ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ, ಧರ್ಮಸೂಚಕ ವಸ್ತ್ರಕ್ಕೆ ಅವಕಾಶವಿಲ್ಲ: ಸಚಿವ ಬಿ.ಸಿ. ನಾಗೇಶ್
ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ಎ.7: ಮುಂಬರುವ ಪಿಯುಸಿ ಪರೀಕ್ಷೆಗೂ ವಿದ್ಯಾರ್ಥಿಗಳು ಯಾವುದೇ ಧರ್ಮಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ. ಈ ಕುರಿತು ಕೆಲವೇ ದಿನಗಳಲ್ಲಿ ಇಲಾಖೆಯು ಆದೇಶವನ್ನು ಹೊರಡಿಸಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.22ರಿಂದ ನಡೆಯುವ ಪಿಯುಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಹೊರಡಿಸುವ ಆದೇಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷೆ ವೇಳೆಯಲ್ಲಿ ಕಾಲೇಜ್ಗೆ ಹಿಜಾಬ್ ಮಾತ್ರವಲ್ಲ, ಯಾವುದೇ ಧರ್ಮಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ. ಹಾಗಾಗಿ ಎಸೆಸೆಲ್ಸಿ ಪರೀಕ್ಷೆಯಂತೆ ನ್ಯಾಯಾಲಯದ ಆದೇಶದಂತೆ ಸಮವಸ್ತ್ರವನ್ನು ಪಾಲನೆ ಮಾಡಬೇಕು ಎಂದರು.
ರಾಜ್ಯದ ಎಲ್ಲಾ ಕಾಲೇಜುಗಳ ಪೈಕಿ ಶೇ.90ರಷ್ಟು ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಶೇ.10ರಷ್ಟು ಕಾಲೇಜುಗಳಲ್ಲಿ ಮಾತ್ರ ಇಲ್ಲ. ಆದರೂ ಧರ್ಮಸೂಚಕ ವಸ್ತ್ರಗಳನ್ನು ವಿದ್ಯಾರ್ಥಿಗಳು ಧರಿಸಿ ಕಾಲೇಜಿಗೆ ಬರಬಾರದು. ಈ ನಿಯಮವನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಅವರು ಸೂಚಿಸಿದರು.