ಪಾವಂಜೆ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಹಳೆಯಂಗಡಿ: ಕುಡಿತದ ಚಟಕ್ಕೆ ತುತ್ತಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾದ ವ್ಯಕ್ತಿಯೋರ್ವ ಪಾವಂಜೆ ಸೇತುವೆಯಿಂದ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ.
ಹೆಜಮಾಡಿ ನಿವಾಸಿ ಬಾಲಕೃಷ್ಣ ಅಮೀನ್ (41) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರು ಮುಲ್ಕಿಯಲ್ಲಿ ತನ್ನ ಸಹೋದರನ ಪ್ರಮೋದ್ ಇಲೆಕ್ಟ್ರಾನಿಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅತಿಯಾದ ಕುಡಿತದ ಚಟ ಹೊಂದಿದ್ದ ಬಾಲಕೃಷ್ಣ ಅಮೀನ್ ಅವರನ್ನು ಮನೆಯವರು ಹಲವೆಡೆ ಮದ್ಯವರ್ಜನ ಶಿಬಿರಗಳಲ್ಲಿ ಸೇರಿಸಿ ಕುಡಿತದ ಚಟದಿಂದ ಮುಕ್ತರನ್ನಾಗಿಸಲು ಯತ್ನಿಸಿದ್ದರು. ಆದರೂ ಕುಡಿತದ ಚಟದಿಂದಾಗಿ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬಾಲಕೃಷ್ಣ ಅವರು ಮಂಗಳವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಮಂದಿ ನಿನ್ನೆಯಿಂದ ಅವರ ಹುಡುಕಾಟದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಬುಧವಾರ ಬೆಳಗ್ಗೆ ಪಾವಂಜೆಯ ನಂದಿನಿ ನದಿಯಲ್ಲಿ ಮೃತದೇಹ ತೇಲುತ್ತಿರುವುದನ್ನು ಕಂಡ ದಾರಿಹೋಕರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮುಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹದ ಗುರುತು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿಯೇ ಅವರು ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.