ಶೇ.5 ಕಮಿಷನ್: ಸಚಿವ ಸುಧಾಕರ್, ಕಾರಜೋಳ ವಿರುದ್ಧ ಕೆಂಪಣ್ಣ ಆರೋಪ
''ಮೇ 25ರಿಂದ ಒಂದು ತಿಂಗಳು ಕಾಮಗಾರಿ ಸ್ಥಗಿತಗೊಳಿಸುತ್ತೇವೆ''
ಗೋವಿಂದ ಕಾರಜೋಳ | ಸುಧಾಕರ್
ಬೆಂಗಳೂರು: ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಆರೋಗ್ಯ ಸಚಿವ ಸುಧಾಕರ್ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಚಾಮರಾಜಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗುತ್ತಿಗೆದಾರರ ಸಂಘದ ಅದ್ಯಕ್ಷ ಡಿ. ಕೆಂಪಣ್ಣ, 'ರಾಜ್ಯ ಸರಕಾರದ ಪ್ರತೀ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಮುಖ್ಯಮಂತ್ರಿ ಕಚೇರಿಯಲ್ಲೇ ಭ್ರಷ್ಟಾಚಾರ ತಾಂಡವಾಡುತ್ತಿದೆ' ಎಂದು ಆರೋಪಿಸಿದ್ದಾರೆ.
'ನಾವು ಸರಕಾರವನ್ನು ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ ಎಂದ ಅವರು, ಆರೋಗ್ಯ ಇಲಾಖೆಯ ಸಚಿವ ಸುಧಾಕರ್ ಅತ್ಯಂತ ಭ್ರಷ್ಟ ಮಂತ್ರಿಯಾಗಿದ್ದು, ಪ್ರತಿ ಕಾಮಗಾರಿಯಲ್ಲೂ ಶೇ.5ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ' ಎಂದು ಗಂಭೀರ ಆರೋಪ ಮಾಡಿದರು.
'ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಹಲವಾರು ಹೋರಾಟ ನಡೆಸಿದರೂ, ಮುಖ್ಯಮಂತ್ರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮೇ 25ರಿಂದ ಒಂದು ತಿಂಗಳು ಕಾಮಗಾರಿ ಸ್ಥಗಿತಗೊಳಿಸುತ್ತೇವೆ' ಎಂದು ತಿಳಿಸಿದರು.