ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕು : ಬಿಬಿಎಂಪಿ ಆದೇಶ
ʼಪ್ರಾಣಿಗಳಿಗೆ ಹಿಂಸೆ ನೀಡಿದರೆ ದಂಡʼ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.2: ಜಟ್ಕಾ ಕಟ್ ವಿವಾದದ ನಡುವೆ ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ.
ಪಶುಸಂಗೋಪನಾ ಇಲಾಖೆಯಿಂದ ಈ ಬಗ್ಗೆ ಆದೇಶ ಹೊರಡಿಸಿದ್ದು, ಪ್ರಾಣಿ ವಧೆ ಮಾಡುವ ಮುನ್ನ ಸ್ಟನ್ನಿಂಗ್ ಮಾಡಿಸಲೇಬೇಕು. ಕೋಳಿ, ಕುರಿ ಸೇರಿದಂತೆ ಇನ್ನಿತರ ಮಾಂಸ ಮಾರಾಟ ಅಂಗಡಿಗಳು ಆದೇಶ ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ.
ಸ್ಟನ್ನಿಂಗ್ ಎಂದರೆ, ಪ್ರಾಣಿಗಳನ್ನು ವಧೆ ಮಾಡುವ ಮೊದಲು ಪ್ರಜ್ಞೆ ತಪ್ಪಿಸುವ ವಿಧಾನ ಆಗಿದೆ. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ ಅವುಗಳಿಗೆ ನೋವು ತಿಳಿಯುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆ, ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದಿದ್ದವು. ಹೀಗಾಗಿ ಈಗ ಆದೇಶ ಹೊರಡಿಸಲಾಗಿದೆ.
ಆಹಾರಕ್ಕಾಗಿ ಪ್ರಾಣಿವಧೆ ಮಾಡುವಾಗ ಹಿಂಸೆ ನೀಡಬಾರದು. ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕು. ಬೆಂಗಳೂರು ವ್ಯಾಪ್ತಿಯಲ್ಲಿ 'ಸ್ಟನ್ನಿಂಗ್' ಮಾಡುವುದು ಕಡ್ಡಾಯ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಉಮಾಪತಿ ತಿಳಿಸಿದ್ದಾರೆ.
ಪ್ರಾಣಿಗಳಿಗೆ ಹಿಂಸೆ ನೀಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೀರಿದರೆ 50 ಸಾವಿರದಿಂದ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.








