ಭಟ್ಕಳ: ಹಳೆ ಕಟ್ಟಡದಲ್ಲೇ ಮೀನು ಮಾರಾಟಕ್ಕೆ ಅವಕಾಶ ನೀಡುವಂತೆ ಸಚಿವ ಕೋಟಾ ಶ್ರೀನಿವಾಸ ಪುಜಾರಿ ಸೂಚನೆ

ಭಟ್ಕಳ: ಹಳೆಕಟ್ಟಡದಲ್ಲೇ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪುಜಾರಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಗುರುವಾರ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡಸಿದ ಅವರು ಭಟ್ಕಳ ಪುರಸಭೆಯ ನಾಮನಿರ್ದೇಶಿತ ಸದಸ್ಯ ಆಸರಕೇರಿಯ ಶ್ರೀಕಾಂತ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಭಟ್ಕಳದ ಹಳೆ ಬಸ್ ನಿಲ್ದಾಣದ ಬಳಿ ಇರುವ ಹಳೆಯ ಮೀನುಮಾರುಕಟ್ಟೆಯು ಶಿಥಿಲಗೊಂಡಿದ್ದು ಇದಕ್ಕಾಗಿ ಸಂತೆ ಮಾರುಕಟ್ಟೆಯ ಬಳಿ ನೂತನ ಮೀನುಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ವಿವಿಧ ಕಾರಣವೊಡ್ಡಿ ಇದುವರೆಗೂ ಆ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಒದಗಿಬಂದಿಲ್ಲ. ಈಗ ಮತ್ತೆ ಕಟ್ಟಡ ಸ್ಥಳಾಂತರ ವಿವಾದ ಮುನ್ನೆಲೆಗೆ ಬಂದಿದ್ದು ಬುಧವಾರದಂದು ಮೀನುಮಾರಾಟಗಾರ ಮಹಿಳೆಯರು ಪುರಸಭೆಯ ಕಚೇರಿ ಎದುರು ಮೀನು ಎಸೆದು ಪ್ರತಿಭಟಿಸಿದ್ದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ಅಯುಕ್ತೆ ಮಮತಾದೇವಿ ಮತ್ತಿತರರು ಉಪಸ್ಥಿತರಿದ್ದರು.





