ಕರಾವಳಿ ಕಡಲ ತೀರದಲ್ಲಿ ಸುರಕ್ಷತಾ ವ್ಯವಸ್ಥೆ ಬಲಪಡಿಸಲು ಮಂಜುನಾಥ್ ಭಂಡಾರಿ ಮನವಿ
ಮಂಗಳೂರು : ಕರಾವಳಿ ಕಡಲ ತೀರಗಳಲ್ಲಿ ದುರ್ಘಟನೆಗಳನ್ನು ತಪ್ಪಿಸಲು ಹೆಚ್ಚಿನ ಸುರಕ್ಷತಾ ಮತ್ತು ಜೀವ ರಕ್ಷಕ ವ್ಯವಸ್ಥೆಗಳನ್ನು ಬಲಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರ್ನಾಟಕ ಕರಾವಳಿ ತೀರವು ಸುಮಾರು ೩೦೦ ಕಿ.ಮೀ. ಉದ್ದದ ಸಮುದ್ರ ತೀರವನ್ನು ಹೊಂದಿದ್ದು, ದ.ಕ., ಉಡುಪಿ, ಉ.ಕ. ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಮುದ್ರತೀರಕ್ಕೆ ಹಲವಾರು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ವಿಹಾರಕ್ಕೆಂದು ಬರುತ್ತಾರೆ. ಆದರೆ ಈ ಸಮುದ್ರ ತೀರದಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣ ಹಲವಾರು ದುರ್ಘಟನೆಗಳು ನಡೆದು ಮಾನವ ಜೀವಗಳು ಹಾನಿಯಾಗಿವೆ. ಇತ್ತೀಚೆಗೆ ಕೇರಳ ರಾಜ್ಯದ ಕೊಟ್ಟಯಂ ಜಿಲ್ಲೆಯ ಮಂಗಳ ಇಂಜಿನಿಯರಿಂಗ್ ಕಾಲೇಜಿನ ಮೂರು ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ನೀರು ಪಾಲಾಗಿ ಪ್ರಾಣ ಕಳೆದು ಕೊಂಡಿದ್ದಾರೆ. ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಪ್ಪಿಸುವ ಸಲುವಾಗಿ ಪ್ರವಾಸಿಗರಿಗೆ ಸಮುದ್ರ ತೀರದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮವಹಿಸಿ ಜೀವರಕ್ಷಕ ವ್ಯವಸ್ಥೆಯನ್ನು ಕಲ್ಪಿಸಬೇಜಯ ಎಂದು ಮನವಿ ಮಾಡಿದ್ದಾರೆ.





