ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ಆಗಬೇಕು: ಸಿದ್ದರಾಮಯ್ಯ

ಬೆಂಗಳೂರು, ಎ. 14: ‘ಸಚಿವ ಈಶ್ವರಪ್ಪಗೆ ಮಾನ ಮರ್ಯಾದೆ ಇದ್ದಿದ್ದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ನಂ.1 ಆಗಿರುವ ಹಿನ್ನೆಲೆಯಲ್ಲಿ ಕೂಡಲೆ ರಾಜೀನಾಮೆ ಕೊಡಬೇಕಿತ್ತು. ಬಿಜೆಪಿಯವರು ಲಜ್ಜೆಗೆಟ್ಟವರು. ಇವರಿಂದ ಪ್ರಾಮಾಣಿಕ ತನಿಖೆ ಅಸಾಧ್ಯ. ಅವರು ಅಧಿಕಾರದಲ್ಲಿದ್ದರೆ ನ್ಯಾಯ ಸಿಗಲು ಸಾಧ್ಯವೇ? ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವಾಗ ಬೇರೆಯವರನ್ನು ಬಂಧಿಸುತ್ತಿರಲಿಲ್ಲವೇ? ಹೀಗಾಗಿ ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ಆಗಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾಗಿದ್ದು, ಅವರನ್ನು ಸ್ಮರಿಸುತ್ತಾ ಅವರಿಗೆ ನಮನ ಸಲ್ಲಿಸುವ ದಿನ. ಅವರು ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಿದ್ದಾರೆ. ಕೇಂದ್ರ, ರಾಜ್ಯ ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಸಂವಿಧಾನದ ಧ್ಯೇಯೋದ್ದೇಶದಂತೆ ಆಡಳಿತ ನಡೆಸಬೇಕು' ಎಂದು ಹೇಳಿದರು.
‘ಅಂಬೇಡ್ಕರ್ ಅವರ ಸ್ಫೂರ್ತಿ ಸದಾ ನಮ್ಮಲ್ಲಿ ಇರಲಿದೆ. ಪಕ್ಷದ ವತಿಯಿಂದ ಅವರಿಗೆ ಗೌರವ ಸಲ್ಲಿಸಲಾಗಿದ್ದು, ಗಾಂಧೀಜಿ ಅವರಿಗೂ ಗೌರವ ಸಲ್ಲಿಸಲಾಗಿದೆ. ಸಚಿವ ಈಶ್ವರಪ್ಪ ಸಂತೋಷ್ ಪಾಟೀಲ್ ಸಾವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಮೃತ ಸಂತೋಷ್ ಸ್ಪಷ್ಟವಾಗಿ ಈಶ್ವರಪ್ಪರೆ ನನ್ನ ಸಾವಿಗೆ ಕಾರಣ ಎಂದಿದ್ದಾರೆ. ನಿನ್ನೆ ನಮ್ಮ ಪಕ್ಷದ ನಾಯಕರೆಲ್ಲರೂ ಬೆಳಗಾವಿಗೆ ಹೋಗಿ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ನ್ಯಾಯ ಕೊಡಿಸಲು ಹೋರಾಟ ಮಾಡುವುದಾಗಿ ಮಾತು ಕೊಟ್ಟಿದ್ದೇವೆ. ನಾವು ಹೋದಾಗ ಅವರ ತಾಯಿ, ಪತ್ನಿ ಬಹಳ ದುಃಖದಿಂದ ಅಳುತ್ತಾ ಸಂತೋಷ್ ಸಾವಿಗೆ ಈಶ್ವರಪ್ಪರೇ ನೇರ ಹೊಣೆ ಎಂದು ಹೇಳಿದರು. ಅವರ ದುಃಖ ನೋಡಲು ಸಾಧ್ಯವಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
‘ಈಶ್ವರಪ್ಪ ಹಾಗೂ ಅವರ ಆಪ್ತರು ಶೇ.40ರಷ್ಟು ಲಂಚ ಕೇಳಿದ್ದಕ್ಕೆ ನೊಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. 4 ಕೋಟಿ ರೂ.ಕಾಮಗಾರಿಗೆ 1.40 ಕೋಟಿ ರೂ.ಲಂಚ ಕೇಳಿದ್ದಾರೆ. ಇದನ್ನು ಸಂತೋಷ್ ತಾಯಿ ಹಾಗೂ ಪತ್ನಿ ಒಪ್ಪಿಕೊಂಡಿದ್ದಾರೆ. ಈ ಕೆಲಸ ಮಾಡಲು ಸಂತೋಷ್ ಖಾಸಗಿ ಅವರಿಂದ ಸಾಲ ಮಾಡಿ, ಪತ್ನಿಯ ಒಡವೆ ಅಡವಿಟ್ಟು ಕೆಲಸ ಮಾಡಿದ್ದಾರೆ. ಈ ಲಂಚವನ್ನು ಎಲ್ಲಿಂದ ತಂದುಕೊಡಲಿ ಎಂದು ಸಂತೋಷ್ ಪತ್ನಿಯ ಬಳಿ ಅಳಲು ತೋಡಿಕೊಂಡಿದ್ದಾರೆ' ಎಂದು ಅವರು ತಿಳಿಸಿದರು.
