ಈಶ್ವರಪ್ಪರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ ಒತ್ತಾಯ

ಉಡುಪಿ : ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹರಕು ನಾಲಿಗೆಯ 40 ಪರ್ಸೆಂಟ್ ಕಮಿಷನ್ ದಂಧೆಯ ರಾಜಕಾರಣಕ್ಕೆ ಬೆದರಿ ಬೆಳಗಾವಿಯ ಹಿಂಡಲಗಾ ನಿವಾಸಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಆತನೇ ಪತ್ರಿಕೆಯವರಿಗೆ ಬರೆದಿಟ್ಟ ಮರಣ- ಪತ್ರದಿಂದ ಋಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಈಗಾಗಲೇ ರಾಜ್ಯದ ಗುತ್ತಿಗೆದಾರರ ಸಂಘದ ಪ್ರಮುಖರು ಈ ಸರಕಾರದ 40 ಪರ್ಸೆಂಟ್ ಕಮಿಷನ್ ದಂಧೆಯ ಬಗ್ಗೆ ಪ್ರಧಾನಿ ಮೋದಿಯವರಿಗೆ ದೂರು ನೀಡಿದ್ದು, ಅವರಲ್ಲಿ ಬಿಜೆಪಿಯ ಕಾರ್ಯಕರ್ತ ಸಂತೋಷ್ ಪಾಟೀಲ್ ಕೂಡ ಒಬ್ಬರಾಗಿದ್ದರು. ಮೋದೀಜಿಯವರಿಂದ ಅವರಿಗೆ ನ್ಯಾಯ ಸಿಕ್ಕಿರಲಿಲ್ಲ. ಮೋದೀಜಿಗೆ ದೂರು ನೀಡಿದ ತಪ್ಪಿಗೆ ರಾಜ್ಯ ಸರಕಾರದ ಕಮಿಷನ್ ದಂಧೆಗೆ ಗುತ್ತಿಗೆದಾರ ಸಂತೋಷ್ ತಾನೆ ಬಲಿಯಾಗ ಬೇಕಾಯ್ತು. ಈ ಮೂಲಕ ತನ್ನದೇ ಪಕ್ಷದ ಕಾರ್ಯಕರ್ತನೊಬ್ಬನ ಆತ್ಮಹತ್ಯೆ ಈ ಸರಕಾರದ ಕಮಿಷನ್ ದಂಧೆಗೆ ಸಾಕ್ಷಿ ನುಡಿದಂತಾಗಿದ್ದು, ಬಿಜೆಪಿಯ ಭ್ರಷ್ಟಾಚಾರದ ಕರಾಳ ಮಗ್ಗಲು ಸಮಾಜದ ಮುಂದೆ ಅನಾವರಣಗೊಂಡಂತಾಗಿದೆ ಎಂದು ಕಾಂಗ್ರೆಸ್ನ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.