡಿ ಕಾರ್ಕಳಕ್ಕೆ ಹೋಗಿ ನೆಲೆಸುವುದಾಗಿ ಪತ್ರದಲ್ಲಿ ತಿಳಿಸಲಾಗಿತ್ತು. ಅಲ್ಲದೆ ಮಠದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವನ್ನು ಬಯಸಿ ಟಿಪ್ಪು ಸರಕಾರವನ್ನು ವಿನಂತಿಸಿಕೊಂಡಿದ್ದರು ಮತ್ತು ಸರಕಾರದ ಸಹಾಯವಿಲ್ಲದೆ ನಮಗೆ ಯಾವುದೇ ರೀತಿಯಲ್ಲಿಯೂ ಪುನರ್ನಿಮಾಣ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲವೆಂದೂ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಇದನ್ನು ಓದಿದ ಟಿಪ್ಪು, ನೊಂದು ಅನುಕಂಪದಿಂದ ಈ ಕೆಳಗಿನಂತೆ ಸ್ವಾಮೀಜಿಗೆ ಉತ್ತರ ಬರೆದಿದ್ದನು:
''ಕಳುಹಿಸಿದ ಪತ್ರಿಕೆಯಿಂದ ಸಕಲಾಭಿಪ್ರಾಯವು ತಿಳಿಯಲಾಯಿತು. ಮರಾಠೇರ ಕಡೆ ಕುದುರೆಯವರು ಬಂದು ಶೃಂಗೇರಿಯಲ್ಲಿ ಇದ್ದ ಬ್ರಾಹ್ಮಣರು ಮುಂತಾದವರನ್ನು ಬಹಳ ಘಾತಪಾತಗಳ ಮಾಡಿ, ಶಾರದಾ ಅಮ್ಮನವರನ್ನು ಕಿತ್ತು ಹಾಕಿ, ಮಠದಲ್ಲಿ ಇದ್ದ ಸಂಪತ್ತನ್ನು ದೋಚಿಕೊಂಡು ಹೋದರು. ಪರಿಣಾಮವಾಗಿ ಸ್ವಾಮೀಜಿ ರಕ್ಷಣೆಗಾಗಿ ಕೊನೆಗೆ ಉಳಿದ ನಾಲ್ಕು ಜನ ಶಿಷ್ಯರು ಸಹ ಕಾರ್ಕಳಕ್ಕೆ ಬಂದು ಇರುವುದರಿಂದ ಶಾರದಾ ಅಮ್ಮನವರು ಯುಗಾಂತರದಲ್ಲಿ ಪ್ರತಿಷ್ಠೆ ಆದದ್ದೆ ಹೊರತು ಮತ್ತೊಂದಲ್ಲ, ಈ ದೇವರ ಪ್ರತಿಷ್ಠೆ ಆಗಬೇಕಾದರೆ ಸರಕಾರದಿಂದ ಕುಮ್ಮಕ್ಕು ಆಗಿ ದೇವರ ಪ್ರತಿಷ್ಠೆ ಮಾಡಿಸಿದಲ್ಲಿ ಸೂರ್ಯಚಂದ್ರರು ಉಳ್ಳ ಪರಿಯಂತರ ಕೀರ್ತಿ ನಿಲ್ಲುತ್ತಾ ಇದ್ದೀತು. ಈ ಬಗೆ ದವಸ, ಜಿನಸು, ಸಹ ಕೊಡುವ ಹಾಗೆ ಅಪ್ಪಣೆ ಆದಲ್ಲಿ ಸಂತರ್ಪಣೆ ಮಾಡಿಸಿ, ಪ್ರತಿಷ್ಠೆ ಮಾಡಿಸುವುದಾಗಿ ಬರೆದು ಇದ್ದುದು ಸರಿಯಷ್ಟೇ. ಅಂಥಾ ಸ್ಥಳಕ್ಕೆ ಈಗ್ಗೆ ದ್ರೋಹಿತನಾ ಮಾಡಿದ ಮೇಲೆ ಕಲಿಯುಗದಲ್ಲಿ ಮಾಡಿದ್ದನ್ನು ತರೆಯಿಂದಲೇ ಅವರು ಅನುಭವಿಸಬೇಕಾದೀತು. ಗುರುದ್ರೋಹ ಮಾಡಿದ್ದಕ್ಕೆ ವಂಶನಾಶ ಆಗುವುದರಲ್ಲಿ ಸಂದೇಹವಿಲ್ಲ. ಈ ತುಂಟ ಜನರು, ಪ್ರಜೆಗಳು ಮುಂತಾದವರಿಗೆ ಸಂಕಟಪಡಿಸುವವರು ನೀವು ಪ್ರತ್ಯಕ್ಷ ನೋಡಿಯೇ ಇದ್ದೀರಿ. ಇದಕ್ಕೆ ಅವರು ಯಾವ ಪ್ರಕಾರ ಕ್ಷೀಣಗತಿ ಆಗಬೇಕೋ ಆ ಮೇರೆಗೆ ಆಶೀರ್ವಾದ ಮಾಡುವುದು.
