ಬಹುಮುಖ ಪ್ರತಿಭೆ ಜ್ಞಾನ ರೈಗೆ ಕರುನಾಡ ತಾರೆ ಪ್ರಶಸ್ತಿ

ಪುತ್ತೂರು: ಸಂಯೋಗ ಕಲಾಶಾಲೆ ಬೆಂಗಳೂರು ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಪುತ್ತೂರಿನ ಕುರಿಯ ನಿವಾಸಿ ಜ್ಞಾನ ರೈ ಅವರಿಗೆ ಕರುನಾಡ ತಾರೆ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆ ಬೆಂಗಳೂರು ಇದರ ರಾಜ್ಯಾಧ್ಯಕ್ಷ, ರಂಗಕರ್ಮಿ ಕೆಂಚನೂರು ಶಂಕರ್, ಅಂತರ್ರಾಷ್ಟ್ರೀಯ ಚಿತ್ರಕಲಾವಿದೆ ಡಾ. ಮೀರಾ ಕುಮಾರ್, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ. ಪದ್ಮ ಪ್ರಕಾಶ್, ಜನಪದ ವಿದ್ವಾಂಸರೂ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಡಾ. ಪಿ .ಎಂ. ಗಂಗಾಧರಯ್ಯ,ಸಿರಿ ವಾಹಿನಿಯ ಸಂಪಾದಕೀಯ ಮುಖ್ಯಸ್ಥರು ಸುರೇಶ್ ಚಿಕ್ಕಣ್ಣ, ಚಲನಚಿತ್ರ ನಿರ್ಮಾಪಕ, ನಟ ಮಹೇಂದ್ರ ಮನೋತ್ ಜೈನ್, ಸಂಯೋಗ ಕಲಾಶಾಲೆಯ ಜ್ಯೋತಿ ಬಿಡೆ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಿದ್ದಗಂಗಾಶ್ರೀ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ, ಸಮಾಜ ಸೇವಾ ರತ್ನ ರಾಜ್ಯಪ್ರಶಸ್ತಿ, ಆದಿಗ್ರಾಮೋತ್ಸವ ಪ್ರತಿಭಾ ಸಿರಿ ಗೌರವ ಪ್ರಶಸ್ತಿ, ಸುದ್ದಿ ಬಿಡುಗಡೆಯ ಪ್ರತಿಭಾ ದೀಪ ಪ್ರಶಸ್ತಿ ಪುರಸ್ಕೃತೆಯಾಗಿರುವ ಬಾಲಪ್ರತಿಭೆ ಜ್ಞಾನ ರೈ ಕುರಿಯ ಈಗಾಗಲೇ ಹಲವಾರು ಕಿರುಚಿತ್ರ ಹಾಗೂ ಆಲ್ಬಂ ಸಾಂಗ್ ಗಳಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ನೃತ್ಯ, ಅಭಿನಯ ಮಾತ್ರವಲ್ಲದೆ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲೂ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಹಲವಾರು ಫೋಟೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ವಿಜೇತೆಯಾಗಿರುವ ಇವರು ಜಾಹೀರಾತಿನಲ್ಲೂ ನಟಿಸಿರುತ್ತಾರೆ. ಧಾರ್ಮಿಕ ಶಿಕ್ಷಣದತ್ತ ಒಲವು ತೋರಿರುವ ಇವರು ಕೂಡ್ಲಿಗಿಯ ಗುರುದೇವ ಗುರುಕುಲದ ಶಶಿಧರ್ ಗುರೂಜಿಯವರಿಂದ ಭಗವದ್ಗೀತೆ ಪಠಣ, ನಿತ್ಯ ಶ್ಲೋಕಗಳು, ಅಬಾಕಸ್, ಗಾಂಧಾರಿ ವಿದ್ಯೆಯನ್ನು ಕಲಿತಿರುತ್ತಾರೆ.
ಪ್ರಸ್ತುತ ಭರತನಾಟ್ಯ, ಸಂಗೀತ, ಯಕ್ಷಗಾನ, ಕರಾಟೆ, ಯೋಗ, ಅಭ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಹನ್ನೊಂದರ ಹರೆಯದ ಜ್ಞಾನ ರೈಯವರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ 5ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಡ್ಯೆತ್ತಿಮಾರಿನ ಉದ್ಯಮಿ ಜಯರಾಮ ರೈ ಹಾಗೂ ಹೇಮಾ ಜೆ ರೈ ಯವರ ಪುತ್ರಿ.