ಮಾಧ್ಯಮಗಳಲ್ಲಿ ಈಶ್ವರಪ್ಪ ಹಾಗೂ ಸಂತೋಷ್ ಇರುವ ಫೋಟೋಗಳು ಪ್ರಕಟವಾಗಿವೆ. ಆದರೂ ನನಗೆ ಸಂತೋಷ್ ಗೊತ್ತೇ ಇಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಇನ್ನು ಅಲ್ಲಿನ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಹೇಳುವ ಪ್ರಕಾರ ಅವರು ಹಾಗೂ ಸಂತೋಷ್ ಒಟ್ಟಾಗಿ ಈಶ್ವರಪ್ಪರ ಮನೆಗೆ ಹೋಗಿದ್ದು, ಈಶ್ವರಪ್ಪ ಭರವಸೆ ಮೇರೆಗೆ ಕೆಲಸ ನಡೆದಿದೆ ಎಂದು ಹೇಳಿದ್ದಾರೆ. ಈಶ್ವರಪ್ಪರೇ ವರ್ಕ್ ಆರ್ಡರ್ ನೀಡುವ ಭರವಸೆ ಕೊಟ್ಟಿದ್ದರು ಅದಕ್ಕೆ ನಾನೇ ಸಾಕ್ಷಿ. ನಾವು 2-3 ಬಾರಿ ಭೇಟಿ ಮಾಡಿದ್ದೆವು ಎಂದು ಹೇಳಿದ್ದಾರೆ. ಅಲ್ಲಿಗೆ ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿ ಇದ್ದು, ಕೆಲಸವೂ ಆಗಿದೆ' ಎಂದು ಸಿದ್ದರಾಮಯ್ಯ ವಿವರಿಸಿದರು.
‘ಈಶ್ವರಪ್ಪ ಹೇಳದೇ ಯಾವುದೇ ಗುತ್ತಿಗೆದಾರ 4 ಕೋಟಿ ರೂ.ಕೆಲಸ ಮಾಡಲು ಸಾಧ್ಯವೇ? ಸಂತೋಷ್ ಗೆ ಮೂರುವರೆ ವರ್ಷದ ಹಿಂದೆ ಮದುವೆಯಾಗಿ ಒಂದು ಮಗುವಿದೆ. ಹೀಗಾಗಿ ಈ ಕುಟುಂಬಕ್ಕೆ ಸರಕಾರ 1 ಕೋಟಿ ರೂ.ಪರಿಹಾರ ನೀಡಬೇಕು, ಸಂತೋಷ್ ಪತ್ನಿಗೆ ಸರಕಾರಿ ಕೆಲಸ ನೀಡಬೇಕು. ಕೆಲಸ ನೀಡುವುದು ವಿಳಂಬವಾದರೆ ಸ್ಥಳೀಯ ನಾಯಕರುಗಳು ಯಾರಾದರೂ ತಕ್ಷಣವೇ ಕೆಲಸ ನೀಡಬೇಕು. ಹಾಗೂ ಮುಖ್ಯವಾಗಿ ಈ ಕಾಮಗಾರಿ ಬಿಲ್ ಪಾವತಿ ಮಾಡಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
‘ಕಾಂಗ್ರೆಸ್ ಪಕ್ಷದ ವತಿಯಿಂದ 11 ಲಕ್ಷ ರೂ.ಚೆಕ್ ನೀಡುವುದಾಗಿ ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಇದು ಪಕ್ಷದ ವತಿಯಿಂದ ಆ ಕುಟುಂಬಕ್ಕೆ ಸಣ್ಣ ಸಹಾಯವಷ್ಟೇ. ಈ ಪ್ರಕರಣದ ದೂರಿನಲ್ಲಿ ಸಚಿವರು ಶೇ.40ರಷ್ಟು ಲಂಚ ಆಗ್ರಹಿಸಿದ್ದಾರೆ, ಅದನ್ನು ಕೊಡದ ಹಿನ್ನೆಲೆಯಲ್ಲಿ ಬಿಲ್ ಪಾವತಿ ಮಾಡಿಲ್ಲ ಎಂದು ತಿಳಿಸಿದ್ದು, ಭ್ರಷ್ಟಾಚಾರದ ಪ್ರಸ್ತಾಪ ಸ್ಪಷ್ಟವಾಗಿದ್ದು, ಭ್ರಷ್ಟಾಚಾರ ನಿಗ್ರಹ ಪ್ರಕರಣ ದಾಖಲಾಗಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.