ಪ್ರಕೃತ ಶಾರದಾ ಅಮ್ಮನವರ ಪ್ರತಿಷ್ಠೆ ಬಗ್ಗೆ ನಗದೂನು 200 ಇನ್ನೂರು ರಹತಿ, ದವಸಾನೂ 200 ಇನ್ನೂರು ರಹತಿ, ಉಭಯಂ 400 ನಾನೂರು ರಹತಿ ಸರಕಾರದಿಂದ ಕೊಡುವ ಹಾಗೂ ಇದು ಹೊರತು ಇನ್ನೂ ಏನು ಜಿನಸು ಬೇಕಾದರೂ ಕ್ರಯಕ್ಕೆ ಕೊಡಿಸುವ ಹಾಗೆ ಸಹ ನಗರದ ಅಸಫನಿಗೆ ಮನಪೂರ್ ಮಲಪೂಫಿ ಮಾಡಿ ಕಳುಹಿಸಿ ಇದ್ದೀತು. ಮನಪೂರನ್ನು ಅಸಫ್ನ ಬಳಿಗೆ ಕಳುಹಿಸಿ, ಮಾಡಿಸಿ ದೇವರ ಸೇವೆಯು ನಡೆಯುವಂತೆ ಮಾಡಿಸುತ್ತಾ, ನಮ್ಮ ಶ್ರೇಯಸ್ಸು ಅಭಿವೃದ್ಧಿ ಆಗುವ ಹಾಗೂ ಶತ್ರುನಾಶ ಆಗುವ ಪ್ರಕಾರಕ್ಕೆ (ಸಹ) ತಪಸ್ಸು ಮಾಡಿಕೊಂಡು, ಸ್ಥಳದಲ್ಲಿ ಇರುವಂತೆ ಮಾಡಿಸುವುದು.''
1791ರಲ್ಲಿ ಬರೆದ ಇನ್ನೊಂದು ಪತ್ರದಲ್ಲಿ:
ಈ ಹಿಂದೆ ಮಠವನ್ನು ಲೂಟಿಮಾಡಿ ಹೋದ ಪರಶುರಾಂಬುಗೆ ಒಂದು ಆಜ್ಞೆ ಹೊರಡಿಸಿ, ಅವನು ಕೊಂಡು ಹೋದ ವಸ್ತುಗಳನ್ನು ವಾಪಸ್ಸು ಕೇಳಿ ಪತ್ರ ಬರೆಯಲು ಸ್ವಾಮೀಜಿಗೆ ತಿಳಿಸಿದ್ದನು. ''ಮಠದಿಂದ ಅರವತ್ತು ಲಕ್ಷ ರೂಪಾಯಿ ಸಾಮಾನು ಲೂಟಿಸಿ ಹೋಗಿ ಇರುವುದು ಕೊಟ್ಟು ಕಳುಹಿಸಿದ್ದೀರಷ್ಟೆ. ಈ ತಾಕೀತಿ ಪರಶುರಾಮನಿಗೆ ತೋರಿಸಿ, ಸಾಮಾನು ಕೊಡು, ಎಂಬುದಾಗಿ ಕೇಳುವುದು, ಸಾಮಾನು ಕೊಟ್ಟರೆ ಸರಿ; ಇಲ್ಲವಾದರೆ ತಾಕೀತಿ ಹಿಂದಕ್ಕೆ ತೆಗೆದುಕೊಂಡು, ಸಾಬೀತು ಅಪ್ಪಣೆ ಕೊಡಿಸಿ ಇರುವ ಮೇರೆಗೆ ಮುಂದೆ ಸಾಗಿ ಹೋಗುವ ಹಾಗೆ ಸಹ ಬರೆದು ಕಳುಹಿಸುವುದು.''
ಇನ್ನೊಂದು ಪತ್ರದಲ್ಲಿ, ಸ್ವಾಮೀಜಿಯನ್ನು ವಿನಂತಿಸಿ ಸಹಸ್ರ ಚಂಡಿಯಾಗ ಮತ್ತು ನಲವತ್ತು ಎಂಟು ದಿನಗಳು ಬಿಡದೆ ಪೂಜಾ ಪುರಸ್ಕಾರವನ್ನು ಮಠದಲ್ಲಿ ಹಮ್ಮಿಕೊಳ್ಳಲು ಕೇಳಿಕೊಂಡಿದ್ದನು. ಈ ಪೂಜೆ ಪುರಸ್ಕಾರಗಳಿಗೆ ಸಂಬಂಧಿಸಿ ದೇವರಿಗೆ ಒಂದು ಪಲ್ಲಕ್ಕಿಯನ್ನು ಕಳುಹಿಸಲಾಗಿದೆ ಹಾಗೂ ಇನ್ನೊಂದು ಪಲ್ಲಕ್ಕಿಯನ್ನು ರಾಜಧಾನಿಯಿಂದ ಸ್ವಾಮೀಜಿಯ ಖಾಸಗಿ ಉಪಯೋಗಕ್ಕೆ ಕಳುಹಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮತ್ತೊಂದು ಪತ್ರದಲ್ಲಿ ಜನರಲ್ ಪರಶುರಾಂಭು ಎಲ್ಲಿದ್ದನೆಂದು ಹುಡುಕಲು ಈಗಾಗಲೇ ಕಳುಹಿಸಿದ ನರಸಿಂಹ ಶಾಸ್ತ್ರಿಯಿಂದ ಸುದ್ದಿ ಸಮಾಚಾರ ತಿಳಿದುಕೊಳ್ಳಲು ಸ್ವಾಮೀಜಿಯವರನ್ನು ಕೇಳಿಕೊಳ್ಳಲಾಗಿದೆ. ಜೊತೆಗೆ ರಾಜನು ಹಾಗೂ ರಾಜ್ಯದ ಶ್ರೇಯೋಭಿವೃದ್ಧಿಗೆ ಮತ್ತು ಸಂಸ್ಥಾನಕ್ಕೆ ಧಕ್ಕೆ ತರುವ ಮೂರು ವೈರಿಗಳ ನಾಶಕ್ಕೆ ಶ್ರೀ ದೇವರಿಗೆ ದಿನದಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಪ್ರಾರ್ಥನೆ ಸಲ್ಲಿಸಲು ಕೇಳಿಕೊಂಡು, ಅದಕ್ಕೆ ತಗಲುವ ಖರ್ಚನ್ನು ಸರಕಾರವೇ ಬರಿಸುವುದೆಂದು ಪತ್ರದ ಮೂಲಕ ಆಶ್ವಾಸನೆ ನೀಡಲಾಗಿದೆ.
