ಮಾರಿಯಿಂದ ಮಾರಿಯಮ್ಮ
ಕರಾವಳಿಯಲ್ಲಿ ಸ್ಥಳೀಯ ದೇವತೆಗಳ ಬ್ರಾಹ್ಮಣೀಕರಣ: ಧಾರ್ಮಿಕ ಬಾಂಧವ್ಯಕ್ಕೆ ಬೆದರಿಕೆ
ಭಾಗ - 1
ಕಳೆದ 30 ವರ್ಷಗಳಲ್ಲಿ ತುಳುನಾಡನ್ನು ತಮ್ಮ ದಕ್ಷಿಣದ ಹೃದಯಭಾಗವೆಂದು ಕರೆದುಕೊಳ್ಳುವ ಹಿಂದುತ್ವ ಗುಂಪುಗಳು ಪ್ರದೇಶದಲ್ಲಿಯ ಮುಸ್ಲಿಮರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿವೆ. ಆದರೆ ಮುಸ್ಲಿಮರು ಈ ಪ್ರದೇಶದ ಸಾಮಾಜಿಕ ಸ್ವರೂಪದ ಒಂದು ಭಾಗವಾಗಿದ್ದಾರೆ ಮತ್ತು ಅದರ ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.
‘ಅಪ್ಪೆಡ ಕೇಂಡಾ?’ ಇದು ಉಡುಪಿ ತಾಲೂಕಿನ ಕಾಪುವಿನಲ್ಲಿ ಸ್ಥಳಿಯ ನಿವಾಸಿಗಳ ಆರೋಗ್ಯ ಹದಗೆಟ್ಟಾಗ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ. ಈ ನುಡಿಗಟ್ಟು ಗ್ರಾಮದ ಅಧಿದೇವತೆ ಮಾರಿಯಮ್ಮ ಅಥವಾ ‘ಕಾಪು ದ ಅಪ್ಪೆ (ಕಾಪುವಿನ ತಾಯಿ)’ಯಲ್ಲಿ ತಲೆಮಾರುಗಳಿಂದ ಬೇರೂರಿರುವ ಅಚಲ ನಂಬಿಕೆಯನ್ನು ಸೂಚಿಸುತ್ತದೆ.
ಕಾಪು ನಿವಾಸಿಗಳು ಮಾರಿಯಮ್ಮನನ್ನು ತುಳುನಾಡಿನ ರಕ್ಷಕಿ ಎಂದೇ ಪರಿಗಣಿಸುತ್ತಾರೆ. ಇಂದು ಮಾರಿಯಮ್ಮ ಮತ್ತು ಆಕೆಯ ದೇವಸ್ಥಾನಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆಯ ತಾಣಗಳಾಗಿವೆ. ಹಿಂದೂ ಬಲಪಂಥೀಯ ಸಂಘಟನೆಗಳಿಂದ ಉತ್ತೇಜಿತವಾಗಿರುವ ಪ್ರಸ್ತುತ ಸಂಘರ್ಷವು ಮಾರಿಯಮ್ಮನ ಕತೆಯ ಹಿಂದಿರುವ ಧಾರ್ಮಿಕ ಸಮನ್ವಯವನ್ನು ಅಸ್ಪಷ್ಟಗೊಳಿಸಿದೆ. ಸಿಡುಬು, ಕುಷ್ಠರೋಗ ಮತ್ತು ತೀರ ಇತ್ತೀಚಿನ ಕೋವಿಡ್ನಂತಹ ರೋಗಗಳಿಂದ ಮಾರಿಯಮ್ಮ ರಕ್ಷಣೆ ನೀಡುತ್ತಾಳೆ ಎಂಬ ನಂಬಿಕೆ ಇಲ್ಲಿನವರಲ್ಲಿ ಮನೆಮಾಡಿದೆ. ಪ್ರತಿ ಮಂಗಳವಾರ ದರ್ಶನ ಪಾತ್ರಿಯಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿವಿಧ ಜಾತಿಗಳು ಮತ್ತು ಧಾರ್ಮಿಕ ಸಮುದಾಯಗಳ ಜನರು ಮಾರಿಯಮ್ಮನ ದೇವಸ್ಥಾನಕ್ಕೆ ಧಾವಿಸುತ್ತಾರೆ. ಈ ಪದ್ಧತಿಯು 250 ವರ್ಷಗಳಿಂದ ಅಥವಾ 18ನೇ ಶತಮಾನದ ಉತ್ತರಾರ್ಧದಿಂದ ಜನಜನಿತವಾಗಿರುವ ಮಾರಿಯಮ್ಮನ ಮೂಲ ಪುರಾಣಕ್ಕೆ ಅನುಗುಣವಾಗಿದೆ. ಆಗ ‘ದಂಡಿನ ಮಾರಿ’ ಎಂದು ಕರೆಯಲ್ಪಡುತ್ತಿದ್ದ ಮಾರಿಯಮ್ಮ ಯುದ್ಧಕಾಲದ ದೇವತೆಯಾಗಿದ್ದು ಕಾಪುವಿನ ಮಲ್ಲಾರ ಕೋಟೆಯಲ್ಲಿ ಕೆಳದಿಯ ನಾಯಕ ಅರಸೊತ್ತಿಗೆಯ ಆಡಳಿತಗಾರ ಬಸಪ್ಪ ನಾಯಕನ ಸೇನೆಯಿಂದ ಪೂಜಿಸಲ್ಪಡುತ್ತಿದ್ದಳು.
ತುಳುವಿನಲ್ಲಿ ‘ಕಾಯುವುದು’ ಎಂದು ಅರ್ಥವನ್ನು ನೀಡುವ ಕಾಪು ಕೋಟೆಯನ್ನು ಕಾಯುತ್ತಿದ್ದ ಸೈನಿಕರ ಉಲ್ಲೇಖವಾಗಿದೆ. 1763ರಲ್ಲಿ ಹೈದರಲಿಯಿಂದ ಸೋಲಿಸಲ್ಪಟ್ಟಿದ್ದ ಕೆಳದಿ ನಾಯಕರು ತಮ್ಮ ಭೂಪ್ರದೇಶವನ್ನು ಮೈಸೂರು ಸಾಮ್ರಾಜ್ಯದೊಂದಿಗೆ ವಿಲೀನಗೊಳಿಸಿದ್ದರು. ನೂತನ ಆಡಳಿತಗಾರರಡಿ ಮಾರಿಯಮ್ಮನ ಪೂಜೆಗೆ ಅಲ್ಪಾವಧಿಯ ವ್ಯತ್ಯಯವುಂಟಾಗಿತ್ತು, ಆದರೆ ಹೆಚ್ಚಾಗಿ ಸೈನಿಕರು ಪರಿಪಾಠವನ್ನು ಜೀವಂತವಾಗಿಟ್ಟಿದ್ದರು. 1799ರಲ್ಲಿ ಹೈದರಲಿಯ ಉತ್ತರಾಧಿಕಾರಿ ಟಿಪ್ಪು ಸುಲ್ತಾನರ ಪತನದ ಬಳಿಕ ಕಾಪು ಬ್ರಿಟಿಷರ ಆಡಳಿತಕ್ಕೊಳಪಟ್ಟಿತ್ತು ಮತ್ತು ಅವರು ಅದನ್ನು ‘KAUP’ ಎಂದು ಕರೆಯುತ್ತಿದ್ದರು. ಬ್ರಿಟಿಷರ ಆಡಳಿತಲ್ಲಿ ‘ದಂಡಿನ ಮಾರಿ’ಯ ಪ್ರಭಾವವು ಸೇನೆಯನ್ನೂ ಮೀರಿ ಬೆಳೆದಿತ್ತು ಮತ್ತು ತುಳುನಾಡು ನಿವಾಸಿಗಳ ಸ್ಥಾನೀಯ ರಕ್ಷಕಿ ‘ಮಾರಿಯಮ್ಮ ’ಆಗಿದ್ದಳು.