ಲಂಚಕ್ಕೆ ಆಗ್ರಹಿಸಿದ ಈಶ್ವರಪ್ಪರ ಕಿರುಕುಳದಿಂದ ಆತ್ಮಹತ್ಯೆ ಆಗಿದ್ದು ಇದು ಕೊಲೆ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ಸಚಿವರನ್ನು ಬಂಧಿಸಿ, ಅವರನ್ನು ಸಂಪುಟದಿಂದ ವಜಾಗೊಳಿಸಬೇಕಿದೆ. ಆದರೆ ಬೊಮ್ಮಾಯಿ ಅವರು ಸಚಿವರನ್ನು ರಕ್ಷಣೆ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರ ಸರಕಾರದ ಮೇಲೂ ಶೇ.40ರಷ್ಟು ಲಂಚದ ಆರೋಪವಿದ್ದು, ಸಿಎಂ ಇದರ ಭಾಗಿಯಾಗಿ ಸಚಿವರ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಘೇರಾವ್ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಳೆ(ಎ.15)ಯಿಂದ 7 ತಂಡಗಳು ಪ್ರತಿ ಜಿಲ್ಲೆಗೆ ಹೋಗಿ ಪ್ರತಿಭಟನೆ ಮಾಡಲಾಗುವುದು. ನಂತರ ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ' ಎಂದು ಅವರು ಎಚ್ಚರಿಕೆ ನೀಡಿದರು.
‘ಕರ್ನಾಟಕ ಇತಿಹಾಸದಲ್ಲಿ ಶೇ.40ರಷ್ಟು ಕಮಿಷನ್ ತೆಗೆದುಕೊಂಡಂತಹ ಸರಕಾರವನ್ನು ಕಂಡಿರಲಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಇರಲಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಶೇ.40ರಷ್ಟು ಲಂಚ ಆರೋಪವಿದೆ. ಈ ಆರೋಪವನ್ನು ನಾನು ಮಾಡಿದರೆ ರಾಜಕೀಯ ಎಂದು ಹೇಳಬಹುದು. ಆದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಈ ಆರೋಪ ಮಾಡಿದ್ದಾರೆ. ಮೃತ ಸಂತೋಷ್ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಸಂತೋಷ್ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಈಶ್ವರಪ್ಪನವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ’ ಎಂದು ಅವರುತಿಳಿಸಿದರು.
