ಬಸ್ ಹತ್ತುವ ಸಂದರ್ಭದಲ್ಲೇ ಶಾಸಕ ಸಂಜೀವ ಮಠಂದೂರಿಗೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಂದ ಮುತ್ತಿಗೆ

ಉಪ್ಪಿನಂಗಡಿ: ಜೋಡಿಯೊಂದನ್ನು ಪೋಲಿಸರಿಗೊಪ್ಪಿಸಿದ ಘಟನೆಗೆ ಸಂಬಂಧಿಸಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆಂದು ಯುವಕನು ಪೋಲಿಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಈ ಸಂದರ್ಭ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ರಕ್ಷಣೆಗೆ ನಿಂತಿಲ್ಲವೆಂದು ಬಸ್ ಹತ್ತುವ ಸಂದರ್ಭದಲ್ಲೇ ಶಾಸಕ ಸಂಜೀವ ಮಠಂದೂರು ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ ತಡರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.
ಗುಂಡ್ಯದ ಸಿರಿಬಾಗಿಲಿನ ಪೆರಾಜೆ ಎಂಬಲ್ಲಿ ಜೋಡಿಯೊಂದು ತಿರುಗಾಡಿಕೊಂಡಿದ್ದು ಈ ಸಂದರ್ಭ ಅವರನ್ನು ಪ್ರಶ್ನಿಸಿದ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಅವರನ್ನು ಪೋಲಿಸರಿಗೊಪ್ಪಿಸಿದ್ದರು. ಬಳಿಕ ಯುವತಿಯೊಂದಿಗೆ ಇದ್ದ ನಝೀರ್ ಎಂಬಾತ ತನಗೆ ಹಲ್ಲೆ ನಡೆಸಿದ್ದಾರೆಂದು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಾಲಚಂದ್ರ (35) ಹಾಗೂ ರಂಜಿತ್(31) ಎಂಬವರನ್ನು ಬಂಧಿಸಲಾಗಿದ್ದು, ಇದರಿಂದ ಆಕ್ರೋಶಗೊಂಡ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ʼʼತಾವು ಹಿಂದೂ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದರೂ, ನಮಗೆ ಬಿಜೆಪಿಯ ಶಾಸಕರು ಬೆಂಬಲ ನೀಡಿಲ್ಲʼʼವೆಂದು ಆಕ್ರೋಶ ವ್ಯಕ್ತಪಡಿಸಿ ತಡರಾತ್ರಿ ಉಪ್ಪಿನಂಗಡಿ ಬಳಿ, ಬೆಂಗಳೂರಿಗೆ ತೆರಳಲು ಬಸ್ಸು ಹತ್ತುವ ವೇಳೆಗೆ ಶಾಸಕ ಸಂಜೀವ ಮಠಂದೂರು ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಶಾಸಕರಿಗೆ ದಿಕ್ಕಾರ ಕೂಗಿದರು.







