ಅಸ್ಸಾಂ: ಕಾಡು ಅಣಬೆ ತಿಂದ 13 ಮಂದಿ ಮೃತ್ಯು
![ಅಸ್ಸಾಂ: ಕಾಡು ಅಣಬೆ ತಿಂದ 13 ಮಂದಿ ಮೃತ್ಯು ಅಸ್ಸಾಂ: ಕಾಡು ಅಣಬೆ ತಿಂದ 13 ಮಂದಿ ಮೃತ್ಯು](https://www.varthabharati.in/sites/default/files/images/articles/2022/04/14/331656-1649900476.jpg)
ಸಾಂದರ್ಭಿಕ ಚಿತ್ರ
ಗುವಾಹತಿ: ಉತ್ತರ ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿ ವಿಷಪೂರಿತ ಕಾಡು ಅಣಬೆ ಸೇವಿಸಿ ಒಂದು ವಾರದಲ್ಲಿ ಮಗು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಈ ಕಾಡು ಅಣಬೆ ಸೇವಿಸಿದ ಬಳಿಕ ತೀವ್ರ ಅಡ್ಡ ಪರಿಣಾಮಗಳು ಕಂಡುಬಂದಿದ್ದು, ದರ್ಬಾಂಗ್ ಜಿಲ್ಲೆಯ ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಮಂಗಳವಾರದವರೆಗೆ ಕಾಡು ಅಣಬೆ ಮತ್ತು ವಿಷಪೂರಿತ ಅಣಬೆ ಸೇವಿಸಿ ಹಲವು ಅಸ್ವಸ್ಥತೆಗಳಿಂದ 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 8-10 ದಿನಗಳಲ್ಲಿ ಈ ಪೈಕಿ 13 ಮಂದಿ ಮೃತಪಟ್ಟಿದ್ದಾರೆ" ಎಂದು ಎಎಂಸಿಎಚ್ ಅಧೀಕ್ಷಕ ಡಾ.ಪ್ರಶಾಂತ ದಿಹಿಂಗಿಯಾ ವಿವರಿಸಿದ್ದಾರೆ.
"ಈ ಎಲ್ಲ ಸಾವುಗಳು ಲಿವರ್ ಮತ್ತು ಕಿಡ್ನಿ ವೈಫಲದ್ಯದಿಂದ ಸಂಭವಿಸಿವೆ. ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಒಬ್ಬ ರೋಗಿ ದಾಖಲಾಗಿದ್ದು, ಇತರ ಆರು ಮಂದಿ ಆಸ್ಪತ್ರೆಯ ಬೇರೆ ವಿಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ 19 ಮಂದಿಯನ್ನು ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಎಲ್ಲ ರೋಗಿಗಳು ತಿನ್ಸುಕಿಯಾ, ಚರೈಡಿಯೊ, ಶಿವಸಾಗರ ಮತ್ತು ದರ್ಬಾಂಗ್ ಜಿಲ್ಲೆಯವರಾಗಿದ್ದು, ಇವರು ಚಹಾ ತೋಟಗಳಲ್ಲಿ ಕೆಲಸ ಮಾಡುವ ಸಮುದಾಯದವರಾಗಿದ್ದು, ಬೇರೆ ಬೇರೆ ಕಡೆಗಳಲ್ಲಿ ಕಾಡು ಅಣಬೆ ಸೇವಿಸಿದ್ದರು ಎನ್ನಲಾಗಿದೆ.