ಭಗವಾನ್ ಮಹಾವೀರ ಜಯಂತಿ ಆಚರಣೆ

ಮಂಗಳೂರು : ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ನಗರದ ಬಜಿಲಕೇರಿಯಲ್ಲಿರುವ ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ಗುರುವಾರ ಭಗವಾನ್ ಮಹಾವೀರರ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮಹಾಪುರುಷ ಭಗವಾನ್ ಮಹಾವೀರರ ಆದರ್ಶಗಳು ಸಮಾಜ ಎಲ್ಲ ವರ್ಗದವರೂ ಅನುಸರಿಸುವಷ್ಟು ಶ್ರೇಷ್ಠವಾದುದು ಎಂದರು.
ಸಮಾಜವನ್ನು ಯಶಸ್ವಿಯಾಗಿ ಕಟ್ಟುವಲ್ಲಿ ಜೈನ ಸಮುದಾಯದ ಕೊಡುಗೆ ಅಪಾರ, ನಗರದ ಜೈಲ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಸರಕಾರದಿಂದ ೧ ಕೋ. ರೂ., ಜೈನ ಬಸದಿಯ ಅಭಿವೃದ್ಧಿಗೆ ೧೦ ಲಕ್ಷ ರೂ. ಅನುದಾನ ಒದಗಿಸಲಾಗುವುದು/ ಪಂಪ್ವೆಲ್ನ ತೆಗೆದಿರಿಸಲಾಗಿರವ ಕಲಶವನ್ನು ಶೀಘ್ರ ಸೂಕ್ತ ಸ್ಥಳದಲ್ಲಿ ಮತ್ತೆ ಪ್ರತಿಷ್ಠಾಪಿಸಿ ಮಹಾವೀರ ವೀರ ವೃತ್ತ ಎಂದು ನಾಮಕರಣ ಮಾಡಲಾಗುವುದು ಎಂದು ಕಾಮತ್ ಹೇಳಿದರು.
ಡಾ. ಸುದರ್ಶನ್ ಕುಮಾರ್ ಜಯಂತಿ ಸಂದೇಶ ನೀಡಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜೈನ್ ಸೊಸೈಟಿ ಉಪಾಧ್ಯಕ್ಷ ಸುರೇಶ್ ಬಲ್ಲಾಳ್, ಕಾರ್ಯದರ್ಶಿ ಪುಪ್ಪರಾಜ್ ಜೈನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.