ಕಾಪುವಿನ ಇತಿಹಾಸವನ್ನು ವ್ಯಾಪಕವಾಗಿ ಅಧ್ಯಯನ ಮಾಡಿರುವ ಮತ್ತು ಆ ಬಗ್ಗೆ ಕೃತಿಗಳನ್ನು ಬರೆದಿರುವ ಕೆ.ಎಲ್.ಕುಂಡಂತಾಯರ ಪ್ರಕಾರ ಉಗ್ರಾಣಿ ಅಥವಾ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿಯ ಆಡಳಿತಗಾರ ಬ್ರಿಟಿಷರ ಆಳ್ವಿಕೆಯಲ್ಲಿಯೂ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದ. ಈ ಆಡಳಿತಗಾರ ಮುಸ್ಲಿಮ್ ವ್ಯಕ್ತಿಯಾಗಿದ್ದು, ಮಾರಿಯಮ್ಮನೊಂದಿಗೆ ಮಾತನಾಡಿದ್ದ ಮೊದಲ ಮಾನವನಾಗಿದ್ದ. ಕಾಲದ ಹರಿವಿನಲ್ಲಿ ಈ ಮುಸ್ಲಿಮ್ ವ್ಯಕ್ತಿಯ ಹೆಸರು ಕಳೆದುಹೋಗಿದೆ.
ಕಥೆಯು ಹೇಳುವಂತೆ ಒಂದು ರಾತ್ರಿ ಮಲ್ಲಿಗೆಯ ಪರಿಮಳ ಆಡಳಿತಗಾರನನ್ನು ಸೆಳೆದಿದ್ದು, ಅದು ಆತನನ್ನು ಕಾಪು ಕೋಟೆಯೊಳಗಿನ ನಂದಿಕೆರೆಯ ಬಳಿಗೆ ಕರೆದೊಯ್ದಿತ್ತು. ಅಲ್ಲಿ ಯಾರೋ ಸ್ನಾನ ಮಾಡುತ್ತಿದ್ದ ಶಬ್ದ ಆತನಿಗೆ ಕೇಳಿಬಂದಿತ್ತು.
‘‘ಯಾರಲ್ಲಿ’’? ಎಂದು ಆಡಳಿತಗಾರ ಪ್ರಶ್ನಿಸಿದ್ದ. ಆತನಿಗೆ ನೀರಿನಲ್ಲಿ ಮಹಿಳೆಯ ನೀಳ ಕೂದಲುಗಳು ಮಾತ್ರ ಕಾಣುತ್ತಿದ್ದವು. ‘‘ನಾನು ಮಾರಿ. ನಾನು ನನ್ನ ನಿವಾಸವೆಂದು ಕರೆಯಬಹುದಾದ ಸ್ಥಳವೊಂದು ನನಗೆ ಬೇಕು’’ ಎಂಬ ಉತ್ತರ ಆಡಳಿತಗಾರನಿಗೆ ಕೇಳಿ ಬಂದಿತ್ತು.
‘‘ಇದು ಕೋಟೆ ಮತ್ತು ಈಗ ನಮಗೆ ಸೇರಿದೆ. ನಾನು ಮುಸ್ಲಿಮ್ ಆಗಿದ್ದೇನೆ. ನಿನಗಾಗಿ ಇಂತಹ ಸ್ಥಳವನ್ನು ನಾನು ಹೇಗೆ ಹುಡುಕಲಿ?’’ ಎಂಬ ಆಡಳಿತಗಾರನ ಪ್ರಶ್ನೆಗೆ ಮಾರಿ ‘‘ಈ ಗ್ರಾಮದ ನಿವಾಸಿಗಳನ್ನು ಒಂದುಗೂಡಿಸು ಮತ್ತು ನನಗಾಗಿ ಗುಡಿಯನ್ನು ನಿರ್ಮಿಸಿ’’ ಎಂದು ಉತ್ತರಿಸಿದ್ದಳು.
