ಭೂಮಿ ನೀಡಿದ ಮಾಲಕರಿಗೆ ಟಿಡಿಆರ್ ಪ್ರಮಾಣ ಪತ್ರ ವಿತರಿಸಿ: ಹೈಕೋರ್ಟ್

ಬೆಂಗಳೂರು, ಎ.13: ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಹಲವು ವರ್ಷಗಳ ಹಿಂದೆ ಭೂಮಿ ನೀಡಿದ್ದ ಬಿದರಹಳ್ಳಿ ಹೋಬಳಿಯ ಕನ್ನೂರು, ದೊಮ್ಮಸಂದ್ರ ಮತ್ತು ಅದೂರು ಗ್ರಾಮಗಳ ಹತ್ತು ಮಂದಿ ಭೂ ಮಾಲಕರಿಗೆ ಮೂರು ತಿಂಗಳಲ್ಲಿ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಪ್ರಮಾಣಪತ್ರ ವಿತರಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಆದೇಶಿಸಿದೆ.
ರಸ್ತೆ ಅಗಲೀಕರಣಕ್ಕಾಗಿ ಭೂಮಿ ನೀಡಿ ಹಲವು ವರ್ಷ ಕಳೆದಿದ್ದರೂ ಟಿಡಿಆರ್ ವಿತರಿಸಿಲ್ಲ ಎಂದು ಆಕ್ಷೇಪಿಸಿ ವೆಂಕಟೇಶಪ್ಪ ಹಾಗೂ ಇತರೆ ಭೂ ಮಾಲಕರು ಸಲ್ಲಿಸಿದ್ದ ತಕರಾರುಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಹಲವು ವರ್ಷಗಳ ಹಿಂದೆಯೇ ರಸ್ತೆ ಅಗಲೀಕರಣಕ್ಕಾಗಿ ಭೂಮಿ ನೀಡಿದ್ದಾರೆ. ಆದರೆ, ಈವರೆಗೂ ಅವರಿಗೆ ಟಿಡಿಆರ್ ವಿತರಿಸಿಲ್ಲ. ಈ ಬಗ್ಗೆ ಬಿಬಿಎಂಪಿ ಪ್ರಶ್ನಿಸಿದಾಗ, ಅರ್ಜಿದಾರರ ಭೂಮಿಯನ್ನು ರಸ್ತೆ ಅಗಲೀಕರಣಕ್ಕೆ ಬಳಸಿಲ್ಲ. ಅವರ ಭೂಮಿ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ. ಹೀಗಾಗಿ, ಟಿಡಿಆರ್ ನೀಡಲು ಸಾಧ್ಯವಿಲ್ಲ ಎಂದಿದೆ. ಆದರೆ, ಬಿಬಿಎಂಪಿಯ ಈ ಹೇಳಿಕೆ ನ್ಯಾಯಸಮ್ಮತಲ್ಲ ಎಂದಿದೆ.
ಬಿಬಿಎಂಪಿಯ ನಡೆ ಖಾಸಗಿ ವ್ಯಕ್ತಿಯ ಭೂಮಿಯನ್ನು ಅನಧಿಕೃತವಾಗಿ ವಶಪಡಿಸಿಕೊಂಡಂತಿದ್ದು, ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಮೂರು ತಿಂಗಳಲ್ಲಿ ಅರ್ಜಿದಾರರಿಗೆ ಟಿಡಿಆರ್ ವಿತರಿಸಬೇಕು. ಒಂದೊಮ್ಮೆ ವಿಳಂಬವಾದರೆ ಒಂದು ಚದರ ಮೀಟರ್ಗೆ ವಾರಕ್ಕೆ ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ. ಹಾಗೆಯೇ, ಅರ್ಜಿದಾರರು ಬಯಸಿದರೆ ಬಿಬಿಎಂಪಿ ವಶಕ್ಕೆ ನೀಡಿರುವ ಭೂಮಿ ಹಿಂಪಡೆಯಬಹುದು. ಒಂದು ವೇಳೆ ಆ ಕುರಿತು ಅರ್ಜಿದಾರರ ಮನವಿ ಸಲ್ಲಿಸಿದರೆ ಆ ದಿನದಿಂದ ಎಂಟು ವಾರದೊಳಗೆ ಭೂಮಿ ಹಿಂದಿರುಗಿಸಬೇಕು. ತಪ್ಪಿದರೆ ಒಂದು ಚದರ ಮೀಟರ್ಗೆ ವಾರಕ್ಕೆ ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕು ಮತ್ತು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.







