ಉಡುಪಿ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಡಾ. ವಿ.ಎಸ್. ಆಚಾರ್ಯ ಹೆಸರು
ಎ.11ಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆ

ಉಡುಪಿ : ನಗರದ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಉಡುಪಿಯ ಮಾಜಿ ಸಚಿವ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.
ನಿಗಮದ ಈ ನೂತನ ಬಸ್ನಿಲ್ದಾಣವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎ.11ರ ಸೋಮವಾರ ಅಪರಾಹ್ನ 3.30ಕ್ಕೆ ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಉಡುಪಿ ಬಸ್ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣ ಎಂದು ನಾಮಕರಣಕ್ಕೆ ಶಾಸಕ ಕೆ.ರಘುಪತಿ ಭಟ್ ಮಾಡಿಕೊಂಡ ಮನವಿಯ ಹಿನ್ನೆಲೆ ಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಕ.ರಾ.ರ.ಸಾ.ನಿಗಮದ ನಿರ್ದೇಶಕರ ಮಂಡಳಿ ತನ್ನ ಅನುಮೋದನೆ ನೀಡಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ಮುಖ್ಯಮಂತ್ರಿಗಳು ಡಾ. ವಿ.ಎಸ್. ಆಚಾರ್ಯ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಉಡುಪಿ ಜನತೆಯ ಪರವಾಗಿ ಶಾಸಕ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.
30 ಕೋಟಿ ರೂ. ವೆಚ್ಚದ ಬಸ್ನಿಲ್ದಾಣ
ಬನ್ನಂಜೆಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ್ದ 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಹೊಸ ಬಸ್ ನಿಲ್ದಾಣ ಅಂತರ್ ಜಿಲ್ಲಾ ಹಾಗೂ ಅಂತರ್ರಾಜ್ಯ ಬಸ್ ನಿಲ್ದಾಣವಾಗಿದ್ದು, ಇದನ್ನು ೨೯.೯೫ ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈಗ ನಗರದ ಹೃದಯಭಾಗದಲ್ಲಿ ನಗರಸಭೆಗೆ ಸೇರಿದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬಸ್ ನಿಲ್ದಾಣದಲ್ಲಿ ಒಮ್ಮೆಗೇ ಕೇವಲ ಏಳು ಬಸ್ಗಳನ್ನು ಮಾತ್ರ ನಿಲ್ಲಿಸಲು ಸಾಧ್ಯವಿದ್ದು, ಪ್ರಯಾಣಿಕರಿಗೆ ಯಾವುದೇ ಸಮರ್ಪಕ ಸೌಲಭ್ಯಗಳನ್ನು ಹೊಂದಿಲ್ಲ. ರಾತ್ರಿ ವೇಳೆ ಸುರಕ್ಷತೆಗೂ ಕೊರತೆ ಇತ್ತು.
ಆದರೆ ಇದೀಗ ನಿರ್ಮಾಣಗೊಂಡ ಹೊಸ ಭವ್ಯ ಕಟ್ಟಡ ಎಲ್ಲಾ ಸೌಲಭ್ಯ ಗಳನ್ನು ಹೊಂದಿದ್ದು, ಅಂಡರ್ ಗ್ರೌಂಡ್ ಹಾಗೂ ಗ್ರೌಂಡ್ಫ್ಲೋರ್ ಅಲ್ಲದೇ ಎರಡು ಮಹಡಿಯನ್ನೊಳಗೊಂಡಿದೆ. ಕಟ್ಟದ ಅಂಡರ್ ಗ್ರೌಂಡ್, ಪಾರ್ಕಿಂಗ್ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಸುಮಾರು ೬೪ ಕಾರುಗಳು ಹಾಗೂ ೧೦೦ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದಾಗಿದೆ.
ಗ್ರೌಂಡ್ ಫ್ಲೋರ್ನಲ್ಲಿ ಒಮ್ಮೆಗೆ ೧೮ರಿಂದ ೨೦ ಬಸ್ಗಳನ್ನು ಪಾರ್ಕ್ ಮಾಡಲು ಅವಕಾಶವಿದೆ. ಕಟ್ಟಡದಲ್ಲಿ ಟ್ರಾಫಿಕ್ ನಿಯಂತ್ರಕರ ಕಚೇರಿ, ಪ್ರಯಾಣಿಕರ ತಂಗುದಾಣ, ರಿವರ್ಸ್ವೇಷನ್ ಕೌಂಟರ್, ನೌಕರರ ವಿಶ್ರಾಂತಿ ಗೃಹ ಹಾಗೂ ಕ್ಯಾಂಟೀನ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕಟ್ಟಡದಲ್ಲಿ ಎರಡು ಎಸ್ಕಲೇಟರ್ ಹಾಗೂ ಲಿಫ್ಟ್ಗಳನ್ನು ಅಳವಡಿಸಲಾಗಿದೆ.
ಉಡುಪಿ ಕೆಎಸ್ಸಾರ್ಟಿಸಿ ಬಸ್ನಿಲ್ದಾಣದಿಂದ ೨೭೧ ಬಸ್ಗಳು ವಿವಿಧ ಕಡೆಗಳಿಗೆ ಓಡಾಟ ನಡೆಸುತ್ತಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅವಿರತ ಪ್ರಯತ್ನದಿಂದ ೨೦೧೮ರಲ್ಲಿ ಬಸ್ನಿಲ್ದಾಣದ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ಕಳೆದ ಜನವರಿ ತಿಂಗಳಲ್ಲೇ ಉದ್ಘಾಟನೆಗೊಳ್ಳಬೇಕಾಗಿತ್ತು. ಆದರೆ ಕೋವಿಡ್ ಕಾರಣದಿಂದ ಕೃಷ್ಣಾಪುರ ಪರ್ಯಾಯದಲ್ಲಿ ಭಾಗವಹಿಸುವ ಮುಖ್ಯಮಂತ್ರಿಗಳ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ರದ್ದಾಗಿತ್ತು.







