ಆಕಾರ್ ಪಟೇಲ್ ಬಳಿ ಕ್ಷಮೆಯಾಚಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದ ದಿಲ್ಲಿ ನ್ಯಾಯಾಲಯ
![ಆಕಾರ್ ಪಟೇಲ್ ಬಳಿ ಕ್ಷಮೆಯಾಚಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದ ದಿಲ್ಲಿ ನ್ಯಾಯಾಲಯ ಆಕಾರ್ ಪಟೇಲ್ ಬಳಿ ಕ್ಷಮೆಯಾಚಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದ ದಿಲ್ಲಿ ನ್ಯಾಯಾಲಯ](https://www.varthabharati.in/sites/default/files/images/articles/2022/04/8/330935-1649356948.jpg)
ಹೊಸದಿಲ್ಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅವರಿಗೆ ಸಿಬಿಐ ಲುಕ್ಔಟ್ ನೋಟಿಸ್ ನೀಡಿದ್ದನ್ನು ಹಿಂಪಡೆಯುವಂತೆ ದಿಲ್ಲಿ ನ್ಯಾಯಾಲಯ ಹೇಳಿದ್ದು, ಈ ಗಂಭೀರ ಲೋಪಕ್ಕಾಗಿ ಆಕಾರ್ ಅವರಲ್ಲಿ ಲಿಖಿತ ರೂಪದ ಕ್ಷಮೆ ಯಾಚಿಸುವಂತೆ ಸಿಬಿಐಗೆ ಆದೇಶಿಸಿದೆ.
ಆದೇಶವನ್ನು ಜಾರಿಗೊಳಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್, ಈ ಕ್ಷಮೆಯಾಚನೆಯು ಸಿಬಿಐ ಮೇಲೆ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದ್ದಾರೆ.
ಏಪ್ರಿಲ್ 6 ರಂದು, ಅಮೇರಿಕಾಗೆ ವಿಮಾನ ಹತ್ತುವಾಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಾರ್ ಅವರನ್ನು ತಡೆಯಲಾಗಿತ್ತು.
ಸಮರ್ಪಕ ಆಧಾರಗಳಿಲ್ಲದೇ ಆಕಾರ್ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ. ತನಿಖೆ ಪ್ರಗತಿಯಲ್ಲಿ ಇರುವಾಗ ಅವರನ್ನು ಬಂಧಿಸಿಲ್ಲ. ತಮಗೆ ನೋಟಿಸ್ ನೀಡಿದಾಗಲೆಲ್ಲಾ ಅವರು ವಿಚಾರಣೆಗೂ ಹಾಜರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.
ಏಪ್ರಿಲ್ 30 ರೊಳಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ನಿರ್ದೇಶಿಸಿದ್ದು, ಆಕಾರ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆದಿರುವುದರಿಂದ ಅವರಿಗೆ ಹಣಕಾಸಿನ ನಷ್ಟ ಮಾತ್ರವಲ್ಲದೆ, ಮಾನಸಿಕ ಕಿರಿಕಿರಿಯೂ ಉಂಟಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಆಕಾರ್ ಪರ ವಕೀಲ ತನ್ವೀರ್ ಅಹ್ಮದ್ ಮಿರ್, “ಆಕಾರ್ ಪಟೇಲ್ ಅವರಿಗೆ ಲಿಖಿತ ಕ್ಷಮೆಯಾಚಿಸಲು ಸಿಬಿಐ ನಿರ್ದೇಶಕರಿಗೆ ನ್ಯಾಯಾಲಯ ಸೂಚಿಸಿದೆ. ಸ್ವತಂತ್ರ ಭಾರತದಲ್ಲಿ ಮತ್ತು ಸಿಬಿಐ ಇತಿಹಾಸದಲ್ಲಿಯೇ ಇದು ಮೊದಲು. ಈ ಆದೇಶವು ಕಾನೂನು ಜಾರಿ ಸಂಸ್ಥೆಗಳಿಗೆ ಬಲವಾದ ಸಂದೇಶವನ್ನು ಕಳುಹಿಸುತ್ತದೆ ಮತ್ತು ಕಾನೂನು ಸಂಸ್ಥೆಗಳಲ್ಲಿ ಸಾಮಾನ್ಯ ಜನರ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ ಎಂದು ಹೇಳಿರುವುದಾಗಿ thenewsminute ವರದಿ ಮಾಡಿದೆ.