ಮಂಗಳೂರಿನಲ್ಲಿ ಪಾಮ್ ಸಂಡೇ ಸಂಭ್ರಮ

ಮಂಗಳೂರು, ಎ.10: ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತರು ಜರುಸಲೇಂ ನಗರ ಪ್ರವೇಶಿಸಿದಾಗ ಅಲ್ಲಿನ ಜನರು ಅದ್ದೂರಿಯಾಗಿ ಸ್ವಾಗತ ಕೋರಿದ ಮತ್ತು ಅಂದಿನಿಂದ ಮರಣದ ತನಕ ಅವರು ಅನುಭವಿಸಿದ ಸಂಕಷ್ಟಗಳ ನೆನಪಿನಲ್ಲಿ ಆಚರಿಸಲಾಗುವ ಗರಿಗಳ ರವಿವಾರ (ಪಾಮ್ ಸಂಡೆ) ವನ್ನು ದ.ಕ. ಜಿಲ್ಲಾದ್ಯಂತ ಕ್ರೈಸ್ತರು ರವಿವಾರ ಆಚರಿಸಿದರು.
ಚರ್ಚ್ಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಏಸು ಕ್ರಿಸ್ತರಿಗೆ ಘೋಷಣೆ ಹಾಕಿ ಶ್ರದ್ಧಾ ಭಕ್ತಿಯಿಂದ ಬಲಿ ಪೂಜೆ ಅರ್ಪಿಸಿದರು.
ಬಾಲ ಯೇಸುವಿನ ಪುಣ್ಯಕ್ಷೇತ್ರ: ಬಿಕರ್ನಕಟ್ಟೆಯಲ್ಲಿರುವ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ರವಿವಾರ ಪವಿತ್ರ ಗರಿಗಳ ಹಬ್ಬ (ರಾಮಾಂಚೊ ಆಯ್ತರ್) ಆಚರಣೆಯನ್ನು ವಂ. ಜೊಸ್ಸಿ ಡಿಸೋಜರವರು ಕಾರ್ಮೆಲ್ ಮಾತೆಯ ಗವಿಯ ಬಳಿ ತೆಂಗಿನ ಗರಿಗಳನ್ನು ಆಶೀರ್ವದಿಸಿದರು.
ವಂ.ರೊವೆಲ್ ಡಿಸೋಜ, ವಂ.ಸ್ಟಿವನ್ ಲೋಬೊ, ವಂ.ಲ್ಯಾನ್ಸಿ ಲೂವಿಸ್ ವಂ.ಗ್ರೆಗೊರಿ ಡಿಸೋಜ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡರು.
ನಂತರ ಭಕ್ತಾದಿಗಳು ಆಶೀರ್ವದಿಸಿದ ಗರಿಗಳನ್ನು ಹಿಡಿದುಕೊಂಡು ಮೆರವಣಿಗೆಯ ಮೂಲಕ ಬಾಲಯೆಸುವಿನ ಪುಣ್ಯಕ್ಷೇತ್ರದಲ್ಲಿ ಬಲಿಪೂಜೆಯಲ್ಲಿ ಪಾಲ್ಗೊಂಡರು.
ನಗರದ ರೊಝಾರಿಯೊ ಕೆಥೆಡ್ರಲ್ನ್ಲೂ ಪಾಮ್ ಸಂಡೇ ಆಚರಿಸಲಾಯಿತು.
ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಗುರುವಾರ ಏಸು ಕ್ರಿಸ್ತರ ಕೊನೆಯ ಭೋಜನದ ದಿನ, ಶುಭ ಶುಕ್ರವಾರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಈಸ್ಟರ್ ಹಬ್ಬದ ಜಾಗರಣೆ ಹಾಗೂ ರವಿವಾರ ಏಸು ಕ್ರಿಸ್ತರ ಪುನರುತ್ಥಾನದ ದಿನದ ಹಬ್ಬವನ್ನು ಆಚರಿಸಲಾಗುತ್ತಿದೆ.