ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕಾರಿಣಿಯಲ್ಲಿ ಖಂಡನಾ ನಿರ್ಣಯ

ವಿಜಯನಗರ, ಎ. 17: ‘ರಾಜ್ಯದಲ್ಲಿ ಕೇವಲ ನಕಾರಾತ್ಮಕ ಧೋರಣೆಯನ್ನು ಅನುಸರಿಸುವ ವಿಪಕ್ಷ ಕಾಂಗ್ರೆಸ್ ಬಗ್ಗೆ ಒಂದು ಖಂಡನಾ ನಿರ್ಣಯವನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಅಧಿವೇಶನದಲ್ಲಿ ಮಂಡಿಸಿದ್ದು, ಈ ನಿರ್ಣಯವನ್ನು ಲಕ್ಷ್ಮಣ್ ಸವದಿ ಮತ್ತು ಅಪ್ಪಚ್ಚು ರಂಜನ್ ಅನುಮೋದಿಸಿದರು' ಎಂದು ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಹೊಸಪೇಟೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರಕಾರವು ಇಷ್ಟೆಲ್ಲ ಪ್ರಗತಿಗಳನ್ನು ಮಾಡಿದರೂ ಹಾಗೂ ಜನೋಪಯೋಗಿ ಕೆಲಸಗಳನ್ನು ಮಾಡಿದರೂ ಕಳೆದ ಹಲವು ದಿನಗಳಿಂದ ನಕಾರಾತ್ಮಕ ಧೋರಣೆಯಿಂದ ಕಾಂಗ್ರೆಸ್ ಹೇಗೆಲ್ಲ ನಡೆದುಕೊಳ್ಳುತ್ತಿದೆ. ಸವಾಲುಗಳ ಮಧ್ಯದಲ್ಲಿ ರಚನಾತ್ಮಕ ವಿಪಕ್ಷದ ಪಾತ್ರ ವಹಿಸಬೇಕಾದ ಕಾಂಗ್ರೆಸ್, ಅದನ್ನು ಮರೆತು ಸದಾ ಗೊಂದಲದೊಳಗಡೆ ತಾನೂ ಇದೆ. ಹಿಜಾಬ್, ಹಲಾಲ್, ಟಿಪ್ಪು ಸುಲ್ತಾನ್ನ ಪಠ್ಯಕ್ರಮದ ವಿಚಾರವೇ ಇರಬಹುದು.. ಇವೆಲ್ಲ ವಿಚಾರದಲ್ಲೂ ತುಷ್ಟೀಕರಣದ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ' ಎಂದು ದೂರಿದರು.
‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಬಂದ್ ಸಮರ್ಥನೆ, ಶಿವಮೊಗ್ಗದ ಹರ್ಷದ ಕೊಲೆ ಸಂದರ್ಭದಲ್ಲಿ ಮೆರವಣಿಗೆಯ ನಿಂದನೆ, ಕೋವಿಡ್ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರಕಾರ ನಿರ್ವಹಣೆಗೆ ಕೈಗೊಂಡ ಕ್ರಮಕ್ಕೆ ವಿರೋಧ- ಟೀಕೆಗಾಗಿಯೇ ಟೀಕಿಸುವ ಹಾಗೂ ಋಣಾತ್ಮಕ ಚಿಂತನೆಯನ್ನು ಕಾಂಗ್ರೆಸ್ ಮಾಡುತ್ತ ಬಂದಿದೆ ಎಂದು ಈ ನಿರ್ಣಯ ಗಮನ ಸೆಳೆದಿದೆ ಎಂದು ಅವರು ಟೀಕಿಸಿದರು.
‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಆದಾಗ ದರ ಕಡಿಮೆ ಮಾಡಲು ಕೇಂದ್ರ ಸರಕಾರ ತಿಳಿಸಿದಾಗ ಬಿಜೆಪಿಯ ರಾಜ್ಯ ಸರಕಾರಗಳು ಸ್ಪಂದಿಸಿದವು. ಆದರೆ, ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರ, ಛತ್ತೀಸ್ಗಡ ಮೊದಲಾದ ಕಡೆ ದರ ಕಡಿಮೆ ಮಾಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಟೀಕೆಯನ್ನೇ ಮಾಡುತ್ತ ಬಂದಿದೆ. ಕೋವಿಡ್ ವೇಳೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿ ಆಹಾರ ಭದ್ರತೆಯನ್ನು ಕೇಂದ್ರ ನೀಡಿದ್ದರೂ ಅದನ್ನೂ ಕಾಂಗ್ರೆಸ್ಸಿಗರು ಟೀಕಿಸುತ್ತಾ ಬಂದಿದ್ದಾರೆಂದು ವಾಗ್ದಾಳಿ ನಡೆಸಿದರು.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಘಟನೆಯ ವಿಸ್ತಾರ ಮತ್ತು ಬಿಜೆಪಿಗೆ ವಿಶ್ವ ಮಾನ್ಯತೆ ಲಭಿಸಿದ ಕುರಿತು ಗಮನ ಸೆಳೆದರು. ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳಿಗೆ ಭಾರತದ ಅವಶ್ಯಕತೆ ಹೆಚ್ಚಾಗಿದೆ. ವರ್ತಮಾನದ ಜಗತ್ತಿನ ರಾಜಕಾರಣದಲ್ಲಿ ಭಾರತದ ಪಾತ್ರದ ಕುರಿತು ಸವಿವರವಾದ ವಿಷಯ ಮಂಡನೆ ಮಾಡಿದರು. ನೌಕರಶಾಹಿಯ ಕಾರ್ಯ ವಿಸ್ತಾರ ಮತ್ತು ಅವರಿಗೆ ಹೊಳಪನ್ನು ನೀಡುವ ನಿಟ್ಟಿನಲ್ಲಿ ಭಾರತದ ಪ್ರಯತ್ನದ ಕುರಿತು ಅವರು ಬೆಳಕು ಚೆಲ್ಲಿದ್ದಾರೆಂದು ವಿವರಿಸಿದರು.
ರಶ್ಯಾ-ಉಕ್ರೇನ್ ಯುದ್ಧ ಮತ್ತು ಆ ಯುದ್ಧ ಶಮನದ ನಿಟ್ಟಿನಲ್ಲಿ ಪ್ರಧಾನಿಯವರ ಪಾತ್ರದ ಕುರಿತು ವಿವರ ನೀಡಿದ್ದಾರೆ. ಈಶಾನ್ಯ ಭಾರತದಲ್ಲಿ ಬಿಜೆಪಿಯ 8 ಸರಕಾರಗಳ ರಚನೆ, ಅದರ ಹಿಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಅವರು ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು. ರಾಜ್ಯ ವಕ್ತಾರ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹಾಗೂ ವಕ್ತಾರ ಎಂ.ಬಿ.ಜಿರಲಿ ಉಪಸ್ಥಿತರಿದ್ದರು.







