ಪಾಲಕ್ಕಾಡ್: ಮಸೀದಿಯಿಂದ ಮರಳುತ್ತಿದ್ದ ಎಸ್ಡಿಪಿಐ ಮುಖಂಡನ ಹತ್ಯೆ
![ಪಾಲಕ್ಕಾಡ್: ಮಸೀದಿಯಿಂದ ಮರಳುತ್ತಿದ್ದ ಎಸ್ಡಿಪಿಐ ಮುಖಂಡನ ಹತ್ಯೆ ಪಾಲಕ್ಕಾಡ್: ಮಸೀದಿಯಿಂದ ಮರಳುತ್ತಿದ್ದ ಎಸ್ಡಿಪಿಐ ಮುಖಂಡನ ಹತ್ಯೆ](https://www.varthabharati.in/sites/default/files/images/articles/2022/04/15/331821-1650016219.png)
Photo: Reporterlive
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರೋರ್ವರನ್ನು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಪಾಲಕ್ಕಾಡ್ ನ ಎಲಪ್ಪುಳ್ಳಿ ನಿವಾಸಿ ಝುಬೈರ್ (47) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಬಂದ ತಂಡವೊಂದು ಅವರನ್ನು ಹತ್ಯೆಗೈದಿದ್ದು ಮಧ್ಯಾಹ್ನ 1:30 ಸುಮಾರಿಗೆ ಕೃತ್ಯ ನಡೆದಿದೆ.
ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶುಕ್ರವಾರದಂದು ಮಸೀದಿಯಲ್ಲಿ ಜುಮಾ ನಮಾಝ್ ನಿರ್ವಹಿಸಿ ತಮ್ಮ ತಂದೆಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಎಲಪ್ಪುಳ್ಳಿ ಚರ್ಚ್ ಸಮೀಪ ಎರಡು ಕಾರುಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡವು ಢಿಕ್ಕಿ ಹೊಡೆದು ಕೊಲೆಗೈದಿದೆ. ಈ ವೇಳೆ ಜೊತೆಯಲ್ಲಿದ್ದ ತಂದೆ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಝುಬೈರ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಾಲಕ್ಕಾಡ್ ನ ಮಾಜಿ ವಿಭಾಗ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಎಸ್ಡಿಪಿಐ ಎಲಪ್ಪುಳ್ಳಿ ಪಂಚಾಯತ್ ಸಮಿತಿ ಸದಸ್ಯರೂ ಆಗಿದ್ದಾರೆ. ಕೊಲೆಯ ಹಿಂದೆ ರಾಜಕೀಯ ಆಯಾಮವಿದೆಯೇ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಈ ಕೊಲೆಯ ಹಿಂದೆ ಆರೆಸ್ಸೆಸ್ ಕೈವಾಡವಿದೆ ಎಂದು ಎಸ್ಡಿಪಿಐ ಆರೋಪಿಸಿದೆ.