1793ರಲ್ಲಿ ಬರೆದ ಪತ್ರದಲ್ಲಿ ಪರಶುರಾಮನನ್ನು ಹುಡುಕಲು ಸುಲ್ತಾನನಿಗೆ ಅತ್ಯಂತ ಹೆಚ್ಚು ಮುತುವರ್ಜಿ ಇದ್ದು, ಅವನು ಕಳುಹಿಸಿ ಕೊಟ್ಟವನಿಂದ ಯಾವುದೇ ಮಾಹಿತಿ ಲಭಿಸದ ಕಾರಣ ಟಿಪ್ಪು ತಾನೇ ಪೂನಾದವರೆಗೆ ಹೋಗಿ ವಿಚಾರಿಸಿ ಬರಲು ನಿರ್ಧರಿಸಿರುವ ಬಗ್ಗೆ ಸ್ವಾಮೀಜಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ಆಸ್ಥಾನಕ್ಕೆ ಸ್ವಾಮೀಜಿಯನ್ನು ಆಹ್ವಾನಿಸಿದ್ದನು. ಅಲ್ಲಿಯೇ ಸ್ವಾಮೀಜಿಗೆ ಗೌರವ ಸಮಾರಂಭವನ್ನು ಏರ್ಪಡಿಸುವ ಪ್ರಯತ್ನವೂ ಅವನದ್ದಾಗಿತ್ತು. ನಂತರ ನಂಜನಗೂಡು ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿಕೊಟ್ಟು ಟಿಪ್ಪು ತನ್ನ ಯಾತ್ರೆಯನ್ನು ಆರಂಭಿಸುವ ಅಭಿಲಾಷೆಯನ್ನು ಪತ್ರದಲ್ಲಿ ಬರೆದಿದ್ದನು.
ಮೇಲೆ ಪ್ರಸ್ತಾಪಿಸಿರುವ ಪತ್ರಗಳನ್ನು ಗಮನಿಸುವಾಗ ಅವುಗಳಿಂದ ಟಿಪ್ಪುವಿನ ಕಾಳಜಿ ಮತ್ತು ವ್ಯಕ್ತಿತ್ವವನ್ನು ತಿಳಿಯಬಹುದು. ಇದು ಶೃಂಗೇರಿ ಗುರುವಿನ ಕ್ಷೇಮ ಮತ್ತು ಅಲ್ಲಿ ನಡೆಯುತ್ತಿರುವ ವಿದ್ಯಾರ್ಜನೆಯ ವೃದ್ಧಿಗೆ ಸಂಬಂಧಿಸಿದವುಗಳು. ಪ್ರತಿಯೊಂದು ಪತ್ರದಲ್ಲೂ ಟಿಪ್ಪುವಿಗೆ ಸ್ವಾಮೀಜಿ ಬಗ್ಗೆ ಇರುವ ಗೌರವವನ್ನು ತಿಳಿಯಬಹುದು ಮತ್ತು ದೇಶದ ಶ್ರೇಯೋಭಿವೃದ್ಧಿಗೆ ಅವರಿಂದ ಪ್ರಾರ್ಥನೆ ಮಾಡಿಸಿ ಅವರಿಂದ ಆಶೀರ್ವಾದವನ್ನು ನಿರೀಕ್ಷಿಸುತ್ತಿದ್ದನು. 1791ರಲ್ಲಿ ಬರೆದ ಒಂದು ಪತ್ರದಲ್ಲಿ ದೇವರಿಗೆ ನೈವೇದ್ಯ ಮಾಡಲು ಕಳುಹಿಸಿದ ಪ್ರಸಾದವನ್ನು, ಶಾಲುಗಳನ್ನು ಮತ್ತು ಬಟ್ಟೆಯಲ್ಲಿ ಒಂದು ಅಭಿಪ್ರಾಯವನ್ನು ಬರೆಸಲಾಗಿತ್ತು. ಇನ್ನೊಂದು ಪತ್ರದಲ್ಲಿ ತನ್ನ ಎಲ್ಲಾ ಅಧಿಕಾರಿಗಳನ್ನು ವಿನಂತಿಸಿ ಮಠದ ಪ್ರತಿನಿಧಿಗಳಿಗೆ ಬಂದೊದಗುವ ವಿಪತ್ತುಗಳನ್ನು ದೂರ ಮಾಡಬೇಕು, ಅವರು ಸ್ವಾಮೀಜಿ ಹೋಗುವ ಮತ್ತು ಬರುವ ದಾರಿಯಲ್ಲಿ ಆಗಬಹುದಾದ ಅನಾಹುತಗಳಿಂದ ರಕ್ಷಣೆ ಮಾಡಬೇಕೆಂದು