2021ರಲ್ಲಿ ಪ್ರಕಟಗೊಂಡ ಕುಂಡಂತಾಯರ ‘ನವ ನವ ದುರ್ಗಾ’ ಪುಸ್ತಕವು ಈ ಕಥೆಯನ್ನು ವಿವರವಾಗಿ ಒಳಗೊಂಡಿದೆ. ಈ ಕಥೆಯ ಪ್ರಕಾರ ಆಡಳಿತಗಾರ ಆಗ ಗ್ರಾಮದಲ್ಲಿ ವಾಸವಿದ್ದ ವಿವಿಧ ಜಾತಿಗಳ ಜನರನ್ನು ಸೇರಿಸಿದ್ದ ಮತ್ತು ಕಾಪುವಿನ ಪಲ್ಲಪಡ್ಪು ಎಂಬ ಪ್ರದೇಶದಲ್ಲಿ ಮಾರಿಗಾಗಿ ದೇವಸ್ಥಾನವನ್ನು ನಿರ್ಮಿಸಲು ನೆರವಾಗಿದ್ದ. ಈ ದೇವಸ್ಥಾನ ಈಗಲೂ ಇದೆ ಮತ್ತು ಇದನ್ನು ಮಾರಿಯಮ್ಮನ ಮೂಲನಿವಾಸ ಎಂದು ಪರಿಗಣಿಸಲಾಗಿದೆ. ಐತಿಹಾಸಿಕವಾಗಿ ದೇವಸ್ಥಾನದ ವಾರ್ಷಿಕ ಉತ್ಸವ ಮಾರಿಪೂಜೆಯ ಭಾಗವೇ ಆಗಿರುವ ಮುಸ್ಲಿಮ್ ವ್ಯಾಪಾರಿಗಳನ್ನು ಹೊರಗಿಡುವ ಹಿಂದೂ ಬಲಪಂಥೀಯ ಸಂಘಟನೆಗಳ ಕೇಂದ್ರೀಕೃತ ಅಭಿಯಾನದಿಂದಾಗಿ ದೇವಾಲಯವೀಗ ಸುದ್ದಿಯಲ್ಲಿದೆ. ಮುಸ್ಲಿಮರ ವಿರುದ್ಧ ರಾಜಾರೋಷ ತಾರತಮ್ಯವು ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನೊಂದಿಗೆ ಮಾತ್ರವಲ್ಲ, ದೇವಸ್ಥಾನ ಮತ್ತು ಅದರ ದೇವತೆಯ ಸಮಕಾಲೀನ ಸಾಂಸ್ಕೃತಿಕ ವಿನಿಯೋಗದೊಂದಿಗೂ ತಳುಕು ಹಾಕಿಕೊಂಡಿರುವ ಮಾದರಿಯನ್ನು ರೂಪಿಸುತ್ತದೆ ಮತ್ತು ಕರಾವಳಿ ಕರ್ನಾಟಕದ ಕೋಮುಜ್ವಾಲೆಗೂ ತನ್ನ ಕೊಡುಗೆಯನ್ನು ನೀಡುತ್ತಿದೆ.
1,300 ವರ್ಷಗಳ ಸಹಬಾಳ್ವೆ
ಕರಾವಳಿ ಕರ್ನಾಟಕ ಅಥವಾ ತುಳುನಾಡು ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಜೈನರ ನಡುವೆ 13 ಶತಮಾನಗಳಷ್ಟು ಹಳೆಯದಾದ ಸಹಬಾಳ್ವೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಮೂರನೇ ಶತಮಾನದಲ್ಲಿಯೇ ತುಳುನಾಡಿನ ವ್ಯಾಪಾರಿಗಳು ಪ್ರಾಚೀನ ಗ್ರೀಸ್, ರೋಮ್, ಅರೇಬಿಯ, ಈಜಿಪ್ಟ್ ಮತ್ತು ಚೀನಾಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಬೆಳೆಸಿದ್ದರು. ಅರಬ್ ಅನ್ವೇಷಕ ಇಬ್ನ್ ಬತೂತಾ ಅವರ ಕೃತಿಗಳು ಹೊನ್ನಾವರ ಬಂದರನ್ನು ಉಲ್ಲೇಖಿಸಿವೆ ಮತ್ತು ತುಳುನಾಡನ್ನು ಸಂಬಾರ ಪದಾರ್ಥಗಳು, ಲೋಹಗಳು ಮತ್ತು ಕುದುರೆಗಳಿಗಾಗಿ ಮಹತ್ವದ ವ್ಯಾಪಾರ ಕೇಂದ್ರವೆಂದು ಪ್ರಸ್ತಾಪಿಸಿವೆ.
