ಪ್ರಜಾಪ್ರಭುತ್ವದ ಆಧಾರಸ್ತಂಭ ಸಂವಿಧಾನ ಇಂದು ಅಪಾಯದಲ್ಲಿದೆ: ಸನತ್ ಕುಮಾರ್ ಬೆಳಗಲಿ

ಸನತ್ ಕುಮಾರ್ ಬೆಳಗಲಿ
ಬೆಂಗಳೂರು, ಎ. 9: ‘ಭಾರತ ದೇಶದಲ್ಲಿ ದುಡಿಯುವ ಜನ ವರ್ಗಗಳಿಗೆ, ಮಹಿಳೆಯರಿಗೆ ರಕ್ಷಾಕವಚವಾದ ಪ್ರಜಾಪ್ರಭುತ್ವದ ಆಧಾರಸ್ತಂಭ ಸಂವಿಧಾನವೇ ಇಂದು ಅಪಾಯದಲ್ಲಿದೆ' ಎಂದು ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಸತನ್ ಕುಮಾರ್ ಬೆಳಗಲಿ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿರುವ ಕೆಬಿಜಿಎನ್ಎಲ್ ಸಮುದಾಯ ಭವನದಲ್ಲಿ ದಸಂಸ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ‘ಮೂಲನಿವಾಸಿಗಳೇ ನೀವೆಷ್ಟು ಬಲ್ಲಿರಿ ನಿಮ್ಮ ಇತಿಹಾಸ?' ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆತಂಕವಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು.
‘ಮುಸ್ಲಿಮ್ ಸಮುದಾಯದವರನ್ನು ಗುರಿಯನ್ನಾಗಿಕೊಂಡು ಹಿಜಾಬ್, ಹಲಾಲ್, ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧದ ಮೂಲಕ ಅವರ ಮೇಲಿನ ದಾಳಿ, ಮುಂದಿನ ದಿನಗಳಲ್ಲಿ ದಲಿತ ಮತ್ತು ಆದಿವಾಸಿಗಳ ಮೇಲೆ ನಡೆಯುವ ಸಾಧ್ಯತೆಗಳಿವೆ. ದಲಿತ ಸಮುದಾಯಗಳು ಈಗಲೇ ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನಗಳು ಭಯಾನಕವಾಗಲಿವೆ ಎಂಬುದರ ಸಂಕೇತಗಳಿವು' ಎಂದು ಸತನ್ ಕುಮಾರ್ ಬೆಳಗಲಿ ಎಚ್ಚರಿಸಿದರು.
‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಈ ಬಗ್ಗೆ ಜನಸಾಮಾನ್ಯರ ಪ್ರತಿಭಟನೆಯನ್ನು ಹತ್ತಿಕ್ಕುವ ದೃಷ್ಟಿಯಿಂದ ಕ್ಷುಲ್ಲಕ ಭಾವನಾತ್ಮಕ ವಿಚಾರಗಳನ್ನು ಮುಂದಿಡಲಾಗುತ್ತಿದೆ. ಎಲ್ಲಿಂದಲೋ ಬಂದವರು ದೇಶದ ಮೂಲನಿವಾಸಿಗಳ ಮೇಲೆ ಸವಾರಿ ಮಾಡಲು ಹಿಂದುತ್ವ, ರಾಷ್ಟ್ರೀಯತೆ ವಿಚಾರಗಳನ್ನು ಮುಂಚೂಣಿಗೆ ತರಲಾಗುತ್ತಿದೆ' ಎಂದು ಅವರು ಟೀಕಿಸಿದರು.
‘ಸಂವಿಧಾನ ಕಲ್ಪಿಸಿರುವ ಸ್ವಾತಂತ್ರ್ಯ, ಸೌಹಾರ್ದತೆ, ಸಹಬಾಳ್ವೆ ನಾಶಕ್ಕೆ ಅಧಿಕಾರಸ್ಥರು ಹುನ್ನಾರ ನಡೆಸಿದ್ದಾರೆ. ಶೋಷಿತ ಸಮುದಾಯದ ಯುವಕರು ಕೋಮುವಾದಿ ವಿಚಾರಧಾರೆಗಳಿಗೆ ಬಲಿಯಾಗದಂತೆ ತಡೆಯಬೇಕು. ಆ ಜವಾಬ್ದಾರಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮೇಲಿದೆ. ಆ ಮೂಲಕ ಸಮಾನತೆ ಪರಿಕಲ್ಪನೆ ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕಿದೆ' ಎಂದು ಸನತ್ ಕುಮಾರ್ ಬೆಳಗಲಿ ಕರೆ ನೀಡಿದರು.
ವೇದಿಕೆಯಲ್ಲಿ ದಸಂಸ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ, ಪ್ರೊ.ಭೂತನಾಳ, ಅನಿಲ್ ಹೊಸಮನಿ, ಅಪ್ಪಗೆರೆ ಸೋಮಶೇಖರ್, ಜಿಲ್ಲಾ ಸಂಚಾಲಕರಾದ ಜೀವನಹಳ್ಳಿ ವೆಂಕಟೇಶ್, ರಾಜಶೇಖರ್ ಕೋಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








