ಬಿಜೆಪಿ ಲೋಫರ್ ಗಳಿಂದಲೂ ಸಿಡಿ ಸೃಷ್ಟಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
'ಸಿದ್ದರಾಮಯ್ಯ ಒಳ್ಳೆಯ ರಾಜಕಾರಣಿ' ಎಂದ ಯತ್ನಾಳ್

ವಿಜಯಪುರ, ಎ.15: ರಾಜಕೀಯ ಕ್ಷೇತ್ರದಲ್ಲಿ ಕೆಟ್ಟ ಸಂಸ್ಕೃತಿ ಹುಟ್ಟಿಕೊಂಡಿದ್ದು, ಅದರಂತೆ ಬಿಜೆಪಿ ಲೋಫರ್ ಗಳಿಂದಲೂ ಸಿಡಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ರಾಜಕೀಯವೇ ಕೆಟ್ಟು ಹೋಗಿದೆ. ಪಕ್ಷಗಳು ಗಣಿಗಾರಿಕೆ, ರಿಯಲ್ ಎಸ್ಟೇಟ್, ಜಾತಿ ಆಧಾರಿತವಾಗಿ ಬಂದ ನಾಯಕರನ್ನೆ ಮೆಚ್ಚಿಕೊಳ್ಳುತ್ತಿರುವುದು ದುರಂತವೇ ಸರಿ.
ಇದರ ನಡುವೆ, ನಾಯಕರ ಸಿಡಿ ತಯಾರಿಸುವ ಸಂಸ್ಕೃತಿ ಹುಟ್ಟಿಕೊಂಡಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಬಿಜೆಪಿ ಲೋಫರ್ಗಳೂ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇದಕ್ಕಾಗಿ ಕೆಲಸ ಮಾಡಲು ಒಂದು ತಂಡವೇ ಹುಟ್ಟಿಕೊಂಡಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಸುಸಂಸ್ಕೃತ ರಾಜಕಾರಣ ಇದೆ. ಎಸ್.ಎಂ ಕೃಷ್ಣ, ಕೆ.ಎಸ್ ನಿಜಲಿಂಗಪ್ಪ ಹಾಗೂ ಸಿದ್ದರಾಯ್ಯ ಕೂಡ ಒಳ್ಳೆಯ ರಾಜಕಾರಣಿ. ಕೆಲವರಿಂದ ಇದು ಹಾಳಾಗುತ್ತಿದೆ. ರಾಜ್ಯದಲ್ಲಿ ದೇವರಾಜ ಅರಸು ಸೇರಿದಂತೆ ಹಲವು ಸಾಧಕರು, ರಾಜಕಾರಣಿಗಳು ಇದ್ದರು. ಆದರೆ, ಈಗ ಬ್ಲಾಕ್ ಮೇಲ್ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ ಹಾಗೆ ಸಿಡಿ ಹಗರಣ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಹಿಂದೆ ಒಂದೇ ತಂಡವಿದೆ. ಮಹಾನಾಯಕರೊಬ್ಬರ ಕೈವಾಡವಿದೆ. ಅವರ ಹೆಸರು ಬಹಿರಂಗವಾಗಬೇಕು ಎಂದರು.







