ದಿಲ್ಲಿ: ನಕಲಿ ಗೋರಕ್ಷಕರಿಂದ ಥಳಿತಕ್ಕೊಳಗಾದ ಯುವಕ ಸಾವು
![ದಿಲ್ಲಿ: ನಕಲಿ ಗೋರಕ್ಷಕರಿಂದ ಥಳಿತಕ್ಕೊಳಗಾದ ಯುವಕ ಸಾವು ದಿಲ್ಲಿ: ನಕಲಿ ಗೋರಕ್ಷಕರಿಂದ ಥಳಿತಕ್ಕೊಳಗಾದ ಯುವಕ ಸಾವು](https://www.varthabharati.in/sites/default/files/images/articles/2022/04/12/331504-1649781072.jpeg)
ಹೊಸದಿಲ್ಲಿ, ಎ. 12: ಗೋಹತ್ಯೆ ಶಂಕೆಯಲ್ಲಿ 10ರಿಂದ 15 ಮಂದಿಯಿದ್ದ ನಕಲಿ ಗೋರಕ್ಷಕರ ಗುಂಪೊಂದರಿಂದ ಥಳಿತಕ್ಕೊಳಗಾದ 25 ವರ್ಷದ ಯುವಕನೋರ್ವ ಸೋಮವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಥಳಿತದಿಂದ ಯುವಕನ ಇಬ್ಬರು ಗೆಳೆಯರಿಗೆ ಕೂಡ ಗಾಯಗಳಾಗಿವೆ. ಅವರು ಚಿಕಿತ್ಸೆಗೆ ಒಳಗಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎರಡು ಎಫ್ಐಆರ್ ದಾಖಲಿಸಲಾಗಿದೆ ಹಾಗೂ ಐವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ ಯುವಕನನ್ನು ರಾಜಾರಾಮ್ ಎಂದು ಗುರುತಿಸಲಾಗಿದೆ. ಈತ ದ್ವಾರಕ ಸಮೀಪದ ಫಾರ್ಮ್ ಹೌಸ್ ನಲ್ಲಿ ಗೋವು ಪಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಗಾಯಗೊಂಡ ಆತನ ಗೆಳೆಯರು ಇದೇ ಫಾರ್ಮ್ ಹೌಸ್ ನಲ್ಲಿ ನೌಕರರಾಗಿದ್ದರು. ಛಾವ್ಲಾ ಪ್ರದೇಶದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಗುಂಪೊಂದು ಗೋಹತ್ಯೆಯಲ್ಲಿ ಭಾಗಿಯಾಗಿರುವ ಹಾಗೂ ಬೀಫ್ ಮಾರಾಟ ಮಾಡುತ್ತಿರುವ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದೆವು. ಅಲ್ಲಿಗೆ ಪೊಲೀಸರ ತಂಡವೊಂದನ್ನು ಕಳುಹಿಸಿ ಕೊಡಲಾಗಿತ್ತು. ಆದರೆ, ಅವರು ತಲಪುವ ಮೊದಲು ಅಪರಿಚಿತ ವ್ಯಕ್ತಿಗಳು ಮೂವರಿಗೆ ಥಳಿಸಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ರಾಜಾರಾಮ್ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.