ಆ ಸಂದರ್ಭದಲ್ಲಿ ಸಿಕ್ಕ ವರದಿಯ ಅನುಸಾರ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ: ಸಚಿವ ಈಶ್ವರಪ್ಪ ಸಮರ್ಥನೆ

ಶಿವಮೊಗ್ಗ, ಏ.07: 'ಆ ಸಂದರ್ಭದಲ್ಲಿ ಸಿಕ್ಕ ವರದಿಯ ಅನುಸಾರ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಸಿಕ್ಕ ಕೂಡಲೇ ಮತ್ತೆ ಕರೆದು ಸುದ್ದಿಗೋಷ್ಠಿ ನಡೆಸಿ, ಪ್ರಾಮಾಣಿಕ ಹೇಳಿಕೆ ನೀಡಿದ್ದಾರೆ. ವಿಪಕ್ಷದವರು ಇರುವುದೇ ವಿರೋಧ ಮಾಡಲು, ಟೀಕೆ ಮಾಡಲು. ಇದನ್ನು ಯಾಕೆ ದೊಡ್ಡದು ಮಾಡುತ್ತಿದ್ದಾರೋ ಗೊತ್ತಿಲ್ಲ ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಗೃಹಮಂತ್ರಿ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆಗಳಿಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ನಿರಪರಾಧಿ ಚಂದ್ರುವಿನ ಕೊಲೆಯಾಗಿದೆ. ಗೂಂಡಾಗಿರಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹೇಳಿಕೆಯನ್ನು ವಿಪಕ್ಷದವರು ನೀಡಬೇಕಿತ್ತು. ಮೊನ್ನೆ ಕುಮಾರಸ್ವಾಮಿಯವರು ಕೂಡ ಈ ರೀತಿಯ ಹೇಳಿಕೆ ನೀಡಿ, ಬಳಿಕ ಕ್ಷಮೆ ಕೋರಿದ್ದರು. ವಿರೋಧ ಮಾಡಲೆಂದೇ, ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪು. ಮೈಸೂರು ಅತ್ಯಾಚಾರ ಪ್ರಕರಣದ ಸಮಯದಲ್ಲಿ ಆರಗ ಅವರು ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು. ರಾಜಕೀಯ ಬೇರೆ, ಭಾವನೆ ಬೇರೆ. ನಮ್ಮ ಮಗಳೇನಾದರೂ, ಈ ರೀತಿ ಸಂಜೆ ಬಳಿಕವೂ ಹೋದರೆ ನಾವು ಕೇಳಲ್ವಾ? ಭಾವನಾತ್ಮಕವಾಗಿ ಆರಗ ಜ್ಞಾನೇಂದ್ರ ಆಗ ಹೇಳಿಕೆ ನೀಡಿದ್ದರು ಎಂದು ಹೇಳಿದರು.
ಮನೆ ಮಗಳಿಗೆ ಹೇಳುವ ಬುದ್ಧಿ ಮಾತುಗಳ ರೀತಿ ಹೇಳಿದ್ದರು. ಇದನ್ನು ಕೂಡ ವಿರೋಧ ಪಕ್ಷದವರು ವಿರೋಧಿಸಿದ್ದರು. ಕೇವಲ ವಿರೋಧ ಮಾಡಲೆಂದೇ ವಿರೋಧ ಮಾಡುವುದು ಒಳ್ಳೆಯದಲ್ಲ. ಪ್ರಥಮ ಮಾಹಿತಿ ಆಧರಿಸಿ, ಚಂದ್ರು ಪ್ರಕರಣದಲ್ಲಿ ಹೇಳಿಕೆ ನೀಡಿದ್ದರು. ಬಳಿಕ ಅದನ್ನು ಸರಿಪಡಿಸಿಕೊಂಡು, ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಮೊದಲು ಹೇಳಿದ್ದೆ ಸರಿ ಎಂದು ಕೂತಿದ್ದಾರಾ? ಎಂದು ಪ್ರಶ್ನಿಸಿದರು.
ಅಧಿಕೃತ ವಿಪಕ್ಷ ಸ್ಥಾನವೂ ದೊರೆಯಲ್ಲ: ರಾಷ್ಟ್ರಭಕ್ತರು ಯಾರು, ರಾಷ್ಟ್ರದ್ರೋಹಿಗಳು ಯಾರು ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಮತದಾರರೇ ತೀರ್ಮಾನಿಸುತ್ತಾರೆ. ಕಾಂಗ್ರೆಸ್ ತನ್ನ ನಡವಳಿಕೆ ಬದಲಿಸಿಕೊಳ್ಳದಿದ್ದಲ್ಲಿ ಮುಂದೆ ಅವರಿಗೆ ಅಧಿಕೃತ ವಿಪಕ್ಷ ಸ್ಥಾನವೂ ದೊರೆಯುವುದಿಲ್ಲ ಎಂದು ಹೇಳಿದರು.
ಕೋಮುವಾದವನ್ನು ಬಿಜೆಪಿ ಬೆಳೆಸುತ್ತಿಲ್ಲ. ಕಾನೂನುಗಳನ್ನು ಗೌರವಿಸಿಯೇ ಎ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿzರೆ. ಆದರೆ, ಕಾಂಗ್ರೆಸ್ ನವರಿಗೆ ಆರೋಪ ಹೊರಿಸುವುದೇ ಒಂದು ಕೆಲಸವಾಗಿದೆ. ಜೊತೆಗೆ ವಿರೋಧ ಪಕ್ಷ ಇರುವುದು ಟೀಕೆ ಮಾಡಲು ಮಾತ್ರ ಸೀಮಿತವಾಗಿದೆ ಎಂದರು.
ರಾಷ್ಟ್ರೀಯ ವಿಷಯಗಳು ಬಂದಾಗ ಹೇಗೆ ಮಾತಾಡಬೇಕು, ಏನು ಮಾತಾಡಬೇಕೆಂದು ಬಿಜೆಪಿಗೆ ಗೊತ್ತಿದೆ. ಕಾಂಗ್ರೆಸ್ ನವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಬೆಲೆ ಏರಿಕೆ ಇಂದು ಅನಿವಾರ್ಯವಾಗಿದೆ. ಕೊರೋನಾದಂತಹ ಸಂಕಷ್ಟದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳುಹೊತ್ತುಕೊಂಡಿವೆ. ಮತ್ತು ಈಗಿರುವ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ಆದರೂ, ಹಲವು ಪರಿಹಾರಗಳನ್ನು ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ಮತ್ತು ರೈತರ ಪರವಾಗಿ ನಿಂತಿವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ. ಇದೆ ಕಾಂಗ್ರೆಸ್ ಮುಖಂಡರ ಕಿರಿಕ್ ಹೇಳಿಕೆಗಳು ವ್ಯಂಗ್ಯವಾಡಿದರು.







