ಬ್ರಹ್ಮಾವರ: ಮಗನಿಂದ ತಂದೆತಾಯಿಯ ಕೊಲೆಗೆ ಯತ್ನ; ಪ್ರಕರಣ ದಾಖಲು
![ಬ್ರಹ್ಮಾವರ: ಮಗನಿಂದ ತಂದೆತಾಯಿಯ ಕೊಲೆಗೆ ಯತ್ನ; ಪ್ರಕರಣ ದಾಖಲು ಬ್ರಹ್ಮಾವರ: ಮಗನಿಂದ ತಂದೆತಾಯಿಯ ಕೊಲೆಗೆ ಯತ್ನ; ಪ್ರಕರಣ ದಾಖಲು](https://www.varthabharati.in/sites/default/files/images/articles/2022/04/9/331145-1649520237.jpg)
ಬ್ರಹ್ಮಾವರ : ಕ್ಷುಲ್ಲಕ ಕಾರಣಕ್ಕಾಗಿ ಮಗ ತನ್ನ ತಂದೆತಾಯಿಯನ್ನೇ ಕೊಲೆಗೆ ಯತ್ನಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂದಾಡಿ ಗ್ರಾಮದ ಅಮ್ಮ ಶಾಮಿಯಾನ ಹತ್ತಿರ ನಿವಾಸಿ ಜಯರಾಮ ಶೆಟ್ಟಿ ಹಾಗೂ ಹೆಂಡತಿ ಪೂರ್ಣಿಮಾ ಶೆಟ್ಟಿ ಶಿಕ್ಷಕರಾಗಿದ್ದಾರೆ. ಇವರ ಪುತ್ರ ರಜತ್ ಶೆಟ್ಟಿ ಕೆಲಸ ಮಾಡದೇ ಮನೆಯಲ್ಲಿ ಇದ್ದನು. ತಂದೆತಾಯಿ ಆತನಿಗೆ ಬುದ್ದಿ ಹೇಳಿ ಕೆಲಸ ಹುಡುಕಿಕೊಳ್ಳುವಂತೆ ತಿಳಿಸುತ್ತಿದ್ದರು.
ಎ.8ರಂದು ಸಂಜೆ 6.30ಗಂಟೆ ಸುಮಾರಿಗೆ ಜಯರಾಮ ಶೆಟ್ಟಿ ಹಾಗೂ ಪೂರ್ಣಿಮಾ ದಂಪತಿ ಕೆಲಸ ಮುಗಿಸಿ ಮನೆಗೆ ಬಂದಿದ್ದು, ಈ ವೇಳೆ ರಜತ್ ಶೆಟ್ಟಿ, ತಂದೆತಾಯಿಗೆ ಅವಾಚ್ಯವಾಗಿ ಬೈದು ಏಕಾಏಕಿ ತನ್ನ ತಾಯಿಯ ಸೀರೆ ಹಾಗೂ ಕುತ್ತಿಗೆಯಲ್ಲಿದ್ದ ಕರಿಮಣಿ ತಾಳಿಯನ್ನು ಎಳೆದು ತುಂಡು ಮಾಡಿ ಕೈಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಳಿಕ ಕತ್ತಿಯನ್ನು ಹಿಡಿದುಕೊಂಡು ಇಬ್ಬರನ್ನು ಕೊಲೆ ಮಾಡುವುದಾಗಿ ಓಡಿಸಿಕೊಂಡು ಬಂದಿದ್ದಾನೆ. ಈ ಹಲ್ಲೆಯಿಂದ ಗಾಯಗೊಂಡಿರುವ ಪೂರ್ಣಿಮಾ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.