ಕೇಳಿಕೊಂಡಿದ್ದನು. ಸ್ವಾಮೀಜಿಯ ವೈಯಕ್ತಿಕ ರಕ್ಷಣೆಯ ಸಂಬಂಧವಾಗಿ 1791ರಲ್ಲಿ ಬರೆದ ಪತ್ರದಲ್ಲಿ, ತಾನು ಕೊಪ್ಪಹೋಬಳಿಯ ಅಮೀಲ್ದಾರನಿಗೆ ಸಂದೇಶ ಕಳುಹಿಸಿ ಮಠಕ್ಕೆ ಪರಕೀಯರ ದಾಳಿಯಾಗದಂತೆ ಬಂದೋಬಸ್ತು ಮಾಡಲು ಏರ್ಪಾಡು ಮಾಡಿದ ಬಗ್ಗೆ ಬರೆಯಲಾಗಿದೆ ಮತ್ತು ಅದಕ್ಕಾಗಿ ಮೈಸೂರಿನಿಂದ ಪ್ರತ್ಯೇಕ ಸೈನಿಕ ತುಕಡಿಯನ್ನು ಕೊಪ್ಪಅಮೀಲ್ದಾರನ ನೆರವಿಗಾಗಿ ಕಳುಹಿಸಲಾಗಿದೆ ಎಂಬುದನ್ನು ಪತ್ರ ಉಲ್ಲೇಖಿಸುತ್ತದೆ.
1792ರ ಒಂದು ಪತ್ರದಲ್ಲಿ ತನ್ನ ರಾಜ್ಯದ ಎಲ್ಲಾ ಅಧಿಕಾರಿಗಳನ್ನು ವಿನಂತಿಸಿ ಸ್ವಾಮೀಜಿಯನ್ನು ಗೌರವಪೂರ್ವಕವಾಗಿ ನೋಡಿಕೊಂಡು ಅವರ ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಬೇಕೆಂದೂ ತಿಳಿಸಲಾಗಿದೆ. 1793ರ ಇನ್ನೊಂದು ಪತ್ರದಲ್ಲಿ ನಾಡಿನಲ್ಲಿ ಸ್ವಾಮೀಜಿಗಳ ಇರುವಿಕೆಯ ಪ್ರಾಮುಖ್ಯತೆಯನ್ನು ಪ್ರೀತಿ ಪೂರ್ವಕವಾಗಿ ಹೀಗೆ ಬರೆಯುತ್ತಾನೆ. ''ಶ್ರೀಮತ್ ಪರಮ ಹಂಸದಿ-ಯತೋ ಬಿರುದು ಅಂಕಿತರು ಆದಂತ ಶೃಂಗೇರಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳವರಿಗೆ ಟಿಪ್ಪು ಸುಲ್ತಾನ ಪದಶಾಹರವರ ಸಲಾಮು. ತಾವು ಬರೆಸಿ ಕಳುಹಿಸಿದ ಪತ್ರಿಕೆಯಿಂದ ಸಕಲ ಅಭಿಪ್ರಾಯವು ತಿಳಿಯಿತು. ತಾವು ಜಗದ್ಗುರುಗಳು, ಸರ್ವಲೋಕಕ್ಕು ಕ್ಷೇಮ ಆಗಬೇಕು, ಜನರಲ್ಲಿ ಸಾಸ್ತದಲ್ಲಿ ಇರಬೇಕೆಂಬುದಾಗಿ ತಪಸ್ಸು ಮಾಡುತ್ತಾ ಇದ್ದೀರಿ, ಸರಕಾರದ ಕ್ಷೇಮಾ ಉತ್ತರೋತ್ತರ ಅಭಿವರ್ಧಮಾನ ಆಗುವಂತೆ ತ್ರಿಕಾಲ ತಪಸ್ಸು ಮಾಡುವಲ್ಲಿಯೂ ಈಶ್ವರ ಪ್ರಾರ್ಥನೆ ಮಾಡುತ್ತ ಬರುವುದು ತಮ್ಮಂಥಾ ದೊಡ್ಡವರು ಯಾವ ದೇಶದಲ್ಲಿ ಇದ್ದರೂ ಆ ದೇಶಕ್ಕೆ, ಮಳೆ, ಬೆಳೆ, ಸಕಲವೂ ಆಗಿ ಇರತಕ್ಕದ್ದರಿಂದ ಪರಸ್ಥಳದಲ್ಲಿ ಬಹಳ ದಿವಸ ತಾವು ಯಾತಕ್ಕೆ ಇರಬೇಕು? ಹೋದ ಕೆಲಸವನ್ನು ಕ್ಷಿಪ್ರದಲ್ಲಿ ಅನುಕೂಲ ಮಾಡಿಸಿಕೊಂಡು ಸ್ಥಳಕ್ಕೆ ಸಾಗಿ ಬರುವಂತೆ ಮಾಡಿಸುವುದು.
1793ರಲ್ಲಿ ಬರೆದ ಮತ್ತೊಂದು ಪತ್ರದಲ್ಲಿ ಮಠದಲ್ಲಿ ನಡೆಯುವ ಹಬ್ಬಹರಿದಿನ ಮತ್ತು ಉತ್ಸವಗಳು ಸ್ವಾಮೀಜಿಗಳ ಅನುಗ್ರಹದ ಪ್ರಕಾರ ನಡೆಯಬೇಕು. ಈ ಸಂಬಂಧವಾಗಿ ಶೃಂಗೇರಿಗೆ ಭೇಟಿ ನೀಡುವ ಎಲ್ಲಾ ಯಾತ್ರಿಕರಿಗೆ ಛತ್ರದಲ್ಲಿ ಊಟ ಬಡಿಸಲು ಮತ್ತು ಇನ್ನಿತರ ಸವಲತ್ತುಗಳನ್ನು ನೀಡಲು ಸಹಕಾರ ಆಗುವಂತೆ ನಗರದ ಅಧಿಕಾರಿ ಅಸಫನಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಬರೆಯಲಾಗಿದೆ. ಜೊತೆಗೆ ಸ್ವಾಮೀಜಿ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ತನಗೆ ಆಗಾಗ ಪತ್ರ ಮುಖೇನ ತಿಳಿಸಲು ವಿನಂತಿಸಿಕೊಳ್ಳಲಾಗಿದೆ. 1790ರಲ್ಲಿ ಬರೆದ ಮೂರು ಪತ್ರಗಳೂ ಸುಲ್ತಾನನಿಗೆ ಸ್ವಾಮೀಜಿ ಆರೋಗ್ಯ, ಕ್ಷೇಮ ಮತ್ತು ಶ್ರೇಯೋಭಿವೃದ್ಧಿ ಬಗೆಗೆ ಇರುವ ಕಾಳಜಿಯನ್ನು ತಿಳಿಸುತ್ತದೆ. ಸ್ವಾಮೀಜಿ ಅಸ್ವಸ್ಥರಾಗಿದ್ದಾಗಲೂ ತನ್ನದೇ ಅಧಿಕಾರಿಗಳನ್ನು ಶೃಂಗೇರಿಗೆ ಕಳುಹಿಸಿ ತನ್ನ ಹಿತವಚನಗಳನ್ನು ಕಳುಹಿಸಿದ್ದನು.
ಈ ಎಲ್ಲಾ ಪತ್ರಗಳ ವಿಷಯಗಳನ್ನು ಗಮನಿಸುವಾಗ ಅವುಗಳು ಟಿಪ್ಪುವಿಗೆ ಹಿಂದೂ ಧರ್ಮದ ಬಗ್ಗೆ ಇರುವ ಅಭಿಮಾನವನ್ನು ಎಳೆ ಎಳೆಯಾಗಿ ವಿವರಿಸುತ್ತವೆ. ಪ್ರಾರ್ಥನೆ ವಿಚಾರದಲ್ಲಿ ದೇಶಕ್ಕಿಂತಲೂ ಧರ್ಮದ ರಕ್ಷಣೆ ಮುಖ್ಯವಾದುದು ಎಂದು ಅವನು ಬರೆದ ಪತ್ರಗಳಿಂದ ತಿಳಿದು ಬರುತ್ತದೆ. ಇದಕ್ಕಾಗಿ ಅವನ ಪ್ರಜೆಗಳೂ ಅಭಾ ರಿಯಾಗಿದ್ದರು ಎಂಬುದು ತಿಳಿದು ಬರುತ್ತದೆ.
ಪತ್ರಗಳೆಲ್ಲವೂ ಗೌರವ ಪೂರ್ಣವಾದ ಭಾಷೆಯಿಂದೊಡಗೂಡಿ, ಮಹಿಮಾವಂತರಲ್ಲಿ ಇರಬೇಕಾದ ಭಕ್ತಿಯಿಂದ ತುಂಬಿದೆ. ಟಿಪ್ಪು ಪರಮತ ದ್ವೇಷಿಯೆಂದೂ ಮತ್ತು ತನ್ನ ಹಿಂದೂ ಪ್ರಜೆಗಳಿಗೆ ಚಿತ್ರ ಹಿಂಸೆಯನ್ನು ಕೊಟ್ಟನೆಂದು ಹೇಳುವ ಅವಿವೇಕವನ್ನು ಸ್ಪಷ್ಟವಾಗಿ ಬಯಲಿಗಿಕ್ಕುತ್ತವೆ. ಅವನೇನಾ ದರೂ ಅತಿರೇಕದವನಾಗಿದ್ದರೆ ಒಬ್ಬ ಆಚಾರ್ಯನನ್ನು ಜಗದ್ಗುರುವೆಂದು ಸಂಬೋಧಿಸುತ್ತಿರಲಿಲ್ಲ ಅಥವಾ ಒಂದು ವಿಗ್ರಹದ ಹಿಂದೂ ಪುನರ್ ಪ್ರತಿಷ್ಠಾಪನೆಗೆ ಮತ್ತು ಹಿಂದೂ ಧಾರ್ಮಿಕ ಸಮಾರಂಭಗಳನ್ನಾಚರಿಸುವುದಕ್ಕೆ ಬೇಕಾಗುವ ಹಣ ಮತ್ತು ವಸ್ತುಗಳನ್ನು ಒದಗಿಸುತ್ತಿರಲಿಲ್ಲ.
ಅವನ ಸುತ್ತೆಲ್ಲ ಶತ್ರುಗಳು ತುಂಬಿಕೊಂಡಿರುವಾಗ, ತನ್ನ ಹಿಂದೂ ಪ್ರಜೆಗಳ ಸಂಪೂರ್ಣವಾದ ಬೆಂಬಲವನ್ನು ಪಡೆಯಲೆಂದು ಸಮಾಧಾನಕ್ಕಾಗಿ ಸ್ವಾಮೀಜಿಗಳಿಗೆ ಈ ಔದಾರ್ಯವನ್ನು ತೋರಿದನೆಂದೂ ವಾದಿಸಬಹುದು. ಆದರೆ ದೇವಸ್ಥಾನದಲ್ಲಿನ ಆವರ ಆಸಕ್ತಿ ಮತ್ತು ಸ್ವಾಮಿಗಳಲ್ಲಿನ ಅವನ ಭಕ್ತಿಗಳು ಯುದ್ಧ ಕಾಲಕ್ಕೆ ಮಾತ್ರ ಸೀಮಿತಗೊಂಡಿರದೆ ಶ್ರೀರಂಗಪಟ್ಟಣದ ಪತನದವರೆಗೂ ಅದು ಮುಂದುವರಿಯಿತೆಂಬುದನ್ನು ನಾವು ನೆನಪಿನಲ್ಲಿಟ್ಟಿರಬೇಕು. ಟಿಪ್ಪು ಒಬ್ಬ ಅತಿರೇಕದ ಮುಸ್ಲಿಮನಾಗಿದ್ದರೆ ಅಂತಹ ಭಾಷೆಯಲ್ಲಿ ಹಿಂದೂ ಗುರುವೊಬ್ಬನಿಗೆ ಬರೆಯುತ್ತಿರಲಿಲ್ಲ ಅಥವಾ ತನ್ನ ಮತಕ್ಕೆ ವಿರೋಧವೆನ್ನಿಸಿದ ಪೂಜೆಯ ರೀತಿಯನ್ನು ನಂಬಿ, ಅಂತಹದ್ದಕ್ಕೆ ಉತ್ತೇಜನವನ್ನೀಯುತ್ತಿರಲಿಲ್ಲ.