ಕಳೆದ 30 ವರ್ಷಗಳಲ್ಲಿ ತುಳುನಾಡನ್ನು ತಮ್ಮ ದಕ್ಷಿಣದ ಹೃದಯಭಾಗವೆಂದು ಕರೆದುಕೊಳ್ಳುವ ಹಿಂದುತ್ವ ಗುಂಪುಗಳು ಪ್ರದೇಶದಲ್ಲಿಯ ಮುಸ್ಲಿಮರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿವೆ. ಆದರೆ ಮುಸ್ಲಿಮರು ಈ ಪ್ರದೇಶದ ಸಾಮಾಜಿಕ ಸ್ವರೂಪದ ಒಂದು ಭಾಗವಾಗಿದ್ದಾರೆ ಮತ್ತು ಅದರ ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.
ಮಂಗಳೂರಿನಲ್ಲಿರುವ ಏಳನೇ ಶತಮಾನದ ಝೀನತ್ ಬಕ್ಷ್ ಮಸೀದಿಯು ಭಾರತದಲ್ಲಿಯ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾಗಿದೆ. ಇತಿಹಾಸಕಾರ ದಿ.ಗುರುರಾಜ ಭಟ್ ಅವರು ತನ್ನ ‘ತುಳುವ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನ’ ಬೃಹದ್ಗ್ರಂಥದಲ್ಲಿ ದಾಖಲಿಸಿರುವಂತೆ ಎಂಟನೇ ಶತಮಾನದ ಹಲವಾರು ಶಾಸ್ತ್ರೀಯ ಅರೇಬಿಕ್ ಕೃತಿಗಳಲ್ಲಿ ಮಂಗಳೂರು ಅಥವಾ ಮಂಜರೂರು ನಗರವನ್ನು ಉಲ್ಲೇಖಿಸಲಾಗಿದೆ.
13ನೇ ಶತಮಾನದಲ್ಲಿ ಬಂಟ್ವಾಳ ತಾಲೂಕಿನ ಒಳವೂರು ಮತ್ತು ಪೊಳಲಿಗಳಲ್ಲಿ ಇನ್ನೂ ಎರಡು ಮಸೀದಿಗಳನ್ನು ನಿರ್ಮಿಸಲಾಗಿತ್ತು. ಅವು ಇಲ್ಲಿಯ ಸಮುದಾಯಗಳ ನಡುವಿನ ಸಹಬಾಳ್ವೆಯ ಪ್ರತೀಕಗಳೂ ಆಗಿವೆ. ಪೊಳಲಿಯಲ್ಲಿ ಮಸೀದಿಯು ದೇವಸ್ಥಾನದ ಪಕ್ಕದಲ್ಲಿಯೇ ಇದೆ ಮತ್ತು ಪೊಳಲಿ ಜಾತ್ರೆಯನ್ನು ಹಿಂದೂಗಳು ಮತ್ತು ಮುಸ್ಲಿಮರು ಸಮಾನವಾಗಿ ಸಂಭ್ರಮಿಸುತ್ತಾರೆ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಹಾಗೂ ಬರಹಗಾರ ಇಸ್ಮತ್ ಪಜೀರ್ ಹೇಳುತ್ತಾರೆ. ಉಡುಪಿಯಲ್ಲಿ ಜನಿಸಿದ ಮತ್ತು ಅನಂತರ ಬ್ರಾಹ್ಮಣ ಹಿಂದೂ ತತ್ತ್ವಜ್ಞಾನಿ ಮಧ್ವಾಚಾರ್ಯರಿಂದ ಬೆಳೆಸಲ್ಪಟ್ಟ ದ್ವೈತ ಪಂಥವು 13ನೇ ಶತಮಾನದ ಸುಮಾರು ಇದೇ ಸಮಯದಲ್ಲಿ ತಲೆಯೆತ್ತಿತ್ತು. ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮಾಧ್ವ ಬ್ರಾಹ್ಮಣ್ಯದ ಹೃದಯಭಾಗದಲ್ಲಿಯೂ ಮುಸ್ಲಿಮ್ ಅಸ್ತಿತ್ವವಿದೆ.
