ಅಲ್ಪಸಂಖ್ಯಾತರು, ದಲಿತರ ವಿರುದ್ಧ ಪ್ರಾಯೋಜಿತ ಹಿಂಸಾಚಾರಕ್ಕೆ ಸರಕಾರ ಕಡಿವಾಣ ಹಾಕಬೇಕು: 330 ಗಣ್ಯರಿಂದ ಬಹಿರಂಗ ಪತ್ರ

ಬೆಂಗಳೂರು, ಎ.18: ಮುಸ್ಲಿಂ, ಕ್ರಿಶ್ಚಿಯನ್ ಮತ್ತು ದಲಿತ ಸಮುದಾಯಗಳ ವಿರುದ್ಧ ಪ್ರಾಯೋಜಿತ ಹಿಂಸಾಚಾರ ಮತ್ತು ತಾರತಮ್ಯ ನಡೆಯುತ್ತಿದೆ. ನ್ಯಾಯಾಂಗ ಸೇರಿದಂತೆ ಮಾಧ್ಯಮ, ಪೊಲೀಸ್ ಮತ್ತು ಅಧಿಕಾರಶಾಹಿ ಇದರಲ್ಲಿ ಭಾಗಿದಾರರಾಗಿದ್ದಾರೆ ಎಂದು ಟೀಕಿಸಿ, ನ್ಯಾಯಾಧೀಶರು, ಚಿಂತಕರು, ಪ್ರಗತಿಪರ ಹೋರಾಟಗಾರರು ಸೇರಿದಂತೆ 330 ಮಂದಿ ಗಣ್ಯರು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ರಾಜ್ಯದಲ್ಲಿ ದುರ್ಬಲ ಸಮುದಾಯಗಳ ವಿರುದ್ಧ ಈ ರೀತಿಯ ಅಸ್ಪೃಶ್ಯತೆ, ಉದ್ದೇಶಿತ ಕಿರುಕುಳ ಮತ್ತು ತಾರತಮ್ಯವನ್ನು ತಡೆಗಟ್ಟಲು ಮತ್ತು ಪರಿಹರಿಸಲು ಕರ್ನಾಟಕ ಸರಕಾರವು ಪ್ರಾಥಮಿಕ ಜವಾಬ್ದಾರಿಯಾಗಿದೆ. ಆದರೆ ರಾಜ್ಯ ಬಿಜೆಪಿ ಸರಕಾರವೇ ಈ ಸಾಮಾಜಿಕ ಅನಿಷ್ಟಗಳಿಗೆ ಬೆಂಬಲ ಸೂಚಿಸುವಂತಿದೆ, ಇದರಿಂದ ದೇಶವು ದುರಂತದತ್ತ ದಾಪುಗಾಲಿಡುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ಪೋಲಿಸರು ಎಫ್ಐಆರ್ಗಳನ್ನು ದಾಖಲಿಸಲು, ಸಾಕ್ಷಿಗಳಿಗೆ ರಕ್ಷಣೆ ನೀಡಲು ವಿಫಲರಾಗಿದ್ದು, ಅವರು ಬಲಪಂಥೀಯ ಆಕ್ರಮಣದ ಮಧ್ಯವರ್ತಿಗಳಾಗಿ ವರ್ತಿಸುತ್ತಿದ್ದಾರೆ. ಜನಜೀವನದ ಮೇಲೆ ದಾಳಿಗಳನ್ನು ಮಾಧ್ಯಮಗಳು ತಿರುಚುವುದನ್ನು ಬಿಟ್ಟು, ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು.
ದ್ವೇಷದ ಭಾಷಣ, ಹಿಂಸಾಚಾರದ ಕೆಟ್ಟ ಹೇಳಿಕೆಗಳು, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಗಳ ವಿರುದ್ಧ ರಾಜ್ಯ ಸರಕಾರವು ಕಾರ್ಯನಿರ್ವಹಿಸಬೇಕಾಗಿದೆ. ಹಿಂಸಾಚಾರ ಮತ್ತು ತಾರತಮ್ಯಕ್ಕೆ ಒಳಗಾಗುವ ಅಪಾಯವನ್ನು ಉಲ್ಬಣಗೊಳಿಸುವವರ ವಿರುದ್ಧ ರಾಜ್ಯದ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು.
ಕೋಮುವಾದ ಮತ್ತು ಜಾತೀಯತೆಯು ಕೋವಿಡ್ ಸಾಂಕ್ರಾಮಿಕ ರೋಗದಂತಾಗಿದ್ದು, ಅಷ್ಟೇ ತೀವ್ರವಾಗಿ ಹರಡುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಈ ಕೋಮು ಮತ್ತು ಜಾತಿ ಹಿಂಸಾಚಾರವನ್ನು ನಾವು ಖಂಡಿಸುತ್ತಿದ್ದು, ಆತ್ಮಸಾಕ್ಷಿಯಿರುವ ಎಲ್ಲಾ ಸಂಬಂಧಪಟ್ಟ ವ್ಯಕ್ತಿಗಳು ಸೇರಿದಂತೆ ಸಂಘಟನೆಗಳು ಮೌನವಾಗಿರಬಾರದು ಎಂದು ಅವರು ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳು ಆರ್ಥಿಕ ಹೊರೆಯಲ್ಲ
ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳನ್ನು ಆರ್ಥಿಕ ಹೊರೆ ಎಂಬಂತೆ ರಾಜ್ಯ ಸರಕಾರವು ಪರಿಗಣಿಸಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸ್ಕಾಲರ್ ಶಿಪ್ ವಿತರಿಸುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ಇಂತಹ ಆರ್ಥಿಕ ಹೊರೆ ಹೊರೆಸುವುದು ಸರಿಯಲ್ಲ. ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಪಡೆಯುವ ವಿಧಾನವನ್ನು ಸರಳೀಕರಿಸಿ, ತುರ್ತಾಗಿ ವಿದ್ಯಾರ್ಥಿವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.







