ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ಕೊಂಡಿ ಕಳಚಿದೆ: ಶ್ರೀರಾಮರೆಡ್ಡಿ ನಿಧನಕ್ಕೆ ಬಿ.ಕೆ.ಹರಿಪ್ರಸಾದ್ ಸಂತಾಪ

ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಎ.15: ಬಾಗೇಪಲ್ಲಿಯ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಂತಾಪ ಸೂಚಿಸಿದ್ದಾರೆ.
ಕಮ್ಯುನಿಸ್ಟ್ ವಿಚಾರಧಾರೆಗಳಿಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ, ರಾಜ್ಯ ವಿಧಾನಸಭೆಯಲ್ಲಿ ವಿದ್ಯಾರ್ಥಿ-ಯುವಜನರ, ರೈತ-ಕಾರ್ಮಿಕರ ಜನಪರ ಧ್ವನಿಯಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಮ್ಮನ್ನಗಲಿದ್ದಾರೆ. ರಾಜ್ಯದಲ್ಲಿ ಜಿವಿಎಸ್ ಎಂದೇ ಚಿರಪರಿಚಿತರಾದ ಅವರ ನಿಧನದಿಂದ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಲ್ಲಿ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ರಾಜ್ಯದ ಕೊಂಡಿ ಕಳಚಿದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ
ಧುರಿತ ಕಾಲದಲ್ಲಿ ಬದ್ಧತೆಯ ಹೋರಾಟಗಾರನನ್ನು ಈ ನೆಲ ಕಳೆದುಕೊಂಡಿದೆ. ಸಂಗಾತಿ ರೆಡ್ಡಿಯವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಕೆಂಪು ನಮನಗಳು...
1999 ಹಾಗೂ 2004 ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಅತ್ಯತ್ತಮ ಸಂಸದೀಯ ಪಟುವಾಗಿದ್ದರು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಗಟ್ಟಿಧ್ವನಿಯಾಗಿ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ಭಾಗವಹಿಸಿ, ನೂರಾರು ಬಾರಿ ಬಂಧನ, ಜೈಲುವಾಸ ಅನುಭವಿಸಿದ್ದಾರೆ. ವಿದ್ಯಾರ್ಥಿ-ಯುವಜನ,-ರೈತ-ಕೃಷಿ ಕಾರ್ಮಿಕರ ಸಂಗಾತಿಯನ್ನ ಈ ನೆಲ ಕಳೆದುಕೊಂಡು ಬಡವಾಗಿದೆ. ಶ್ರೀರಾಮರೆಡ್ಡಿಯವರಿಗೆ ನನ್ನ ಅಂತಿಮ ಸಂತಾಪ ಹಾಗೂ ಕೆಂಪು ನಮನಗಳು ಎಂದವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.







