''ಉಕ್ರೇನ್ ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳ ಕಲಿಕೆ ಮುಂದುವರಿಕೆಗೆ ವಿಶೇಷ ನೀತಿ ರೂಪಿಸಿ''
ಪ್ರಧಾನಿಗೆ ಎಂ.ಬಿ.ಪಾಟೀಲ್ ಪತ್ರ

ವಿಜಯಪುರ, ಎ. 11: ಉಕ್ರೇನ್ ಮೇಲಿನ ರಶ್ಯಾ ದಾಳಿ ಹಿನ್ನೆಲೆಯಲ್ಲಿ ಯುದ್ಧಪೀಡಿತ ಉಕ್ರೇನ್ನಿಂದ ಹಿಂದಿರುಗಿರುವ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಸದ್ಯ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಿದ್ದು, ಅವರ ಶೈಕ್ಷಣಿಕ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿ ಪ್ರಧಾನಿ ಮೋದಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ.ಪಾಟೀಲ ಪತ್ರ ಬರೆದು ಮನವಿ ಮಾಡಿದ್ದಾರೆ.
18 ಸಾವಿರದಷ್ಟು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವೈದ್ಯಕೀಯ ಕಲಿಯುತ್ತಿದ್ದು, ಕರ್ನಾಟಕ ರಾಜ್ಯದ 840 ಮಂದಿ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಇದೀಗ ಕೆಲ ವಿದ್ಯಾರ್ಥಿಗಳಿಗೆ ಬಿಎಲ್ಡಿಇ ಡೀಮ್ಡ್ ವಿವಿಯಿಂದ ಉಚಿತ ಪಾಠ, ತರಬೇತಿ, ಗ್ರಂಥಾಲಯ ಸೌಲಭ್ಯ ಕಲ್ಪಿಸಿದ್ದು, ಯುದ್ಧ ಕೊನೆಗೊಂಡರೂ ಉಕ್ರೇನ್ನಲ್ಲಿ ಸದ್ಯಕ್ಕೆ ಕಾಲೇಜು ಆರಂಭವಾಗುವ ಸೂಚನೆಗಳಿಲ್ಲ.
ಆದುದರಿಂದ ಯುದ್ಧದ ಹಿನ್ನೆಲೆಯಲ್ಲಿ ದೇಶಕ್ಕೆ ಹಿಂದಿರುಗಿರುವ ವಿದ್ಯಾರ್ಥಿಗಳಿಗೆ ಇದೊಂದು ಬಾರಿ ಹಾಲಿ ಇರುವ ವೈದ್ಯಕೀಯ ನಿಯಮಗಳಿಗೆ ವಿನಾಯಿತಿ ನೀಡಿ ಸ್ವದೇಶದಲ್ಲೇ ಎಲ್ಲ ವೈದ್ಯ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸುವ ವಿಶೇಷ ನೀತಿಯನ್ನು ಕೇಂದ್ರ ಸರಕಾರ ರೂಪಿಸಬೇಕು ಎಂದು ಎಂ.ಬಿ.ಪಾಟೀಲ್ ಪತ್ರದಲ್ಲಿ ಮನವಿ ಮಾಡಿದ್ದಾರೆ.