ಸಿಎಂಗೆ ಘೇರಾವ್
‘ಪ್ರಾಥಮಿಕ ವರದಿ ಬರಲೇಬೇಕಾದ ಅಗತ್ಯವಿಲ್ಲ. ಎಫ್ಐಆರ್ ದಾಖಲಾಗಿದೆ. ತನಿಖೆ ಆರಂಭವಾಗಿದ್ದು, ಈಶ್ವರಪ್ಪ ಮೊದಲ ಆರೋಪಿಯಾಗಿದ್ದಾರೆ. ಇನ್ನು ಮೃತ ಸಂತೋಷ್, ಆತನ ಪತ್ನಿ ಅವರ ಹೇಳಿಕೆ ಇದೆ. ಈ ವಿಚಾರದಲ್ಲಿ ಸಚಿವರ ರಕ್ಷಣೆ ಮಾಡಬೇಡಿ, ರಾಜ್ಯವನ್ನು ಭ್ರಷ್ಟಾಚಾರ ರಾಜ್ಯವನ್ನಾಗಿ ಮಾಡಬೇಡಿ ಎಂದು ಆಗ್ರಹಿಸಿ ಸಿಎಂಗೆ ಘೇರಾವ್ ಮಾಡಲಾಗುತ್ತಿದೆ’
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
‘ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಸೇರಿದಂತೆ ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾದ ಅನಿವಾರ್ಯತೆ ಇದ್ದರೂ ಕೋರ್ಟ್ ನಿರ್ಬಂಧವಿದೆ. ಆದರೂ, ದೇಶ ಹಾಗೂ ರಾಜ್ಯಕ್ಕೆ ನ್ಯಾಯ ಒದಗಿಸಿ, ಭ್ರಷ್ಟ ಬಿಜೆಪಿ ಸರಕಾರವನ್ನು ಜನರು ಕಿತ್ತೊಗೆಯಬೇಕಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಸಿಎಂ ಈ ಎಲ್ಲ ವಿಚಾರದಲ್ಲೂ ಭಾಗಿಯಾಗಿದ್ದಾರೆಂದು ನಾವು ನೇರ ಆರೋಪ ಮಾಡಬೇಕಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಇದ್ದರೂ ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಮೃತನ ಮರಣ ಸಂದೇಶ, ಸಹೋದರ, ಪತ್ನಿ, ತಾಯಿ ಎಲ್ಲರೂ ಭ್ರಷ್ಟಾಚಾರ ಕಿರುಕುಳದ ಆರೋಪ ಮಾಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎನ್ನುವಂತೆ ಆರೋಪಿ ಸಚಿವರಿಂದಾಗಿಯೆ ಈ ಪ್ರಕರಣ ನಡೆದಿವೆ. ಹೀಗಾಗಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಬೇಕು, ಜತೆಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಈ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಕನ್ನಡಿಗರು ಇದರ ವಿರುದ್ಧ ಧ್ವನಿ ಎತ್ತಬೇಕು
‘ಹಿರಿಯ ಸಚಿವ ಈಶ್ವರಪ್ಪ ಕೊಲೆಯ ಆರೋಪ ಹೊತ್ತಿದ್ದು, ಎಫ್ಐಆರ್ ದಾಖಲಾಗಿದೆ. ದೇವರಾದ ಬಸವಣ್ಣನ ಮಗನಂತಿದ್ದ ಸಂತೋಷ್ ಹತ್ಯೆಯಾಗಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದ ಸಚಿವ ಕೊಲೆಯ ಆರೋಪ ಹೊತ್ತುಕೊಂಡಾಗ ಅಧಿಕಾರದಲ್ಲಿ ಮುಂದುವರಿಯಲು ಹೇಗೆ ಸಾಧ್ಯ? ಸಂವಿಧಾನದಲ್ಲಿ ಇದಕ್ಕೆ ಎಲ್ಲಿ ಅವಕಾಶ ಕಲ್ಪಿಸಿದೆ? ಅವರನ್ನು ಬಂಧಿಸಿ, ಜೈಲಿಗೆ ಹಾಕದಿರಲು ಹೇಗೆ ಸಾಧ್ಯ? ಪ್ರತಿಯೊಬ್ಬ ಕನ್ನಡಿಗ ಇದರ ವಿರುದ್ಧ ಧ್ವನಿ ಎತ್ತಬೇಕು. ಇದು ರಾಜಕೀಯ ಹೊರಾಟವಲ್ಲ, ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಹೋರಾಟ. ಹೀಗಾಗಿ ಕಾಂಗ್ರೆಸ್ನ ಎಲ್ಲ ನಾಯಕರು ಈ ಹೋರಾಟ ನಡೆಸಲು ನಿರ್ಧರಿಸಿದ್ದಾರೆ’
-ರಣದೀಪ್ ಸಿಂಗ್ ಸುರ್ಜೇವಾಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿ







