ರಶ್ಯ ವಿದೇಶಾಂಗ ಸಚಿವರನ್ನು ಭೇಟಿಯಾದ ಪ್ರಧಾನಿ: ಹಿಂಸಾಚಾರ ನಿಲ್ಲಿಸುವಂತೆ ಕರೆ
![ರಶ್ಯ ವಿದೇಶಾಂಗ ಸಚಿವರನ್ನು ಭೇಟಿಯಾದ ಪ್ರಧಾನಿ: ಹಿಂಸಾಚಾರ ನಿಲ್ಲಿಸುವಂತೆ ಕರೆ ರಶ್ಯ ವಿದೇಶಾಂಗ ಸಚಿವರನ್ನು ಭೇಟಿಯಾದ ಪ್ರಧಾನಿ: ಹಿಂಸಾಚಾರ ನಿಲ್ಲಿಸುವಂತೆ ಕರೆ](https://www.varthabharati.in/sites/default/files/images/articles/2022/04/2/330309-1648840443.jpg)
ಹೊಸದಿಲ್ಲಿ: ರಶ್ಯದ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಅವರನ್ನು ಶುಕ್ರವಾರ ಸಂಜೆ ಇಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಯವರು, ಶಾಂತಿ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ಸಲ್ಲಿಸಲು ಭಾರತವು ಸಿದ್ಧವಾಗಿದೆ ಎಂದು ಹೇಳಿದರು.
ರಶ್ಯದಿಂದ ಉಕ್ರೇನ್ ಆಕ್ರಮಣದ ವಿರುದ್ಧ ನಿಲುವು ತಳೆಯುವಂತೆ ಭಾರತದ ಮೇಲೆ ಅಂತರರಾಷ್ಟ್ರೀಯ ಒತ್ತಡದ ನಡುವೆಯೇ ಮೋದಿ ಮತ್ತು ಲಾವ್ರೊವ್ 40 ನಿಮಿಷಗಳ ಕಾಲ ಮಾತುಕತೆಗಳನ್ನು ನಡೆಸಿದರು.
ಕಳೆದ ಎರಡು ವಾರಗಳಲ್ಲಿ ಪ್ರಧಾನಿ ಬ್ರಿಟನ್, ಚೀನಾ, ಆಸ್ಟ್ರಿಯಾ, ಗ್ರೀಸ್ ಮತ್ತು ಮೆಕ್ಸಿಕೊ ಸೇರಿದಂತೆ ಭಾರತಕ್ಕೆ ಆಗಮಿಸಿದ್ದ ಇತರ ಯಾವುದೇ ವಿದೇಶಿ ಸಚಿವರನ್ನು ಸಾರ್ವಜನಿಕವಾಗಿ ಭೇಟಿಯಾಗಿಲ್ಲ.
ಶಾಂತಿ ಮಾತುಕತೆಗಳು ಸೇರಿದಂತೆ ಉಕ್ರೇನ್ ನಲ್ಲಿಯ ಸ್ಥಿತಿಯ ಕುರಿತು ಲಾವ್ರೊವ್ ಮೋದಿಯವರಿಗೆ ಮಾಹಿತಿ ನೀಡಿದರು. ಇದೇ ವೇಳೆ ಪ್ರಧಾನಿಯವರು ಹಿಂಸಾಚಾರವನ್ನು ಕೊನೆಗೊಳಿಸುವಂತೆ ಕರೆ ನೀಡಿದರು. ಶಾಂತಿ ಪ್ರಯತ್ನಗಳಲ್ಲಿ ಯಾವುದೇ ರೀತಿಯ ಕೊಡುಗೆಯನ್ನು ಸಲ್ಲಿಸಲು ಭಾರತವು ಸಿದ್ಧವಿದೆಯೆಂದು ಅವರು ತಿಳಿಸಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಉಕ್ರೇನ್ ಮತ್ತು ರಶ್ಯ ನಡುವೆ ಮಧ್ಯವರ್ತಿಯ ಪಾತ್ರವನ್ನು ನಿರ್ವಹಿಸಲು ಭಾರತವು ಸಿದ್ಧವಿದೆ ಎನ್ನುವುದನ್ನು ಈ ಹೇಳಿಕೆಯು ಸೂಚಿಸುತ್ತದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಭಾರತವು ಇತರ ದೇಶಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಮತ್ತು ಪ್ರಮುಖ ವಿದೇಶಿ ನಾಯಕರ ಸರಣಿ ಭೇಟಿಗಳಿಗೆ ಸಾಕ್ಷಿಯಾಗಿದೆ ಎನ್ನುವುದನ್ನು ಮೂಲಗಳು ಬೆಟ್ಟು ಮಾಡಿವೆ.
ಉಕ್ರೇನ್ ಬಿಕ್ಕಟ್ಟಿನಲ್ಲಿ ಮೋದಿಯವರು ಮಧ್ಯವರ್ತಿಯ ಪಾತ್ರವನ್ನು ವಹಿಸುವ ಸಾಧ್ಯತೆ ಕುರಿತಂತೆ ಲಾವ್ರೊವ್, ಭಾರತವು ಮುಖ್ಯ ಮತ್ತು ಗಂಭೀರವಾದ ದೇಶವಾಗಿದೆ. ಭಾರತವು ನಮ್ಮ ಸಾಮಾನ್ಯ ಪಾಲುದಾರನಾಗಿದೆ. ಅದು ಪರಿಹಾರವನ್ನು ಒದಗಿಸುವ ಪಾತ್ರವನ್ನು ವಹಿಸಿದರೆ ನಾವು ಉಕ್ರೇನ್ ಸುರಕ್ಷತೆಯ ಖಾತರಿಯ ಪರವಾಗಿದ್ದೇವೆ. ಪಾಶ್ಚಾತ್ಯ ಜಗತ್ತು ತನ್ನ ಹೊಣೆಗಾರಿಕೆಯನ್ನು ಕಡೆಗಣಿಸಿದೆ. ಇಂತಹ ಪ್ರಕ್ರಿಯೆಯನ್ನು ಭಾರತವು ಬೆಂಬಲಿಸಬಹುದಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಸಂದೇಶವನ್ನು ಪ್ರಧಾನಿ ಮೋದಿಯವರಿಗೆ ಖುದ್ದಾಗಿ ತಲುಪಿಸಲು ತಾನು ಬಯಸಿರುವುದಾಗಿ ಲಾವ್ರೊವ್ ಶುಕ್ರವಾರ ಬೆಳಿಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆಗಳ ಆರಂಭದಲ್ಲಿ ಹೇಳಿದ್ದರು.