ಭಟ್ಕಳ: ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಭಟ್ಕಳ: ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ೨೧ನೇ ದಿನ ತಲುಪಿದ್ದು ಮುಂಡಳ್ಳಿ ಭಾಗದ ಸಮಾಜದ ನೂರಾರು ಜನರು ಇಂದು ಜಾಗಟೆ, ಶಂಖ ನಾದದೊಂದಿಗೆ ಇಲ್ಲಿನ ಬಂದರ ರಸ್ತೆಯಿಂದ ಮೆರವಣಿಗೆಯಲ್ಲಿ ಬಂದು ತಾಲೂಕಾ ಆಡಳಿತ ಸೌಧದ ಪಕ್ಕದಲ್ಲಿ ಧರಣಿ ಮುಂದುವರಿಸಿದರು.
ಮೆರವಣಿಗೆಯು ಶಂಶುದ್ದೀನ್ ಸರ್ಕಲ್ ಬಳಿಯಲ್ಲಿ ಬರುತ್ತಲೇ ಮಂಜಯ್ಯ ಮೊಗೇರ ಎನ್ನುವ ಮಧ್ಯ ವಯಸ್ಕರೋರ್ವರು ತಲೆಯ ಮೇಲೆ ಪೆಟ್ರೋಲ್ ಸುರಿದುಕೊಂಡು ಕೈಯಲ್ಲಿರುವ ಲೈಟರ್ ಆನ್ ಮಾಡಲು ಪ್ರಯತ್ನಿಸಿದ್ದು ತಕ್ಷಣ ಮೆರವಣಿಗೆಯಲ್ಲಿರುವವರು ಹಾಗೂ ಬಂದೋಬಸ್ತಿಗಾಗಿ ಬಂದಿದ್ದ ಪೊಲೀಸರು ಅವರನ್ನು ತಡೆದು ಸಮಾಧಾನಗೊಳಿಸಿದರು.
ನಂತರ ಮೆರವಣಿಗೆಯು ಹೆದ್ದಾರಿಯಲ್ಲಿ ಸಾಗಿ ಧರಣಿ ಪ್ರದೇಶವನ್ನು ತಲುಪಿತು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಫ್. ಕೆ. ಮೊಗೇರ ಅವರು ತಮ್ಮ ಹೋರಾಟ ೨೧ನೇ ದಿನಕ್ಕೆ ಕಾಲಿಟ್ಟರೂ ಸರಕಾರ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವ ಬೇಸರ ಸಮಾಜ ಬಾಂಧವರಿಗೆ ಬಂದಿದೆ. ಪ್ರಮಾಣ ಪತ್ರ ನೀಡದೇ ಇರುವುದರಿಂದ ಸರಕಾರಿ ಸೌಲಭ್ಯದಿಂದ ವಂಚಿತರಾದ ಜನರು ಹತಾಷರಾಗಿದ್ದಾರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರವಾದರೆ ಅದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಹೇಳಿದರು.
ಕಳೆದ ೨೧ ದಿನಗಳಿಂದ ಆಡಳಿತ ಸೌಧದ ಪಕ್ಕದಲ್ಲಿ ಧರಣಿ ನಡೆಸುತ್ತಿರುವ ಮೊಗೇರ ಸಮಾಜದವರ ಅಹವಾಲು ಕೇಳಲು ಜಿಲ್ಲಾಧಿಕಾರಿ ಭಟ್ಕಳಕ್ಕೆ ಭೇಟಿ ನೀಡಿ ಮೊಗೇರ ಸಮಾಜದವರ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮೊಗೇರ ಸಮಾಜದ ಪ್ರಮುಖರಾದ ನ್ಯಾಯವಾದಿ ನಾಗರಾಜ ಈ.ಎಚ್. ಅವರು ಜಿಲ್ಲಾಧಿಕಾರಿಗಳಿಗೆ ಮೊಗೇರ ಸಮಾಜದ ಪ್ರಮಾಣ ಪತ್ರವನ್ನು ನೀಡುವು ಸಲುವಾಗಿ ರಾಜ್ಯದ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ ಹಾಗೂ ರಾಷ್ಟ್ರೀಯ ಜಾತಿ ಪರಿಶೀಲನಾ ಆಯೋಗಗಳ ತೀರ್ಪುಗಳನ್ನು ಉಲ್ಲೇಖಿಸುತ್ತಾ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸುವಂತೆ ಕೋರಿದರು.
ಸಭೆಯಲ್ಲಿ ಮೊಗೇರ ಸಮಾಜದ ಪ್ರಮುಖರಾದ ಎಫ್.ಕೆ.ಮೊಗೇರ, ನಾಗರಾಜ ಈ.ಎಚ್. ದಾಸಿ ಮೊಗೇರ ಬೆಳಕೆ, ಶ್ರೀಧರ ಮೊಗೇರ ಮುಂಡಳ್ಳಿ, ವೆಂಕಟ್ರಮಣ ಮೊಗೇರ, ಜಯಶ್ರೀ ಮೊಗೇರ, ಪುಂಡಲೀಕ ಹೆಬಳೆ, ಶಂಕರ ಹೆಬಳೆ ಮುಂತಾದವರು ಉಪಸ್ಥಿತರಿದ್ದರು.