ಸಂವಿಧಾನಶಿಲ್ಪಿ ಜಯಂತಿಯನ್ನು ರಸ್ತೆ ಮೇಲೆ ಬಂದು ಆಚರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ: ಮಾಜಿ ಶಾಸಕ ವೈದ್ಯ ಬೇಸರ

ಭಟ್ಕಳ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರರ ಜನ್ಮದಿನಾಚಣೆಯನ್ನು ರಸ್ತೆ ಬದಿಯಲ್ಲಿ ಆಚರಿಸು ವಂತ ಸ್ಥಿತಿ ತಂದಿಟ್ಟಿರುವ ರಾಜ್ಯ ಸರ್ಕಾರ ಸಂವಿಧಾನ ವಿರೋಧಿಯಾಗಿದೆ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಾಂಕಾಳ್ ವೈದ್ಯ ಹೇಳಿದರು.
ಅವರು ಗುರುವಾರ ಮೊಗೇರ್ ಸಮಾಜದ ಪ.ಜಾ ಪ್ರಮಾಣಪತ್ರಕ್ಕಾಗಿ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲೇ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ನಾವು ಪ್ರತಿವರ್ಷ ಬಾಬಾಸಾಹೇಬರ ಜಯಂತಿಯನ್ನು ಸಭಾಭವನದಲ್ಲಿ ಆದ್ದೂರಿಯಾಗಿ ನಡೆಸುತ್ತಿದ್ದೇವು. ಆದರೆ ಈ ದರಿದ್ರ ಸರ್ಕಾರ ಹೈಕೋರ್ಟು ಮತ್ತು ಸುಪ್ರೀಮ್ ಕೋರ್ಟಿನ ಆದೇಶವನ್ನು ಧಿಕ್ಕರಿಸಿ ಮೊಗೇರ್ ಸಮಾಜಕ್ಕೆ ಪ.ಜಾ. ಪ್ರಮಾಣ ನೀಡಲು ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಕಳೆದ 23ದಿನಗಳಿಂದ ಧರಣಿಸತ್ಯಾಗ್ರಹ ನಡೆಸುತ್ತಿದ್ದಾರೆ. ಸಂವಿಧಾನಶಿಲ್ಪಿಯ ಜಯಂತಿ ಈ ರೀತಿಯಾಗಿ ರಸ್ತೆ ಬದಿ ಆಚರಿಸುವ ಪರಿಸ್ಥಿತಿ ನಿರ್ಮಾಣ ಮಾಡಿದ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಸಂವಿಧಾನ ವಿರೋಧಿ ಸರ್ಕಾರದ ಕ್ರಮವನ್ನು ನಾವು ಶಾಂತಿಯಿಂದಲೇ ಪ್ರತಿಭಟಿಸೋಣ ಎಂದು ಕರೆ ನೀಡಿದರು.
ಅಂಬೇಡ್ಕರ್ ಓರ್ವ ಮಹಾನ್ ಹೋರಾಟಗಾರನಾಗಿದ್ದು, ನಾವು ಅವರ ಆದರ್ಶವನ್ನು ಪಾಲಿಸುವವರು, ಅವರ ಮಾರ್ಗದಲ್ಲಿ ಹೋರಾಟ ನಡೆಸುವವರು.ಅವರ ಸಿದ್ದಾಂತಗಳನ್ನು ನಂಬಿ ಬದುಕು ಕಟ್ಟಿಕೊಂಡವರು. ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ಕೈಗೊಳ್ಳುವವರಲ್ಲ, ಕಾನೂನಿನ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆದ್ದ ರಿಂದ ನಾವು ಶಾಂತಿಯುತ ಹೋರಾಟವನ್ನು ಕೈಗೊಳ್ಳೋಣ ಎಂದು ಪ್ರತಿಭಟನಾ ನಿರತರನ್ನು ಕರೆಕೊಟ್ಟರು.
ಸಭಾ ಕಾರ್ಯಕ್ರಮಕ್ಕೂ ಪೂರ್ವ ನೂರಾರು ಮಹಿಳೆಯರು, ಯುವಕರು, ಪುರುಷರು ಬಾಬಾಸಾಹೇಬರ ಫೋಟೊ ಪ್ರದರ್ಶಿಸುತ್ತ ಮೆರವಣೆಗೆ ನಡೆಸಿದರು.









