ಕಸುವನ್ನು ಕಳೆದುಕೊಂಡಿದೆ
ಸಮಕಾಲೀನ ಸನ್ನಿವೇಶದಲ್ಲಿ ಬೀದಿ ನಾಟಕ ಮಾಧ್ಯಮ ಬಳಲಿದೆ. ಅಷ್ಟೇ ಅಲ್ಲ, ಸಮಕಾಲೀನ ವಿದ್ಯಮಾನದಲ್ಲಿ ಯಾವ ಯಾವ ವಿಷಯಕ್ಕೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸುವಷ್ಟರಲ್ಲಿ ಸಮಸ್ಯೆಯ ಸರಣಿ ಬೆಳೆಯುತ್ತಾ, ಬದಲಾಗುತ್ತಾ ಸಾಂಸ್ಕೃತಿಕವಾಗಿ ಪ್ರತಿಕ್ರಿಯಿಸುವ ಒಂದು ಶಕ್ತಿಯುತ ಮಾಧ್ಯಮವಾದ ಬೀದಿನಾಟಕ ತಬ್ಬಿಬ್ಬುಗೊಂಡಿದೆ. 70ರ ದಶಕದ ಬಗ್ಗೆ, ಅಂದಿನ ಕ್ರಿಯಾಶೀಲತೆ ಬದ್ಧತೆ, ಪ್ರತಿಭಟನೆಗಳ ಬಗ್ಗೆ ಮಾತನಾಡುವ ಎಲ್ಲರೂ ಇಂದು ಬೀದಿನಾಟಕವೆಂಬ ಪ್ರತಿಭಟನಾ ಮಾಧ್ಯಮ ತನ್ನ ಕಸುವು ಕಳೆದುಕೊಂಡಿದೆ, ಸೃಜನಶೀಲತೆಯಿಂದ ದೂರವಾಗಿದೆ ಎಂಬ ದೂರನ್ನು ದಾಖಲಿಸುತ್ತಾ, ಮೂರು ದಶಕಗಳ ಹಿಂದಿನ ಪ್ರಕ್ರಿಯೆಗಳ ಬಗ್ಗೆ ವಕಾಲತ್ತು ವಹಿಸುವುದಷ್ಟರಲ್ಲೇ ಕಾಲ ಹಾಕುತ್ತಿದ್ದೇವೆ. 70ರ ದಶಕಕ್ಕಿಂತ ಭಿನ್ನವಾದ, ಅದಕ್ಕಿಂತಲೂ ದಾರುಣವಾದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಮಾಜಕ್ಕೆ ಇಂದು ಬೀದಿ ನಾಟಕದ ಮೂಲಕ ಚಿಕಿತ್ಸೆ ನೀಡಲು ಸಾಧ್ಯವೇ ಎಂಬ ಪ್ರಶ್ನೆಯೂ ನಮ್ಮ ಮುಂದಿದೆ.
ಜಾಗತೀಕರಣದ ಹೆಜ್ಜಾಲದಲ್ಲಿ ನಮ್ಮ ಸಾಂಸ್ಕೃತಿಕ ಕುರುಹುಗಳು ತಮಗೆ ತಾವೇ ನೇಪಥ್ಯಕ್ಕೆ ಸರಿದು, ಸಾಮಾಜಿಕ ಅನಾರೋಗ್ಯದ ವಿಷವರ್ತುಲದಲ್ಲಿ ಸಿಕ್ಕಿ ನರಳುತ್ತಿದೆ. ಅಂದರೆ ಇಂದಿನ ಸಾಮಾಜಿಕ ಜಾಲತಾಣಗಳು, ಸುದ್ದಿ ಮಾಧ್ಯಮಗಳು ಕ್ಷಣ, ಪ್ರತಿಕ್ಷಣ ತಮ್ಮ ವರಸೆ ಬದಲಿಸುತ್ತಾ, ಎಲ್ಲಾ ಆಗುಹೋಗುಗಳಿಗೆ, ಪೂರ್ವಾಪರ ವಿವೇಚನೆ, ಸಾಮಾಜಿಕ ಜವಾಬ್ದಾರಿಗಳನ್ನು ನಗಣ್ಯಗೊಳಿಸಿ, ಎಲ್ಲವನ್ನೂ ಬ್ರೇಕಿಂಗ್ ನ್ಯೂಸ್-ಆಗಿಸಿ, ಆತಂಕಗೊಳಿಸುವ ಉಮೇದಿನಲ್ಲಿ ಮುಗಿಬಿದ್ದಾಗ ಬೀದಿನಾಟಕ ತನ್ನ ಧ್ವನಿ ಎತ್ತಲು ಸಾಧ್ಯವಾದೀತೆ? ನೈತಿಕ ಪೊಲೀಸ್ಗಿರಿ, ಗುಂಪು ಹಲ್ಲೆ, ಹಿಂಸೆ ಹಾಗೂ ಸಮಾಜ ವಿರೋಧಿ ಶಕ್ತಿಗಳನ್ನು ಎದುರಿಸಿ ಕಲಾವಿದರು ಬೀದಿಗಿಳಿಯಬಲ್ಲರೆ...? ಇಳಿಯಬೇಕೆ...? ಇಳಿದರೆ ಅವರಿಗೆ ರಕ್ಷಣೆ ಸಾಧ್ಯವಿದೆಯೇ...? ಬೀದಿನಾಟಕ ಮಾಧ್ಯಮದ ಮೇಲೆ ಹೇರುತ್ತಿರುವ ಒತ್ತಡದಿಂದಾಗಿ ಇಂದು ಬೀದಿನಾಟಕ ಸ್ವಲ್ಪ ರಕ್ಷಣಾತ್ಮಕವಾದ ಹಾಗೂ, ಹೊಂದಾಣಿಕೆಯ ದಾರಿ ಹಿಡಿದಿದೆಯೇ? ಪ್ರಶ್ನಿಸಿಕೊಳ್ಳಬೇಕಿದೆ. ಇಂತಹ ವಿಷಮ ಸನ್ನಿವೇಶದ ನಡುವೆಯೂ ನಾವು ‘ಕೇಸರಿ ಬಿಳಿ ಹಸಿರು’ ಎಂಬ ಬೀದಿನಾಟಕ ಮಾಡಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದೇವೆ. ‘ನ್ಯಾಯಕ್ಕಾಗಿ ಕಾದಿರುವ ಭಾವ್ರಿ’ ಎಂಬ ನಾಟಕ ಮಾಡಿ, ಸಾಮೂಹಿಕ ಅತ್ಯಾಚಾರಿಗಳ ವಿರುದ್ಧ ಪ್ರತಿಭಟಿಸಿದ್ದೇವೆ. ‘ಕುಂಡಲಿ ಮಹಾತ್ಮೆ’ ಮಾಡಿ ಶಿಕ್ಷಣ ಪದ್ಧತಿಯನ್ನು ಟೀಕಿಸಿದ್ದೇವೆ. ‘ವಿಷಾನಿಲ’, ‘ಕಿಲೀನ್ ಇಂಡಿಯ’, ‘ಫ್ರಿಡ್ಜ್ನಲ್ಲಿ ಏನಿದೆ?’ ಮುಂತಾದ ನಾಟಕಗಳ ಮೂಲಕ, ಸಮಕಾಲೀನ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಮೂಡಿಸಲು ಹೆಣಗಾಡಿದ್ದೇವೆ. ತೀರ ಇತ್ತೀಚೆಗೆ ‘ಒಳಿತು ಮಾಡು ಮನುಸ.....’ ಮೂಲಕ ಕೊರೋನ ಕಾಲಘಟ್ಟದ ವೈಪರೀತ್ಯಗಳಿಗೆ ಸ್ಪಂದಿಸಲು ಪ್ರಯತ್ನಿಸಿದ್ದೇವೆ. ಸ್ವಯಂಸ್ಫೂರ್ತಿಯಿಂದ ಬೀದಿನಾಟಕ ಮಾಡುತ್ತಿದ್ದ ಬೀದಿನಾಟಕ ತಂಡಗಳು, ಬದುಕಿನ ನಿರ್ವಹಣೆಗಾಗಿ ಕಾಯಕ ಮಾಡಿಕೊಂಡಿದ್ದ ಸಾವಿರಾರು ಕಲಾವಿದರು, ಇಂದು ಸಾಂಸ್ಕೃತಿಕ ಏಜೆಂಟರು ಹಾಗೂ ಹೊರಗುತ್ತಿಗೆ ಎಂಬ ಕಾರ್ಪೊರೇಟ್ ಪಾಶಕ್ಕೆ ಕೊರಳು ನೀಡಿದ್ದಾರೆ. ಇತ್ತ ಜನಪರವಾದ ಬೀದಿನಾಟಕ ಚಳವಳಿಗೆ ಅಭದ್ರತೆಯ ಭಯ ಒಂದೆಡೆ-ಬದುಕಿಗಾಗಿ ಬೀದಿನಾಟಕವನ್ನು ಆಶ್ರಯಿಸಿದ್ದ ಕಲಾವಿದರ ಬದುಕನ್ನು ವ್ಯವಸ್ಥಿತವಾಗಿ ಉಸಿರುಗಟ್ಟಿಸುತ್ತಿರುವ ವ್ಯವಸ್ಥೆ ಇವೆರಡರ ನಡುವೆ ಬೀದಿನಾಟಕ ಮಾಧ್ಯಮ 70ರ ದಶಕದ ಇತಿಹಾಸವನ್ನು ಮೆಲುಕು ಹಾಕುತ್ತಲೇ ಇದೆ!