ಉಡುಪಿಯ ಕೃಷ್ಣಮಠ ಸಂಕೀರ್ಣದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಲಿನ ಕೆತ್ತನೆಗಳು 16ನೇ ಶತಮಾನದಲ್ಲಿ ದಿಲ್ಲಿಯಲ್ಲಿ ದ್ವೈತ ತತ್ತ್ವಜ್ಞಾನಿ ವಾದಿರಾಜ ತೀರ್ಥರು ಮತ್ತು ಮೊಘಲ್ ದೊರೆ ಹುಮಾಯೂನ್ ನಡುವಿನ ಭೇಟಿಯನ್ನು ಬಿಂಬಿಸುತ್ತಿವೆ. ವಾದಿರಾಜರು ಹುಮಾಯೂನ್ನ ಪುತ್ರ ಅಕ್ಬರ್ನನ್ನು ಬದುಕಿಸಿದ್ದರು ಮತ್ತು ಚಿನ್ನದ ಹೊರೆಗಳ ಪುರಸ್ಕಾರಗಳೊಂದಿಗೆ ಉಡುಪಿಗೆ ಮರಳಿದ್ದರು ಹಾಗೂ ಈ ಚಿನ್ನವನ್ನು ನೆಲದಲ್ಲಿ ಹುಗಿದು ಅದರ ಮೇಲೆ ಸುಬ್ರಹ್ಮಣ್ಯ ಗುಡಿಯನ್ನು ನಿರ್ಮಿಸಲಾಗಿದೆ ಎಂದು ಈ ಕೆತ್ತನೆಗಳು ಕಥೆಯನ್ನು ಹೇಳುತ್ತಿವೆ.
ಕರಾವಳಿ ಕರ್ನಾಟಕದಲ್ಲಿ ಭೂತ ಸಂಸ್ಕೃತಿ
ಉಡುಪಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಪೂಜಿಸಲ್ಪಡುವ ದೇವತೆಗಳಿಗಿಂತ ಭಿನ್ನವಾಗಿ ಮಾರಿಯಮ್ಮ ದಕ್ಷಿಣ ಭಾರತದಾದ್ಯಂತ ಬ್ರಾಹ್ಮಣೇತರರಿಂದ ಜನಪ್ರಿಯಗೊಂಡ ದೇವತೆಯಾಗಿದ್ದಾಳೆ. ದೈವಗಳು ಅಥವಾ ಭೂತಗಳ ಆರಾಧನೆ-ತಮ್ಮ ಪೂರ್ವಜರ ಆರಾಧನೆಯನ್ನು ನಂಬಿರುವ ತುಳುನಾಡು ಪ್ರದೇಶದಾದ್ಯಂತ ವಿವಿಧ ಸಮುದಾಯಗಳ ಜನರಿಗೆ ಮಾರಿಯಮ್ಮ ಅತ್ಯಂತ ಪ್ರಮುಖಳಾಗಿದ್ದಾಳೆ.
