ಕನ್ನಡವನ್ನು ಹುಡುಕುವ ಪರಿಸ್ಥಿತಿ ಬರಬಾರದು: ಟಿ.ಎಸ್. ನಾಗಾಭರಣ

ಮಂಗಳೂರು : ಕರ್ನಾಟಕದಲ್ಲಿ ಕನ್ನಡವನ್ನು ಹಡುಕಾಡುವ ಪರಿಸ್ಥಿತಿ ಬರಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ಕನ್ನಡ ಅನುಷ್ಠಾನ ಕುರಿತು ನಗರದ ಜ್ಯೋತಿಯಲ್ಲಿರುವ ಬ್ಯಾಂಕ್ ಆಫ್ ಬರೋಡದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ಯಾಂಕುಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅರ್ಜಿ, ಚಲನ್, ನಾಮಫಲಕಗಳು, ಜಾಹಿರಾತುಗಳು, ನಮೂನೆ, ಚೆಕ್, ರಶೀದಿ ಸಹಿತ ಎಲ್ಲವನ್ನೂ ಕನ್ನಡದಲ್ಲೇ ಮುದ್ರಿಸಿ ಗ್ರಾಹಕರಿಗೆ ನೀಡಬೇಕು. ಹಿಂದಿ-ಇಂಗ್ಲಿಷ್ ಭಾಷೆಗೆ ನೀಡುವ ಸ್ಥಾನಮಾನ ಕನ್ನಡ ಭಾಷೆಗೂದೊರಕಬೇಕು ಎಂದರು.
ಹೊರ ರಾಜ್ಯಗಳಿಂದ ಬರುವ ಉದ್ಯೋಗಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಅದಕ್ಕೆ ಅನುಕೂಲವಾಗುವಂತಹ ತರಬೇತಿಗಳನ್ನು ಆಯೋಜಿಸಬೇಕು. ಒಂದು ವೇಳೆ ಕನ್ನಡವನ್ನು ಕಲಿಯದೆ, ಕನ್ನಡವನ್ನು ಬಳಸದಿದ್ದಲ್ಲಿ ಅಂತಹ ಉದ್ಯೋಗಿಗಳ ವಿರುದ್ದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗಭರಣ ಹೇಳಿದರು.
ರೈತರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಅರ್ಥವಾಗಲು ಬ್ಯಾಂಕಿನ ಅಧಿಕೃತ ವೆಬ್ಸೈಟ್ ಹಾಗೂ ಮೊಬೈಲ್ ಬ್ಯಾಂಕಿಂಗ್ನಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸಬೇಕು.ಬ್ಯಾಂಕುಗಳಲ್ಲಿರುವ ಕನ್ನಡ ಘಟಕಗಳಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ನಡೆಸಬೇಕು ಹಾಗೂ ಬ್ಯಾಂಕುಗಳ ಮಾಸಪತ್ರಿಕೆಗಳಲ್ಲಿಯೂ ಕನ್ನಡ ಭಾಷೆಯ ಲೇಖನಗಳಿರಬೇಕು ಎಂದರು.
ಈ ಸಂದರ್ಭ ಬ್ಯಾಂಕ್ನ ವಲಯ ಮಹಾಪ್ರಬಂಧಕ ಗಾಯತ್ರಿ, ಉಪ ಮಹಾಪ್ರಬಂಧಕ ಗೋಪಾಲಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿ ಡಾ.ಸಂತೋಷ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.







