ಪಶ್ಚಿಮ ವಲಯ ಐಜಿಪಿಗೆ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ದೂರು
ವಿಟ್ಲದ ʼವಿಟಿವಿʼ ನ್ಯೂಸ್, ಹೊಸಕನ್ನಡ ಮಾಧ್ಯಮಗಳಲ್ಲಿ ತೇಜೋವಧೆ

ಯು.ಟಿ.ಖಾದರ್
ಮಂಗಳೂರು : ವಿಟ್ಲ ಸಮೀಪ ಜೋಡಿಯೊಂದು ಪತ್ತೆಗೆ ಸಂಬಂಧಿಸಿದಂತೆ ವಿಟ್ಲದ ʼವಿಟಿವಿʼ ನ್ಯೂಸ್ ಮತ್ತು ಹೊಸ ಕನ್ನಡ ಎಂಬ ಸ್ಥಳೀಯ ಸುದ್ದಿ ಮಾಧ್ಯಮದಲ್ಲಿ ತನ್ನ ತೇಜೋವಧೆಗೆ ಯತ್ನಿಸಿ ರಾಜಕೀಯ ಜೀವನಕ್ಕೆ ಕಳಂಕ ತರುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸುವಂತೆ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಪಶ್ಚಿಮ ವಲಯ ಐಜಿಪಿಗೆ ದೂರು ಸಲ್ಲಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿ ಕದಡುವ ಉದ್ದೇಶದಿಂದ ಕೆಲವು ಶಕ್ತಿಗಳು ಧರ್ಮಗಳ ಮಧ್ಯೆ ವೈಮನಸ್ಸು ಹುಟ್ಟು ಹಾಕುವ ಕೆಲಸ ಮಾಡುತ್ತಿವೆ. ಅದಕ್ಕೆ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪುಷ್ಠೀಕರಿಸುವ ಕೆಲಸವೂ ನಡೆಯುತ್ತಿದೆ. ಎ.5ರಂದು ವಿಟ್ಲದಲ್ಲಿ ಪತ್ತೆಯಾದ ವಿಭಿನ್ನ ಜೋಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲದ ನೆಟ್ವರ್ಕ್ ಮೀಡಿಯಾ ವಿಟಿವಿ ನ್ಯೂಸ್ ಮತ್ತು ಹೊಸಕನ್ನಡ ಎಂಬ ಸುದ್ದಿ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸಬೇಕು ಎಂದು ಡಿಜಿಪಿ, ಐಜಿಪಿ ಅವರಿಗೆ ನೀಡಿದ ದೂರಿನಲ್ಲಿ ಯು.ಟಿ.ಖಾದರ್ ತಿಳಿಸಿದ್ದಾರೆ.