ಭೂತಗಳು ಬ್ರಾಹ್ಮಣ ಹಿಂದೂಧರ್ಮದ ದೇವರಿಗಿಂತ ಭಿನ್ನವಾಗಿದ್ದು, ವೈದಿಕ ಸಂಸ್ಕೃತಿಯ ಆಗಮನದ ಮೊದಲಿನಿಂದಲೂ ಭೂತಾರಾಧನೆಯು ಆಚರಣೆಯಲ್ಲಿದೆ. ಈ ಭೂತಗಳ ಕಥೆಗಳು ವೌಖಿಕವಾಗಿ ಅಥವಾ ಪಾಡ್ದನಗಳಲ್ಲಿ ದಾಖಲಿಸಲ್ಪಟ್ಟಿವೆ. ಈ ಭೂತಗಳೆಲ್ಲ ಹೆಚ್ಚಾಗಿ, ವಿವಿಧ ಅನ್ಯಾಯಗಳ ವಿರುದ್ಧ ಹೋರಾಡಿದ್ದ, 16ನೇ ಶತಮಾನದ ಉತ್ತರಾರ್ಧದಲ್ಲಿ ಜಾತಿ ಮತ್ತು ಊಳಿಗಮಾನ್ಯ ತಾರತಮ್ಯದ ವಿರುದ್ಧ ಹೋರಾಡಿದ್ದ ತುಳುವ ವೀರರಾದ ಕೋಟಿ ಮತ್ತು ಚೆನ್ನಯರಂತಹ ನಿಜವಾದ ವ್ಯಕ್ತಿಗಳಾಗಿವೆ. ಆರಂಭದ ಕೆಲವು ಭೂತಗಳು ಪಂಜುರ್ಲಿ (ಕಾಡುಹಂದಿ) ಮತ್ತು ಪಿಲಿಚಾಮುಂಡಿ (ಹುಲಿ)ಯಂತಹ ಪ್ರಾಣಿಗಳಾಗಿವೆ. ಮುಸ್ಲಿಮ್ (ಅಲಿ ಭೂತ) ಮತ್ತು ಸ್ತ್ರೀ (ಕಲ್ಲುರ್ಟಿ, ಚಾಮುಂಡಿ) ಭೂತಗಳೂ ಇವೆ.
ಪ್ರತಿಯೊಂದು ಭೂತವು ಜೀವನದ ನಿರ್ದಿಷ್ಟ ಅಂಶವನ್ನು ನಿಯಂತ್ರಿಸುತ್ತದೆ ಮತ್ತು ಸೂಕ್ತ ಭೂತವನ್ನು ಪ್ರಾರ್ಥಿಸುವುದು ವ್ಯಕ್ತಿಗೆ ತನ್ನ ಸಮಸ್ಯೆಗಳನ್ನು ಎದುರಿಸಲು ನೆರವಾಗುತ್ತದೆ ಎನ್ನುವುದು ಸಾಮಾನ್ಯ ನಂಬಿಕೆಯಾಗಿದೆ. ‘ಪಿಲಿಚಾಮುಂಡಿ ಕೃಷಿಗದ್ದೆಗಳನ್ನು ಕಾಯುತ್ತದೆ ಮತ್ತು ಬೆಳೆ ಕಳ್ಳತನವನ್ನು ತಡೆಯುತ್ತದೆ. ಪಂಜುರ್ಲಿ ಸದಾಚಾರಗಳ ರಕ್ಷಕವಾಗಿದ್ದರೆ ಕೊರಗ ಜಾನುವಾರುಗಳ ರಕ್ಷಕ ಎಂದು ಭಾವಿಸಲಾಗಿದೆ. ಬೊಬ್ಬರ್ಯ ಸಮುದ್ರ ಮೀನುಗಾರಿಕೆಯನ್ನು ನಿಯಂತ್ರಿಸುತ್ತದೆ’ ಎಂದು ಕರ್ನಾಟಕ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯವು 1971ರಲ್ಲಿ ಪ್ರಕಟಿಸಿರುವ ಭೂತ ಸಂಸ್ಕೃತಿ ಕುರಿತು ಅಧ್ಯಯನವು ಹೇಳುತ್ತದೆ.
ಕೃಪೆ: thenewsminute.com