ಕೋಮುವಾದ, ಜಾತಿವಾದ ಕಡಿವಾಣಕ್ಕೆ ಸಂವಿಧಾನ ಅವಶ್ಯ: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ
''ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ''

ಬೆಂಗಳೂರು, ಎ.15: ಶೂದ್ರ ಸಮಾಜ ಸಂಘಟನಾತ್ಮಕವಾಗಿ ಹೋರಾಟವನ್ನು ನಡೆಸಬೇಕು. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಮತ್ತು ಸಂವಿಧಾನದಿಂದ ಕೋಮುವಾದ, ಜಾತಿವಾದಕ್ಕೆ ಕಡಿವಾಣ ಹಾಕಬಹುದು ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಶುಕ್ರವಾರ ನಗರದ ಚಿತ್ರಕಲಾ ಪರಿಷತ್ನಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತ ವೇದಿಕೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೆ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಾಭಿಪ್ರಾಯವನ್ನು ಪಡೆಯಲು ನಮ್ಮ ದೇಶದ ಬಹುತ್ವ ಮತ್ತು ಸೌಹಾರ್ದತೆಯನ್ನು ನಾಶ ಮಾಡಲು ಧರ್ಮಾಧಾರಿತ ರಾಜಕಾರಣವನ್ನು ಬಿಜೆಪಿ ಮತ್ತು ಅದರ ಪಳೆಯುಳಿಕೆಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
ಅಂಬೇಡ್ಕರ್ ಜಯಂತಿ ರಾಜಕೀಯ ಹುಟ್ಟುಹಬ್ಬದ ಆಚರಣೆಯಲ್ಲ. ಭಾರತದಲ್ಲಿ ಪ್ರತಿ ಹೋರಾಟಗಳನ್ನು ನಿರೂಪಿಸುವಂತಹ ಅತ್ಯಂತ ಮಹತ್ವದ ದಿನ. 21ನೆ ಶತಮಾನ ಸವಾಲಿನಿಂದ ಕೂಡಿದೆ. ಈ ಸವಾಲು, ಭಾಷೆ, ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಇಡೀ ಸಂವಿಧಾನಕ್ಕೆ ಸವಾಲು ಎಸೆಯುವಂತಹ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ, ಮಠಾಧೀಶರು, ಧರ್ಮಗುರುಗಳು, ಸಾಹಿತಿಗಳನ್ನು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಂ.ಸಿ. ವೇಣುಗೋಪಾಲ್ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಮಂಜುನಾಥ್, ಪತ್ರಕರ್ತ ರವೀಂದ್ರ ಭಟ್, ಸೇರಿದಂತೆ ಮಠಾಧೀಶರು, ಧರ್ಮಗುರುಗಳು, ಸಾಹಿತಿಗಳು, ವಕೀಲರು, ಹಿಂದುಳಿದ ಸಮುದಾಯಗಳ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಬೆಂಗಳೂರು ವಿವಿಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ನಟರಾಜ್ ಹುಳಿಯಾರ್ ಅವರು ಉಪನ್ಯಾಸ ನೀಡಿದರು.
ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ
ಸಂವಿಧಾನದ ಸುಖೀ ರಾಜ್ಯ ಮತ್ತು ಮೌಲ್ಯ, ಧರ್ಮ, ಜಾತಿ, ಪ್ರದೇಶಗಳಲ್ಲಿ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನತೆ ಮತ್ತು ಸಮಾನಾವಕಾಶಗಳನ್ನು ಒದಗಿಸಿಕೊಟ್ಟು ಸಮ ಸಮಾಜವನ್ನು ನಿರ್ಮಾಣ ಮಾಡಬೇಕು. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ. ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಿ ಸಂವಿಧಾನದ ರಕ್ಷಣೆಯನ್ನು ಮಾಡಬೇಕು ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.







