‘ಕಣ್ಮಣಿ’ ಕಾದಂಬರಿ ಬಿಡುಗಡೆ

ಮಂಗಳೂರು : ಹಿರಿಯ ಲೇಖಕ ಡಾ. ಪ್ರಭಾಕರ್ ನೀರ್ಮಾರ್ಗ ಅವರ ೨೭ನೇ ಕೃತಿ ಕಣ್ಮಣಿ ಕಾದಂಬರಿ ಕೃತಿಯ ಬಿಡುಗಡೆ ಕಾರ್ಯಕ್ರಮ ತುಳು ಪರಿಷತ್ ಆಶ್ರಯದಲ್ಲಿ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಿತು.
ಕಣ್ಮಣಿ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಕಾಲೇಜು ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಅವರು, ಪ್ರಭಾಕರ್ ನೀರ್ ಮಾರ್ಗ ಅವರೊಬ್ಬ ಸಾಹಿತ್ಯ ಕ್ಷೇತ್ರದ ಅನನ್ಯ ಪ್ರತಿಭಾವಂತ, ಅವರು ತನ್ನ ನಿರಂತರ ಬರಹದ ಮೂಲಕ ತುಳುನಾಡಿನ ಬದುಕು ಸಂಸ್ಕೃತಿಯನ್ನು ದಾಖಲೀಕರಣ ಮಾಡುವಂತಹ ಮಹಾತ್ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು, ಕಣ್ಮಣಿ ಕಾದಂಬರಿಯು ಹಳ್ಳಿಯ ರಾಜಕೀಯ, ಸಾಮಾಜಿಕ ಬದುಕನ್ನು ಪ್ರತಿಬಿಂಬಿಸಿದೆ ಎಂದು ಹೇಳಿದರು.
ಕೃತಿಯ ಪರಿಚಯ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಂಶೋಧನಾ ಸಹಾಯಕ ಚೇತನ್ ಮುಂಡಾಜೆ, ಪ್ರಭಾಕರ್ ನೀರ್ ಮಾರ್ಗ ಅವರ ಎಲ್ಲಾ ಕೃತಿಗಳು ಸಾಮಾಜಿಕ ಬದುಕಿನ ಪಲ್ಲಟಗಳನ್ನು ಹಾಗೂ ಸಂಸ್ಕೃತಿಯನ್ನು ಅನಾವರಣ ಮಾಡುತ್ತದೆ ಎಂದರು.
ಸಮಾರಂಭಧ ಅಧ್ಯಕ್ಷತೆಯನ್ನು ತುಳು ಪರಿಷತ್ ಗೌರವ ಅಧ್ಯಕ್ಷ ಸ್ವರ್ಣ ಸುಂದರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವಾ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲೇಖಕ ಪ್ರಭಾಕರ್ ನೀರ್ಮಾರ್ಗ ಅವರನ್ನು ತುಳು ಪರಿಷತ್ ಗೌರವ ಅಧ್ಯಕ್ಷ ಸ್ವರ್ಣ ಸುಂದರ್ ಅವರು ಸನ್ಮಾನಿಸಿದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಕಾರ್ಯಕ್ರಮ ನಿರ್ವಹಿಸಿದರು, ಕೋಶಾಧಿಕಾರಿ ಶುಭೋದಯ ಆಳ್ವಾ ವಂದಿಸಿದರು.







